ಕೋಲಾರ ಸಂಸದ ವಿ.ಮುನಿಸ್ವಾಮಿ ವಿರುದ್ಧ ಕಿಡಿಕಾರಿದ ಶಾಸಕ ನಂಜೇಗೌಡ
ಕೋಲಾರ, ಡಿಸೆಂಬರ್ 31 : ಸಚಿವರೊಂದಿಗೆ ಬರುವ ಅವಶ್ಯಕತೆ ಇಲ್ಲದೆ ಇದ್ದರೂ, ಸಚಿವರೊಂದಿಗೆ ಬಂದ ಕೋಲಾರ ಸಂಸದರು ಕ್ರಷರ್ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದರೊಂದಿಗೆ ರಾಜಕೀಯ ಮಾಡಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ನಾನೊಬ್ಬನೇ ಕ್ರಷರ್ ಮಾಲೀಕನಿದ್ದೇನಾ ಎಂದು ಶಾಸಕ ಕೆ.ವೈ ನಂಜೇಗೌಡ ಅವರು ಸಂಸದ ವಿ.ಮುನಿಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ಗುರುವಾರ ಸಚಿವ ಸಿ.ಸಿ. ಪಾಟೀಲರು ಸಂಸದ ಮುನಿಸ್ವಾಮಿ ಜೊತೆಗೂಡಿ ಕ್ರಷರ್ಗಳ ಪರಿಶೀಲನೆಗೆ ಆಗಮಿಸಿದ್ದರು. ಶಾಸಕ ನಂಜೇಗೌಡ ಮಾಲಿಕತ್ವದ ಕ್ರಷರ್ಗೂ ಭೇಟಿ ನೀಡಿದ ವೇಳೆ ಶಾಸಕ ಹಾಗೂ ಸಂಸದರ ನಡುವೆ ಮಾತಿನ ಚಕಮಕಿ ನಡೆದಿತ್ತು.
ಕೋಲಾರ; ಸಂಸದ, ಶಾಸಕರ ನಡುವೆ ಸಚಿವರ ಮುಂದೆ ವಾಗ್ವಾದ!
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಕೆ.ವೈ ನಂಜೇಗೌಡ, ಸಚಿವರೊಂದಿಗೆ ಬಂದ ಕೋಲಾರ ಸಂಸದರು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿಲ್ಲ. ಜನರ ಕಷ್ಟ ಸುಖದ ಬಗ್ಗೆ ಕೇಳಿಲ್ಲ, ಅವರಿಗೆ ಬರೀ ನಂಜೇಗೌಡ ಅವರದ್ದೆ ಧ್ಯಾನವಾಗಿದೆ ಎಂದು ಟೀಕಿಸಿದರು.
ಈ ಕ್ರಷರ್ ಅಕ್ರಮವಾಗಿದ್ದರೆ ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತದೆ. ಅದನ್ನು ಬಿಟ್ಟು ಸಂಸದರಿಗೆ ಎದ್ದರೆ ಕುಂತರೆ ನನ್ನದೇ ಧ್ಯಾನ ಆಗಿದೆ. ಜಿಲ್ಲೆಯಲ್ಲಿ ನಾನೊಬ್ಬನೇ ಕ್ರಷರ್ ಮಾಲಿಕನಿದ್ದೇನಾ ಎಂದು ಪ್ರಶ್ನಿಸಿದರು. ನೂರಕ್ಕೆ ನೂರರಷ್ಟು ಕ್ರಷರ್ ಅಕ್ರಮವಲ್ಲ, ಒಂದು ವೇಳೆ ಹಾಗಿದ್ದರೆ ಕ್ರಷರ್ ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಇತ್ತ ಶಾಸಕ ನಂಜೇಗೌಡ ಹೇಳಿಕೆಗೆ ಸಂಸದ ಮುನಿಸ್ವಾಮಿ ತಿರುಗೇಟು ನೀಡಿದ್ದು, ತಪ್ಪು ಮಾಡಿಲ್ಲ ಎಂದರೆ, ಉಪ್ಪು ತಿಂದಿಲ್ಲ ಅಂದರೆ ಆರಾಮವಾಗಿ ಇರಬೇಕು ಅದನ್ನ ಬಿಟ್ಟು ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಮಾಧ್ಯಮದೊಂದಿಗೆ ಮಾತನಾಡಿದ ಸಂಸದ ಮುನಿಸ್ವಾಮಿ, ಯಾರೇ ತಪ್ಪು ಮಾಡಿದ್ದರೂ ಅವರ ವಿರುದ್ಧ ಸರ್ಕಾರ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತದೆ. ನಾವು ಯಾವುದೇ ರೀತಿಯ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದರು.
ಅಲ್ಲದೇ ಸರ್ಕಾರದ ಬೊಕ್ಕಸಕ್ಕೆ ಹಾನಿ ಮಾಡಿದವರು ಯಾರೇ ಆದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದು, ವೈಯಕ್ತಿಕವಾಗಿ ನಾನು ವಿಚಾರವನ್ನು ಪ್ರಸ್ತಾಪಿಸಿಲ್ಲ. ಅಲ್ಲದೇ ಇಲಾಖೆಯವರು ನಿಗದಿಪಡಿಸಿರುವಂತಹ ಕಾರ್ಯಕ್ರಮದಲ್ಲಿ ಸಚಿವರೊಂದಿಗೆ ನಾವು ಇರಬೇಕಿರುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
Recommended Video
ಇನ್ನು ಸಚಿವರು ಯಾವ ಸ್ಥಳಕ್ಕೆ ಹೋಗಬೇಕೆಂದು ನಿಗದಿಗೊಳಿಸಿರುವುದು ಇಲಾಖೆಯವರು, ಯಾವ ಸ್ಥಳಕ್ಕೆ ಹೋಗಬೇಕೆಂದು ನಾನು ಸ್ಥಳ ನಿಗದಿ ಮಾಡಿಲ್ಲ, ಅವರು ತಪ್ಪು ಮಾಡಿಲ್ಲ ಎಂದರೆ ಆರಾಮವಾಗಿ ಇರಬೇಕು ತಿರುಗೇಟು ನೀಡಿದರು.