ಪೂಜೆ ನೆಪದಲ್ಲಿ ಮಹಿಳೆಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪೂಜಾರಿ
ಕೋಲಾರ, ಫೆಬ್ರವರಿ 28: ಪೂಜೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಡುವುದಾಗಿ ಅಮಾಯಕ ಮಹಿಳೆಯನ್ನು ನಂಬಿಸಿದ ಪೂಜಾರಿ ಸಮಾರು 27 ಕೋಟಿ ರೂ. ಮೌಲ್ಯದ ಸೈಟು, ನಗನಾಣ್ಯ ಲಪಟಾಯಿಸಿಕೊಂಡು ಪರಾರಿಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೆಂಗನೂರು ಗ್ರಾಮದ ಶ್ರೀನಗರ ಬಡಾವಣೆ ಪಕ್ಕದಲ್ಲಿ ನಿರ್ಮಾಣ ಮಾಡಿರುವ ಸೊಲ್ಲಾಪುರಮ್ಮ ದೇವಸ್ಥಾನದ ಸಂಸ್ಥಾಪಕ, ಮಂತ್ರವಾದಿ ನಾಗರಾಜ್ ಎಂಬಾತನೇ ಮಹಿಳೆಗೆ ಪೂಜೆ ನೆಪದಲ್ಲಿ ವಂಚಿಸಿ ಪೊಲೀಸರಿಂದ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ. ಬೆಂಗಳೂರು ನಗರದ ಎನ್ಆರ್ಐ ನಗರ ಬಡಾವಣೆಯ ಮಹಿಳೆಯೊಬ್ಬರಿಗೆ, ಕುಟುಂಬದ ಸಂಕಷ್ಟವನ್ನು ನಿವಾರಿಸಿಕೊಡುವುದಾಗಿ ಮಂತ್ರವಾದಿ ಮೈಮೇಲೆ ಸೊಲ್ಲಾಪುರಮ್ಮ ದೇವಿ ಬಂದಂತೆ ನಟಿಸಿ ಮಹಿಳೆಯಿಂದ ಕೋಟ್ಯಂತರ ರೂ ನಗದು, ಚಿನ್ನಾಭರಣ ಲಪಟಾಯಿಸಿದ್ದಲ್ಲದೆ ನಿವೇಶನದ ದಾಖಲಾತಿಗಳನ್ನು ಪೂಜೆಗಿಡುವಂತೆ ಹೇಳಿ ಅದನ್ನು ಸಹ ಪಡೆದುಕೊಂಡು ವಂಚಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವಂಚನೆಗೊಳಗಾದ ಮಹಿಳೆ ನೀಡಿದ ದೂರಿನ ಮೇರೆಗೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಮಂತ್ರವಾದಿ ನಾಗರಾಜ್, ಈತನ ಪತ್ನಿ ಲಕ್ಷ್ಮಮ್ಮ, ಬಾಮೈದ ಪೆರುಮಾಳ್, ಸಹಚರರಾದ ದೇವರಾಜ್, ಹೊಸೂರು ಮಂಜು, ಸಾಯಿಕೃಷ್ಣ ಎಂಬುವರ ವಿರುದ್ದ ಮಢ್ಯ ನಿಷೇಧ ಕಾಯ್ದೆ ಮತ್ತು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

ಪೊಲೀಸರು ಬಂಧಿಸಲು ಆಗಮಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಆರೋಪಿಗಳು ರಾತ್ರೋರಾತ್ರಿ ಪರಾರಿಯಾಗಿದ್ದಾರೆ. ಆರೋಪಿಗಳು ಬಳಕೆ ಮಾಡುತ್ತಿದ್ದ ಮೊಬೈಲ್ ಫೋನ್ ಗಳು ಸ್ವಿಚ್ ಆಫ್ ಆಗಿವೆ. ರಾಮಮೂರ್ತಿ ನಗರ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.












Click it and Unblock the Notifications