ಅಂಧನ ಬಳಿ ತೆರಳಿ ಸಮಸ್ಯೆ ಆಲಿಸಿದ ನ್ಯಾಯಾಧೀಶರ ನಡೆಗೆ ಮೆಚ್ಚುಗೆ
ಕೋಲಾರ, ನವೆಂಬರ್ 07: ನ್ಯಾಯಾಲಯದ ಬಳಿ ಕುಳಿತಿದ್ದ ಅಂಧನ ಬಳಿ ತೆರಳಿ ಕಾನೂನು ಸೇವೆಯ ಭರವಸೆ ನೀಡಿರುವ ನ್ಯಾಯಾಧೀಶರ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮುಳಬಾಗಿಲಿನ ತಾತಿಪಾಳ್ಯದ ದೇವರಾಜಾಚಾರಿ ಅಂಧನಾಗಿದ್ದು, ಉಚಿತ ಕಾನೂನು ಸೇವೆಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದೇ ವಿಷಯವಾಗಿ ನ್ಯಾಯಾಲಯದ ಬಳಿ ಕುಳಿತಿದ್ದರು. ಅವರನ್ನು ಕಂಡ ನ್ಯಾಯಾಧೀಶ ಹಾಜಿ ಹುಸೇನ್ ಸಾಬ ಯಾದವಾಡ ಅವರು ಅಂಧನ ಬಳಿ ತೆರಳಿದ್ದಾರೆ. ಅವರೊಂದಿಗೆ ಕೂತು ಚರ್ಚೆ ನಡೆಸಿ ಕಾನೂನು ಸೇವಾ ಸಮಿತಿ ಮೂಲಕ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದಾರೆ.

ಮುಳಬಾಗಿಲು ಪಟ್ಟಣ ನಿವಾಸಿ ದೇವರಾಜಾಚಾರ್ ತಮ್ಮ ಮನೆ ಸಂಬಂಧಿತ ವಿಚಾರವಾಗಿ ಕಾನೂನು ಸೇವಾ ಸಮಿತಿಗೆ ಮನವಿ ಸಲ್ಲಿಸಿದ್ದರು. ಅದೇ ವಿಷಯವಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದರು. ಕೊರೊನಾದಿಂದಾಗಿ ನಗರದ ನ್ಯಾಯಾಲಯದಲ್ಲಿ ಸಾರ್ವಜನಿಕರಿಗೆ, ಕಕ್ಷಿದಾರರಿಗೆ ಪ್ರವೇಶವಿಲ್ಲವಾಗಿದ್ದು, ಹೊರಗೆ ಕುಳಿತಿದ್ದರು. ಈ ವಿಷಯ ನ್ಯಾಯಾಧೀಶರ ಗಮನಕ್ಕೆ ಬಂದಿದ್ದು, ತಾವೇ ದೇವರಾಜಾಚಾರ್ ಬಳಿ ಬಂದು, ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ. ವಿವಾದವಿರುವ ಎರಡೂ ಕಡೆಯವರನ್ನು ಕರೆಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ತಿಳಿಸಿದ್ದಾರೆ.
ನ್ಯಾಯಾಧೀಶರ ಈ ನಡೆಗೆ ನ್ಯಾಯಾಲಯ ಸಿಬ್ಬಂದಿ, ದೇವರಾಜಾಚಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications