ನಿಮ್ಮ ಖಾತೆಗೆ ಮೋದಿ ಹಣ ಹಾಕಿಲ್ಲ, ನಾವು ಹಾಕುತ್ತೇವೆ: ರಾಹುಲ್ LIVE
ಕೋಲಾರ, ಏಪ್ರಿಲ್ 13: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ರಾಜ್ಯಕ್ಕೆ ಆಗಮಿಸಿದ್ದು, ಕೋಲಾರ, ಚಿತ್ರದುರ್ಗ ಮತ್ತು ಮೈಸೂರಿನಲ್ಲಿ ಪ್ರಚಾರ ಸಭೆಗಳನ್ನು ನಡೆಸುತ್ತಿದ್ದಾರೆ.
ಇದೀಗ ಕೋಲಾರಕ್ಕೆ ಆಗಮಿಸಿರುವ ರಾಹುಲ್ ಗಾಂಧಿ ಅವರು ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ಪರ ಪ್ರಚಾರ ಆರಂಭಿಸಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಮಲ್ಲಿಕಾರ್ಜುನ ಖರ್ಗೆ, ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ, ಸ್ಥಳೀಯ ಜೆಡಿಎಸ್ ಮುಖಂಡರು ಸಹ ಭಾಗಿಯಾಗಿದ್ದಾರೆ.

ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ಈ ಚುನಾವಣೆ ಎರಡು ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ, ಒಂದು ಕಡೆ ಕೋಮುವಾದಿ ಬಿಜೆಪಿ, ಆರ್ಎಸ್ಎಸ್ ಇದ್ದರೆ ಮತ್ತೊಂದೆಡೆ ಬಡವರ ಪರ ಇರುವ ಕಾಂಗ್ರೆಸ್ ಇದೆ ಎಂದು ರಾಹುಲ್ ಗಾಂಧಿ ಹೇಳಿದರು.
ಕೇಂದ್ರ ಸರ್ಕಾರದ 24 ಲಕ್ಷ ನೌಕರರಿಯನ್ನು ನಾವು ಅಧಿಕಾರಕ್ಕೆ ಬಂದ ಒಂದು ವರ್ಷದಲ್ಲಿ ತುಂಬುತ್ತೇವೆ. ಗ್ರಾಮ ಪಂಚಾಯಿತಿ ಹಂತದಲ್ಲಿ 30 ಲಕ್ಷ ನೌಕರಿಯನ್ನು ನಾವು ಭರ್ತಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಬೆಂಗಳೂರು ಸ್ಟಾರ್ಟ್ ಅಪ್ ಹಬ್, ಆದರೆ ಮೋದಿ ಅವರ ನೀತಿಗಳಿಂದ ಬೆಂಗಳೂರಿನ ಉತ್ಸಾಹಿ ಯುವಕರು ಆತಂಕದಲ್ಲಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಬಂದರೆ ಹೊಸ ಉದ್ಯಮ ಸ್ಥಾಪಿಸುವ ಯುಕವರಿಗೆ ಅನುಕೂಲಕರ ವಾತಾವರಣ ನಿರ್ಮಿಸಿಕೊಡುತ್ತೇವೆ, ಯಾವುದೇ ಪರವಾನಗಿ ಇಲ್ಲದೆ ಉದ್ಯಮ ಸ್ಥಾಪಿಸುವ ಅವಕಾಶ ಮಾಡಿಕೊಡುತ್ತೇವೆ.
ಭಾರತದ ಬ್ಯಾಂಕುಗಳ ಕೀಲಿ ಕೈ ಯನ್ನು ಅಂಬಾನಿ, ಚೋಕ್ಸಿ, ನೀರವ್ ಮೋದಿ ಅವರ ಕೈಗೆ ಕೊಟ್ಟಿದ್ದಾರೋ ಆ ಕೀಲಿ ಕೈ ಯನ್ನು ನಾವು ಯುಕವರ ಕೈಗೆ ಕೊಡುತ್ತೇವೆ, ಯಾವ ಯುಕವರು ಉದ್ಯೋಗ ಕೊಡುತ್ತಾರೆಯೋ ಅವರಿಗೆ ನಾವು ಪ್ರೋತ್ಸಾಹ ಧನ ಕೊಡುತ್ತೇವೆ, ಬ್ಯಾಂಕುಗಳಿಂದ ಸಾಲ ಕೊಡಿಸುತ್ತೇವೆ ಎಂದು ರಾಹುಲ್ ಹೇಳಿದರು.
ರಾಜ್ಯಸಭಾ, ವಿಧಾನಸಭಾ, ಲೋಕಸಭೆಗಳಲ್ಲಿ ಮಹಿಳೆಯರಿಗೆ ೩೩% ಮೀಸಲು ನೀಡುತ್ತೇವೆ, ಮತ್ತು ಮಹಿಳೆಯರಿಗೆ ೩೩% ಮೀಸಲಾತಿ ನೀಡುವ ಕೆಲಸ ತಕ್ಷಣದಲ್ಲಿ ಮಾಡುತ್ತೇವೆ. ಅಷ್ಟೆ ಅಲ್ಲದೆ 'ನ್ಯಾಯ್' ಯೋಜನೆಯ ಹಣ ಕುಟುಂಬದ ಮಹಿಳೆಯರ ಖಾತೆಗೆ ಬರುವಂತೆ ಮಾಡುತ್ತೇವೆ ಎಂದು ರಾಹುಲ್ ಅವರು ಮಹಿಳೆಯರ ಕುರಿತಾಗಿ ಹೇಳಿದರು.
ಈ ದೇಶ ಪ್ರೀತಿಯಿಂದಾದದ್ದು, ವೈರತ್ವದಿಂದ ಆದದ್ದಲ್ಲ, ಈಗ ದೇಶದಲ್ಲಿ ವೈರತ್ವ ಮತ್ತು ಪ್ರೀತಿಯ ಮಧ್ಯದ ಹೋರಾಟ ನಡೆಯುತ್ತಿದೆ, ಅಂತಿಮ ಗೆಲುವು ಪ್ರೀತಿಯದ್ದೇ ಆಗಿರುತ್ತದೆ, ಚುನಾವಣೆಯಲ್ಲಿ ಗೆಲುವು ಕಾಂಗ್ರೆಸ್ ಮತ್ತು ಜೆಡಿಎಸ್ ನದ್ದೇ ಆಗಿರುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು.
ಮೋದಿ ಅವರು ಎಲ್ಲರ ಖಾತೆಗೆ 15 ಲಕ್ಷ ಹಣ ಹಾಕುತ್ತೇನೆ ಎಂದು ಸುಳ್ಳು ಹೇಳಿದ್ದರು ಆದರೆ ನಾವದನ್ನು ನಿಜ ಮಾಡುತ್ತೇವೆ. ನಾವು ಭಾರತದ ಬಡವರ ಕುಟುಂಬಕ್ಕೆ ವರ್ಷಕ್ಕೆ 72000 ಹಣ ಖಾತೆಗೆ ಹಾಕುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಐದು ವರ್ಷದಲ್ಲಿ 15 ಲಕ್ಷ ಹಣ ಹಾಕುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದರು, ಆದರೆ ನಾವು ಮೋದಿ ಹೇಳಿದ್ದ ಸುಳ್ಳನ್ನು ನಿಜ ಮಾಡಲು ನಿಶ್ಚಯಿಸಿದ್ದೇವೆ, ದೇಶದ ಐದು ಕೋಟಿ ಕುಟುಂಬಕ್ಕೆ ನಾವು ವರ್ಷಕ್ಕೆ 3.5 ಲಕ್ಷ ಹಣ ಖಾತೆಗೆ ಹಾಕುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಇಷ್ಟೊಂದು ಹಣ ಕಾಂಗ್ರೆಸ್ ಎಲ್ಲಿಂದ ತರುತ್ತದೆ ಎಂದು ಮೋದಿ ಕೇಳಿದ್ದಾರೆ. ಮೋದಿ ಅವರೇ ಆ ಹಣವನ್ನು ನಾವು ನಿಮ್ಮ ಗೆಳೆಯ ಅಂಬಾನಿಯ ಜೇಬಿನಿಂದ ತೆಗೆದುಕೊಂಡು ಜನರಿಗೆ ಕೊಡುತ್ತೇವೆ, ನೀವು ಶ್ರೀಮಂತರಿಗೆ ಮಾಡಿರುವ ಸಾಲಮನ್ನಾವನ್ನು ನಾವು ವಾಪಸ್ ಪಡೆಯುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು.
ಸಾಲದ ವಿಷಯದಲ್ಲಿ ಯಾವುದೇ ರೈತ ಜೈಲಿಗೆ ಹೋಗದಂತಹಾ ಹೊಸ ಕಾನೂನನ್ನು ನಾವು ತರುತ್ತೇವೆ ಎಂದ ರಾಹುಲ್ ಗಾಂಧಿ ರೈತರಿಗಾಗಿ ಇನ್ನೂ ಹಲವು ಭರವಸೆಗಳನ್ನು ರಾಹುಲ್ ಗಾಂಧಿ ನೀಡಿದರು.
ಮೋದಿ ಅವರೇ ದೇಶದ ಯುವಜನರಿಗೆ ಉದ್ಯೋಗ ನೀಡಲು ನೀವು ಯಾವ ಕ್ರಮ ಕೈಗೊಂಡಿದ್ದೀರಿ ಎಂದು ದೇಶಕ್ಕೆ ಹೇಳಬೇಕು, ಪ್ರತಿ ದಿನ ದೇಶದ ಸಹಸ್ರಾರು ಯುವಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂದು ರಾಹುಲ್ ಹೇಳಿದರು.












Click it and Unblock the Notifications