ಕೋಲಾರ; ಸೋಲಾರ್ ಪೆನ್ಸಿಂಗ್ಗೂ ಬಗ್ಗದ ಆನೆಗಳು, ರೈತರಿಗೆ ಬೆಳೆಯ ಚಿಂತೆ
ಕೋಲಾರ, ಮಾರ್ಚ್ 19: ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿಯಲ್ಲಿ ಆನೆ ದಾಳಿಗೆ ರೈತರು ತತ್ತರಿಸಿ ಹೋಗಿದ್ದಾರೆ. ನಿರಂತರವಾಗಿ ದೊಣಿಮಡುಗು ಗ್ರಾಮ ಪಂಚಾಯಿತಿಗೆ ಸೇರುವ ಕಾಡು ಪ್ರದೇಶದ ಅಂಚಿನಲ್ಲಿರುವ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ, ವಾರಕ್ಕೆ ಎರಡುಮೂರು ಬಾರಿ ಆನೆಗಳ ದಾಳಿಯಿಂದ ರೈತರ ಬೆಳೆಗಳು ನಾಶವಾಗುತ್ತಿವೆ.
ಅರಣ್ಯ ಇಲಾಖೆಗೂ ಆನೆ ಹಾವಳಿ ತಡೆಯುವುದು ಸವಾಲಾಗಿದೆ. ಇದೀಗ ರೈತರ ಬೆಳೆಗಳನ್ನು ರಕ್ಷಿಸಲು ಸೋಲಾರ್ ಪೆನ್ಸಿಂಗ್ ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಿದ್ದು, ಇದಕ್ಕೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯು ಕೈ ಜೋಡಿಸಿದೆ. ಆನೆ ದಾಳಿಯೂ ಮುಂದುವರೆದಿದೆ.
ಅತಿ ಹೆಚ್ಚು ಕಾಡಾನೆ ಹಾವಳಿ ಇರುವ ತಳೂರು ಗ್ರಾಮದ ಅರಣ್ಯ ಪ್ರದೇಶದ ಪಕ್ಕದಲ್ಲಿರುವ ರೈತ ಸಂಪಂಗಿಗೌಡ ಅವರು 4 ಎಕರೆ ಜಮೀನಿನ ಸುತ್ತಮುತ್ತ ಸೋಲಾರ್ ಪೆನ್ಸಿಂಗ್ ವ್ಯವಸ್ಥೆಯನ್ನು ಉಚಿತವಾಗಿ ನಿರ್ಮಿಸಲಾಗಿದೆ. ಆನೆಗಳು ಪೆನ್ಸಿಂಗ್ಗೆ ತಾಕಿದಲ್ಲಿ ಒಂದು ಕ್ಷಣ ಶಾಕ್ ಹೊಡೆಯುವ ಅನುಭವ ಉಂಟಾಗಿ ಹತ್ತಿರ ಸುಳಿಯುವ ಸಾಧ್ಯತೆ ಕಡಿಮೆಯಾಗಿದೆ.

ಕಳೆದ ಒಂದು ವಾರದಿಂದ ಸಂಪಂಗಿಗೌಡ ಅವರ ತೋಟ ಸೇರಿದಂತೆ ಅಕ್ಕ ಪಕ್ಕದಲ್ಲೇ ಇರುವ 15 ರೈತರ ತೋಟಗಳಿಗೆ ಆನೆಗಳು ಲಗ್ಗೆಯಿಡಲು ಸಾಧ್ಯವಾಗಿಲ್ಲ. ಇನ್ನು ಸೋಲಾರ್ ಪೆನ್ಸಿಂಗ್ ಹಾಕಿರುವ ಕಡೆಯಿಂದ ಪ್ರತಿಸಲ ಗ್ರಾಮಕ್ಕೆ ಆಗಮಿಸುತ್ತಿದ್ದ ಆನೆಗಳು, ಇದೀಗ ಬೇರೆ ದಾರಿಯಿಂದ ಗ್ರಾಮಗಳಿಗೆ ಲಗ್ಗೆಯಿಡುತ್ತಿದ್ದು ಮತ್ತೊಮ್ಮೆ ರೈತರಿಗೆ ಹಾಗೂ ಅರಣ್ಯ ಇಲಾಖೆಗೆ ತಲೆನೋವು ತಂದಿವೆ.
ಈ ಬಗ್ಗೆ ಮಾತನಾಡಿರುವ ರೈತ ಸಂಪಂಗಿಗೌಡ, "ನಮ್ಮ ತೋಟಕ್ಕೆ ಸೋಲಾರ್ ಪೆನ್ಸಿಂಗ್ ವ್ಯವಸ್ಥೆ ಮಾಡಿರುವ ಕಾರಣ ಆನೆಗಳು ಲಗ್ಗೆಯಿಡಲು ಸಾಧ್ಯವಾಗುತ್ತಿಲ್ಲ. ಆದರೆ, ಸುತ್ತಮುತ್ತಲ ಪ್ರದೇಶದಲ್ಲಿ ಆನೆಗಳು ನುಗ್ಗಲು ಆರಂಭಿಸಿದೆ. ಹೀಗಾಗಿ ಶಾಶ್ವತ ಪರಿಹಾರಕ್ಕೆ ಮಾಡಬೇಕು" ಎಂದು ಮನವಿ ಮಾಡಿದ್ದಾರೆ.

ಸೊಲಾರ್ ಪೆನ್ಸಿಂಗ್ ಕುರಿತು ಮಾತನಾಡಿರುವ ಜಿಲ್ಲಾ ಅರಣ್ಯಾಧಿಕಾರಿ ಶಿವಶಂಕರ ಅವರು, "ಪೆನ್ಸಿಂಗ್ ಹಾಕಿರುವ ಕಡೆ ಬಿಟ್ಟು ಆನೆಗಳು ಬೇರೆಡೆಯಿಂದ ಪ್ರವೇಶಿಸಿ ಬೆಳೆನಾಶ ಮಾಡುತ್ತಿರುವ ಮಾಹಿತಿ ಬಂದಿದೆ, ಆನೆ ಹಾವಳಿ ಇರುವ ಅರಣ್ಯ ಪ್ರದೇಶದಲ್ಲಿ, 5 ಕಿ. ಮೀ. ಉದ್ದ ಸೋಲಾರ್ ಪೆನ್ಸಿಂಗ್ ಅಳವಡಿಸಲು ಅನುದಾನ ಬಂದಿದ್ದು, ಈಗಾಗಲೇ ಖಾಸಗಿಯವರಿಗೆ ಗುತ್ತಿಗೆಯನ್ನು ನೀಡಲಾಗಿದೆ, ಒಂದು ತಿಂಗಳೊಳಗೆ ಕಾಮಗಾರಿಯು ಆರಂಭವಾಗಲಿದೆ" ಎಂದು ಹೇಳಿದ್ದಾರೆ.












Click it and Unblock the Notifications