ಸಿಎಂ ಬಗ್ಗೆ ಯತ್ನಾಳ್ ಹೇಳಿಕೆ; ಅಬಕಾರಿ ಸಚಿವ ನಾಗೇಶ್ ಪ್ರತಿಕ್ರಿಯೆ
ಕೋಲಾರ, ಅಕ್ಟೋಬರ್ 21: "ಇನ್ನು ಹೆಚ್ಚು ದಿನ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿ ಮುಂದುವರೆಯುವುದಿಲ್ಲ" ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಅಬಕಾರಿ ಸಚಿವ ಎಚ್.ನಾಗೇಶ್ ಕೋಲಾರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
"ಶಾಸಕ ಯತ್ನಾಳ್ ಹೇಳಿಕೆಯಿಂದಾಗಿ ಸರ್ಕಾರಕ್ಕೆ ತುಂಬಾ ಮುಜುಗರವಾಗಿದೆ. ಯತ್ನಾಳ್ ಆಗಾಗ ಈ ರೀತಿ ಹೇಳೋದು ಸಹಜ. ಅದೂ ಅಭ್ಯಾಸವಾಗಿಬಿಟ್ಟಿದೆ. ಆದರೆ ಯಡಿಯೂರಪ್ಪ ಪೂರ್ಣ ಅವಧಿ ಇದ್ದರೆ ಮಾತ್ರ ಬಿಜೆಪಿ ಇರುತ್ತದೆ. ಅವರು ಇಲ್ಲ ಅಂದ್ರೆ ಏನಾಗುತ್ತೆ ಅಂತ ಈಗಾಗಲೇ ಗೊತ್ತಾಗಿದೆ" ಎಂದು ಹೇಳಿದ್ದಾರೆ.
"ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಆರಾಮಾಗಿ ಅಧಿಕಾರಕ್ಕೆ ಬರುತ್ತದೆ. ಆದರೆ ಈ ಸಮಯದಲ್ಲಿ ಅಧಿಕಾರದ ಕುರಿತು ಮಾತನಾಡುವ ಬದಲು ಕೊರೊನಾದ ಈ ಸಂಕಷ್ಟದ ಸಮಯದಲ್ಲಿ ಒಟ್ಟಾಗಿ ದುಡಿಯಬೇಕಿದೆ. ಸರ್ಕಾರದ ಕುರಿತು ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೂ ನಾವು ಬದ್ಧರಾಗಿದ್ದೇವೆ" ಎಂದು ತಿಳಿಸಿದರು.

"ಸಮ್ಮಿಶ್ರ ಸರ್ಕಾರದಿಂದ ನಾವು ಬೇಸತ್ತು ಬಂದಿದ್ದೇವೆ. ನಾನು, ಶಂಕರ್ ಹಾಗೂ ಎಂಟಿಬಿ ನಾಗರಾಜ್ ಸಚಿವರಾಗಿದ್ದರೂ ರಾಜೀನಾಮೆ ಕೊಟ್ಟು ಬಂದಿದ್ದೇವೆ. ಕಠಿಣ ನಿರ್ಧಾರ ತೆಗೆದುಕೊಂಡು ಯಡಿಯೂರಪ್ಪನವರನ್ನು ಸಿಎಂ ಮಾಡಿದ್ದೇವೆ. ಅವರು ಪೂರ್ಣಾವಧಿ ಅಧಿಕಾರ ನಡೆಸೇ ನಡೆಸುತ್ತಾರೆ" ಎಂದರು.












Click it and Unblock the Notifications