ಕೊಡಗು ಜಿಲ್ಲೆಯ ನಿಷೇಧಾಜ್ಞೆ ಜಿಲ್ಲಾಡಳಿತದ ತೀರ್ಮಾನ: ಗೃಹ ಸಚಿವ ಆರಗ ಜ್ಞಾನೇಂದ್ರ
ಕೋಲಾರ, ಆಗಸ್ಟ್ 23: ''ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಕೊಡಗು ಜಿಲ್ಲಾಡಾಳಿತ ನಿಷೇಧಾಜ್ಞೆ ತೀರ್ಮಾನ ತೆಗೆದುಕೊಂಡಿದ್ದು ಎಲ್ಲರೂ ಈ ವಿಷಯದಲ್ಲಿ ಸಹಕರಿಸಬೇಕು'' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಕೆಜಿಎಫ್ ಪಟ್ಟಣದಲ್ಲಿ ಮಾತನಾಡಿದ ಸಚಿವರು, ಶಾಂತಿ ಕದಡುವ ಯಾವುದೇ ಪ್ರಯತ್ನವನ್ನು ಜಿಲ್ಲೆಯಲ್ಲಿ, ನಡೆಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
''ಗೌರಿ ಗಣೇಶ ಹಬ್ಬ ಸಮೀಪಿಸುತ್ತಿದ್ದು ಮುಂದಿನ ದಿನಗಳಲ್ಲಿ ಬರುವ, ಗಣೇಶೋತ್ಸವ ಸಂಭ್ರಮ ಕಾರ್ಯಕ್ರಮವನ್ನು, ಶಾಂತಿಯುತವಾಗಿ ಆಚರಿಸಲು, ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳ ಲಾಗುತ್ತದೆ'' ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಚಾಮರಾಜಪೇಟೆ ಗಣೇಶೋತ್ಸವ ಸ್ಥಳೀಯ ಆಡಳಿತ ನಿರ್ಧಾರ
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮೈದಾನದಲ್ಲಿ, ಗಣೇಶೋತ್ಸವ ಆಚರಣೆ ಸಂಬಂಧ ಅವಕಾಶ ಮಾಡಿಕೊಡುವ ಬಗ್ಗೆ ಸ್ಥಳೀಯ ಆಡಳಿತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಸಚಿವರು ತಿಳಿಸಿದರು.

ರಾಜ್ಯ ಪೊಲೀಸ್ ವಸತಿ ಲೋಕಾರ್ಪಣೆ
ಕೆಜಿಎಫ್ ನಗರದಲ್ಲಿ, ರಾಜ್ಯ ಪೊಲೀಸ್ ವಸತಿ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದಿಂದ ನೂತನವಾಗಿ ನಿರ್ಮಿಸಲಾಗಿರುವ ಡಿಎಆರ್ ಆಡಳಿತ ಕಚೇರಿ, ಶಸ್ತ್ರಾಗಾರ ಹಾಗೂ ಶ್ವಾನದಳ ಕಟ್ಟಡಗಳನ್ನು ಲೋಕಾರ್ಪಣೆ ಗೊಳಿಸಿದರು. ಇದೇ ವೇಳೆ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಕೆಜಿಎಫ್ ನಗರದಲ್ಲಿ ಇರುವ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯನ್ನು ಮುಚ್ಚುವುದಿಲ್ಲ ಎಂದು ಭರವಸೆ ನೀಡಿದರು.
ವಿಧಿ ವಿಜ್ಞಾನ ಶಾಸ್ತ್ರ ವಿಶ್ವ ವಿದ್ಯಾಲಯ ಸ್ಥಾಪನೆ
ಇಡೀ ದಕ್ಷಿಣ ಭಾರತದಲ್ಲಿ, ಪ್ರಪ್ರಥಮ ಬಾರಿಗೆ, ಕರ್ನಾಟಕದಲ್ಲಿ ವಿಧಿ ವಿಜ್ಞಾನ ಶಾಸ್ತ್ರ ವಿಶ್ವ ವಿದ್ಯಾಲಯದ ಪೀಠವೊಂದನ್ನು ಸ್ಥಾಪಿಸಲು, ಕೇಂದ್ರ ಸರಕಾರದ ಒಪ್ಪಿಗೆ ಪಡೆಯಲಾಗುತ್ತಿದೆ, ಎಂದು ಸಚಿವರು ಹೇಳಿದರು.
ಸಿದ್ದರಾಮಯ್ಯರವವರು ಆಗಸ್ಟ್ 26ಕ್ಕೆ ಕೊಡಗು ಚಲೋಗೆ ಕರೆಯನ್ನು ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಸುತ್ತಾ ಸ್ವಾತಂತ್ರ್ಯ ವೀರ ಯೋಧ ಸಾವರ್ಕರ್ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ಅವಹೇಳನ ಮಾಡುವವರ ಬಗ್ಗೆ ಎಚ್ಚರದಿಂದಿರಬೇಕು ಎಂದು ಸಚಿವರು ಹೇಳಿದರು. ಒಂದೊಂದು ಸಮುದಾಯವನ್ನು ಒಡೆಯುವ ಮಾತನ್ನು ಯಾವ ರಾಜಕೀಯ ನಾಯಕರೂ ಮಾತನಾಡದೆ, ಎಲ್ಲರನ್ನೂ ಜೋಡಿಸುವ ನುಡಿಗಳು ಕೇಳುವಂತಾಗಬೇಕು. ಒಂದು ಏರಿಯಾದಲ್ಲಿ ಯಾಕೆ ಸಾವರ್ಕರ್ ಭಾವಚಿತ್ರ ಹಾಕಬೇಕಿತ್ತು, ಎಂಬಂಥ ಮಾತುಗಳಿಂದ, ಸಮುದಾಯಗಳ ನಡುವೆ ಸಾಮರಸ್ಯ ಸಾಧಿಸಲು ಆಗುವುದಿಲ್ಲ. ಈ ದೇಶದಲ್ಲಿ ಎಲ್ಲರೂ ಸಾಮರಸ್ಯದಿಂದ ಹಾಗೂ ಶಾಂತಿಯುತವಾಗಿ ನೆಲಸಲು ಅನುಕೂಲವಾಗುವಂತಹ ವಾತಾವರಣ ಕಲ್ಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಸಚಿವರು ತಿಳಿಸಿದರು.
ಸುಪ್ರಿಂಕೋರ್ಟ್ಗೆ ಹೋಗುವ ಇರಾದೆ ಇಲ್ಲ
ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದತಿ ಕುರಿತು ರಾಜ್ಯ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪನ್ನು ಪ್ರಶ್ನಿಸಿ, ರಾಜ್ಯ ಸರಕಾರ ಸುಪ್ರೀಮ್ ಕೋರ್ಟಿನ ಮುಂದೆ ಪ್ರಶ್ನಿಸುವ ಯಾವುದೇ ಇರಾದೆ ಇಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಮಡಿಕೇರಿ ಚಲೋ ಮುಂದೂಡಿಕೆ:
ಮೊಟ್ಟೆ ಎಸೆದ ಪ್ರಕರಣ, ಕೊಡಗಿನಲ್ಲಿ ಕಾಂಗ್ರೆಸ್ ಪ್ರತಿಭಟನೆ, ಕೊಡಗಿನಲ್ಲಿ ನಿಷೇಧಾಜ್ಞೆ ಸೇರಿ ಹಲವು ವಿಷಯಗಳ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಮಂಗಳವಾರ (ಆಗಸ್ಟ್ 23)ದಂದು ಸುದ್ದಿಗೋಷ್ಠಿ ನಡೆಸಿದರು. ಕೊಡಗಿನಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ತಿಯಾಗಿ ನಾನು ಅದನ್ನು ಉಲ್ಲಂಘಿಸುವುದಿಲ್ಲ. ಹೀಗಾಗಿ ಪ್ರತಿಭಟನೆಯನ್ನು ಮುಂದೂಡಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಆಗಸ್ಟ್ 26 ರಂದು ಕಾಂಗ್ರೆಸ್ ಪ್ರತಿಭಟನೆ ಮತ್ತು ಬಿಜೆಪಿಯಿಂದ 'ಜನ ಜಾಗೃತಿ ಸಮ್ಮೇಳನ' ಘೋಷಣೆಯಾಗಿತ್ತು. ಈ ಹಿನ್ನೆಲೆ ಪೂರ್ವಭಾವಿಯಾಗಿ ಕೊಡಗು ಜಿಲ್ಲೆಯಲ್ಲಿ ನಾಲ್ಕು ದಿನ ಸೆಕ್ಷನ್ 144 ಜಾರಿಗೊಳಿಸಲಾಗಿದೆ. ಆಗಸ್ಟ್ 24 ರ ಬೆಳಗ್ಗೆ 6 ಗಂಟೆಯಿಂದ ಆಗಸ್ಟ್ 27 ರ ಸಂಜೆ 6 ರವರೆಗೆ ಕೊಡಗು ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಿರಲಿದೆ.












Click it and Unblock the Notifications