ಕುಡಿದ ನಶೆಯಲ್ಲಿ ಮಚ್ಚಿನಲ್ಲಿ ಬಡಿದಾಡಿಕೊಂಡ ಒಂದೇ ಪಕ್ಷದ ಕಾರ್ಯಕರ್ತರು
ಕೋಲಾರ, ಮೇ 18: ಕುಡಿದ ಮತ್ತಿನಲ್ಲಿ ನಿನ್ನೆ ತಡರಾತ್ರಿ ಇಲ್ಲಿನ ಜೆಡಿಎಸ್ ಕಾರ್ಯಕರ್ತರು ಗಲಾಟೆ ಮಾಡಿಕೊಂಡು ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಹೊರವಲಯದಲ್ಲಿ ಈ ಘಟನೆ ನಡೆದಿದೆ. ನಿನ್ನೆ ತಡರಾತ್ರಿ ಜೆಡಿಎಸ್ ಪಕ್ಷದ ಎರಡು ಬಣಗಳ ನಡುವೆ ಯಾವುದೋ ವಿಷಯಕ್ಕೆ ಇದ್ದಕ್ಕಿದ್ದಂತೆ ಮಾತಿನ ಚಕಮಕಿ ಆರಂಭವಾಗಿದೆ. ಮಾತು ಬಡಿದಾಟಕ್ಕೆ ತಿರುಗಿ ಕುಡಿದ ನಶೆಯಲ್ಲಿ ಒಂದೇ ಪಕ್ಷದ ಈ ಕಾರ್ಯಕರ್ತರು ಕೈ ಕೈ ಮಿಲಾಯಿಸಿದ್ದಾರೆ. ಜಗಳ ತಾರಕಕ್ಕೇರಿ, ನಗರದ ಬೋವಿ ಕಾಲೋನಿ ವಾರ್ಡ್ ನ ಜೆಡಿಎಸ್ ಸದಸ್ಯ ನಾಗರಾಜ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ಅನಾರೋಗ್ಯದಿಂದ ಬಳ್ಳಾರಿಯಲ್ಲಿ ಆಶಾ ಕಾರ್ಯಕರ್ತೆ ಸಾವು
ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡಿದ್ದ ನಾಗರಾಜ್ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೆಡಿಎಸ್ ಪಕ್ಷದ ಗಂಗಾಧರ್, ಚಂದ್ರ ಸೇರಿದಂತೆ ಹಲವರ ವಿರುದ್ಧ ನಾಗರಾಜ್ ಮೇಲೆ ಹಲ್ಲೆ ನಡೆಸಿರುವ ಆರೋಪ ಮಾಡಲಾಗಿದೆ. ಮುಳಬಾಗಿಲು ನಗರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.