Kolar: ನೀರಿಗೆ ಇಲಿ ಪಾಷಾಣ ಹಾಕಿದ ವಿದ್ಯಾರ್ಥಿ: ಕಾರಣ ಕೇಳಿ ಪೊಲೀಸರು ಶಾಕ್!
ಕೋಲಾರ ನವೆಂಬರ್ 28: ಶಾಲೆ ರಜೆ ಸಲುವಾಗಿ ವಿದ್ಯಾರ್ಥಿಯೊಬ್ಬ ಮಾಡಿದ ಕೃತ್ಯದಿಂದಾಗಿ ಮೂವರು ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಬಂಗಾರಪೇಟೆ ತಾಲ್ಲೂಕು ದೊಡ್ಡಪೊನ್ನಾಂಡಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದಿದೆ.
ಶಾಲೆ ರಜೆ ಸಲುವಾಗಿ ಒಂಬತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ನೀರಿಗೆ ಇಲಿ ಪಾಷಾಣ ಹಾಕಿದ್ದಾನೆ. ನೀರನ್ನು ಕುಡಿದ ಶಾಲೆಯ ಮೂವರು ಮಕ್ಕಳು ಅಸ್ವಸ್ಥರಾಗಿದ್ದಾರೆ. ಈ ಮಕ್ಕಳನ್ನು ಸದ್ಯ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಕಾಮಸಮುದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿದ್ಯಾರ್ಥಿಯ ಮಾಸ್ಟರ್ ಮೈಂಡ್ನಿಂದಾಗಿ ಬಡಪಾಯಿ ಮಕ್ಕಳು ಆಸ್ಪತ್ರೆ ಸೇರುವಂತಾಗಿದೆ. ಅಷ್ಟಕ್ಕೂ ವಿದ್ಯಾರ್ಥಿ ಇಥಹದೊಂದು ಪ್ಲ್ಯಾನ್ ಮಾಡಲು ಕಾರಣ ಏನು ಗೊತ್ತಾ? ಸಾಮಾನ್ಯವಾಗಿ ಶಾಲೆಗಳಿಗೆ ರಜೆಯನ್ನು ಕೊಟ್ಟಾಗ ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ಹೋಗುತ್ತಾರೆ. ತಮ್ಮ ಪೋಷಕರೊಂದಿಗೆ ಕಾಲ ಕಳೆಯುತ್ತಾರೆ. ಇದಕ್ಕೆಲ್ಲಾ ಶಾಲೆಗೆ ರಜೆ ಸಿಗಬೇಕು. ಒಂದು ವೇಳೆ ರಜೆ ಇಲ್ಲವಾದಲ್ಲಿ ರಜೆ ಕೊಡುವವರೆಗೂ ಕಾಯಬೇಕು.
ಆದರೆ ವಿದ್ಯಾರ್ಥಿ ಲೆಕ್ಕಾಚಾರ ಬೇರೆ ಆಗಿತ್ತು. ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಏನಾದರೂ ತೊಂದರೆಯಾದರೆ ಶಾಲೆಗೆ ರಜೆ ನೀಡ್ತಾರೆ. ಆಗ ತಾನೂ ಕೂಡ ರಜೆ ತೆಗೆದುಕೊಂಡು ತಂದೆ-ತಾಯಿಯನ್ನು ಭೇಟಿ ಮಾಡಲು ಊರಿಗೆ ಹೋಗಬಹುದು ಎಂದು ಆತ ಯೋಚಿಸಿದ್ದಾನೆ. ಇದಕ್ಕಾಗಿ ಆತ ಕುಡಿಯುವ ನೀರಿಗೆ ಇಲಿ ಪಾಷಾಣ ಹಾಕಿದ್ದಾನೆ.
ಘಟನೆಯ ಬಳಿಕ ವಿದ್ಯಾರ್ಥಿಯನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ಈ ವಿದ್ಯಾರ್ಥಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾನೆ ಎಂದು ಪೊಲೀಸರಿಗೆ ತನಿಖೆ ವೇಳೆ ತಿಳಿದು ಬಂದಿದೆ. ಈ ವಿದ್ಯಾರ್ಥಿಯ ಪೋಷಕರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಮಗ ಚೆನ್ನಾಗಿ ಓದಲೆಂದು ಹಾಸ್ಟೆಲ್ ಸೇರಿಸಿದ್ದಾರೆ. ಆದರೆ ಈ ವಿಷಯ ತಿಳಿದು ಪೋಷಕರಿಗೆ ಸಿಡಿಲು ಬಡಿದಂತಾಗಿದೆ. ಸದ್ಯ ವಿದ್ಯಾರ್ಥಿಗೂ ಚಿಕಿತ್ಸೆ ನೀಡಲಾಗುತ್ತಿದೆ.












Click it and Unblock the Notifications