ರೈತರ ವಿಶೇಷ ಪ್ಯಾಕೇಜ್; ರಮೇಶ್ ಕುಮಾರ್ ಅಸಮಾಧಾನ
ಕೋಲಾರ, ಮೇ 24; "ಸರ್ಕಾರ ಕನಿಷ್ಠ ಪಕ್ಷ ರೈತನನ್ನು ಕರೆಸಿ ಸೌಜನ್ಯಕ್ಕಾದರೂ ಕೇಳಬೇಕಿತ್ತು. ಹಾಗಾದರೆ ರೈತನಿಗೆ ಮರ್ಯಾದೆನೇ ಇಲ್ವಾ?. ನಾವೇನು ಭಿಕ್ಷುಕರಂತೆ ಕಾಣುತ್ತೀವಾ?" ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಸರ್ಕಾರವನ್ನು ಪ್ರಶ್ನಿಸಿದರು.
ಸೋಮವಾರ ಶ್ರೀನಿವಾಸಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ರೈತರ ವಿಚಾರದಲ್ಲಿ ಇಷ್ಟೊಂದು ಅಸಡ್ಡೆ ಏಕೆ ?. ಆರ್ಥಿಕ ಸಂಕಷ್ಟದಿಂದ ಕೊಡೋಕೆ ಆಗೋದಿಲ್ಲ ಎಂದು ಹೇಳಿ" ಎಂದು ಸರ್ಕಾರದ ಕೋವಿಡ್ ವಿಶೇಷ ಪ್ಯಾಕೇಜ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
"ಹೆಕ್ಟೇರ್ಗೆ 10 ಸಾವಿರ ಪರಿಹಾರ ಕೊಟ್ಟಿರೋದು ಏನಕ್ಕೆ ಆಗುತ್ತದೆ. ಮಾವಿನ ಬೆಳೆಗೆ ಔಷಧಿ ಸಿಂಪಡಣೆ ಮಾಡುವುದರಿಂದ ಮಾರುಕಟ್ಟೆಗೆ ಹಾಕುವವರೆಗೂ 35 ಸಾವಿರ ಖರ್ಚು ಬರುತ್ತೆ" ಎಂದು ರಮೇಶ್ ಕುಮಾರ್ ವಿವರಿಸಿದರು.
"ನಾನು ಕೃಷಿಕನಾಗಿರುವುದರಿಂದ ಆ ನೋವು ನನಗೆ ಗೊತ್ತಿದೆ. ದಯವಿಟ್ಟು 10 ಸಾವಿರ ಹಣವನ್ನು ವಾಪಸ್ ತೆಗೆದುಕೊಂಡು ಯಾವುದಾದರೂ ಬೇರೆ ಕೆಲಸಕ್ಕೆ ವ್ಯಯ ಮಾಡಿ" ಎಂದು ರಮೇಶ್ ಕುಮಾರ್ ಒತ್ತಾಯಿಸಿದರು.

75 ಸಾವಿರ ಪರಿಹಾರ ಕೊಡಿ
"ಹೆಕ್ಟೇರ್ಗೆ ಕನಿಷ್ಠ 75 ಸಾವಿರ ಪರಿಹಾರವಾದರೂ ಕೊಡಿ. 1 ಎಕರೆ ಟೊಮೊಟೊ ಬೆಳೆಗೆ 2 ಲಕ್ಷ ಖರ್ಚು ಬರುತ್ತದೆ. ನಿಮ್ಮ ಸಚಿವ ಸಂಪುಟದಲ್ಲಿ ಯಾರಾದರೂ ಒಬ್ಬ ರೈತನಿದ್ದಾನ?. ರೈತನ ನೋವು ಅನುಭಿಸಿದ್ದಾನಾ?, ಜನರು ಫೋನ್ ಮಾಡುತ್ತಿದ್ದಾರೆ. ರಿಸೀವ್ ಮಾಡಿ ಮಾತನಾಡುವುದಕ್ಕೆ ನನ್ನ ಕೈ ನಡಗುತ್ತದೆ" ಎಂದು ರಮೇಶ್ ಕುಮಾರ್ ಹೇಳಿದರು.

ಅಸಹಾಯಕರಾಗಿದ್ದೇವೆ
"ಜನರಿಗೆ ಬೆಡ್ ಕೊಡಿಸೋಕೆ ಆಗದೆ ಅಸಹಾಯಕರಾಗಿದ್ದೇವೆ. ಕೋಲಾರ ಜಿಲ್ಲೆಯಲ್ಲಿ ಮೂರು ಕಡೆ ಮಾತ್ರ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಮೂರು ದಿನ ಆದರೂ ವರದಿ ಬರುತ್ತಿಲ್ಲ. ಇದರಿಂದ ಕೊರೊನಾ ಹರಡುವಿಕೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ" ಎಂದು ರಮೇಶ್ ಕುಮಾರ್ ಆರೋಪಿಸಿದ್ದಾರೆ.

ಲಾಕ್ಡೌನ್ ಘೋಷಣೆ ಮಾಡಲಾಗಿದೆ
ಕೋವಿಡ್ 2ನೇ ಅಲೆಯು ಹರಡುವಿಕೆ ತಡೆಯಲು ಕರ್ನಾಟಕದಲ್ಲಿ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ಮೇ 24ರಿಂದ ಜೂನ್ 7ರ ತನಕ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿದ ರೈತರು, ಆಟೋ/ ಕ್ಯಾಬ್ ಚಾಲಕರು ಲಾಕ್ಡೌನ್ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.

1,250 ಕೋಟಿ ರೂ. ಪ್ಯಾಕೇಜ್
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸುಮಾರು 1,250 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ವಿವಿಧ ವರ್ಗದ ಜನರಿಗೆ ಸಹಾಯಕವಗುವಂತೆ ಪ್ಯಾಕೇಜ್ ಘೋಷಣೆ ಮಾಡಲಾಗಿದ್ದು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.











Click it and Unblock the Notifications