'ಆಮ್ನೆಸ್ಟಿ ಬಿಟ್ಟು ರಾಜ್ಯದಲ್ಲಿ ಬೇರೆ ಸಮಸ್ಯೆಗಳು ಬಿಜೆಪಿಗೆ ಕಾಣೋಲ್ವಾ?'
ಕೋಲಾರ, ಆಗಸ್ಟ್ 25 : 'ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ರಾಜ್ಯದಲ್ಲಿ ಆಮ್ನೆಸ್ಟಿ ಬಿಟ್ಟು ಚರ್ಚೆ ಮಾಡಲು ಹಲವಾರು ಸಮಸ್ಯೆಗಳಿವೆ' ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಗುರುವಾರ ಕೋಲಾರದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ವಿಚಾರಕ್ಕಿಂತ ಬೇರೆ ವಿಚಾರಗಳಲ್ಲಿ ಬಿಜೆಪಿ' ಹೋರಾಟ ನಡೆಸಲಿ ಎಂದು ಸಲಹೆ ನೀಡಿದರು.[ಚಿತ್ರಗಳು : ಆಮ್ನೆಸ್ಟಿ ಇಂಟರ್ ನ್ಯಾಷನಲ್ ವಿರುದ್ಧ ಬಿಜೆಪಿ ಹೋರಾಟ]
'ಕರ್ನಾಟಕ ಸರ್ಕಾರ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾ ಸಂಸ್ಥೆ ಪರವಾಗಿ ನಿಂತಿಲ್ಲ ಎಂದು ಹೇಳಿದ ಅವರು, ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ' ಎಂದು ಹೇಳಿದರು.['ಎಬಿವಿಪಿ ಪ್ರತಿಭಟನೆ ಹಿಂದೆ ಬಿಜೆಪಿ ಕೈವಾಡವಿದೆ']
ತುಘಲಕ್ ದರ್ಬಾರ್ ಅಲ್ಲ : ಅತ್ತ ಕೊಪ್ಪಳದಲ್ಲಿ ಮಾತನಾಡಿದ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು, 'ಆಮ್ನೆಸ್ಟಿ ಸಂಸ್ಥೆಯವರು ಏನು ತಪ್ಪು ಮಾಡಿದ್ದಾರೆ? ಒಂದು ವೇಳೆ ತಪ್ಪು ಮಾಡಿದ್ದರೆ ಅವರನ್ನು ಬಂಧಿಸಲು ಕಾನೂನು ಇದೆ. ಏಕಾಏಕಿ ಬಂಧಿಸಲು ಇದೇನೂ ತುಘಲಕ್ ದರ್ಬಾರ್ ಅಲ್ಲ' ಎಂದು ಹೇಳಿಕೆ ಕೊಟ್ಟರು.
'ಸುಪ್ರೀಂಕೋರ್ಟ್ ವ್ಯಾಖ್ಯಾನದ ಪ್ರಕಾರ ಹಿಂಸೆಗೆ ಪ್ರಚೋದನೆ ನೀಡುವುದು ದೇಶದ್ರೋಹದ ಅಡಿ ಪರಿಗಣಿಸಲಾಗುತ್ತದೆ. ವಿನಃ ನಾವು ಹೇಳಿದ ಹಾಗಲ್ಲ. ಸಂಘ ಪರಿವಾರದವರು ಹೇಳಿದ್ದೇ ಕಾನೂನಾ?' ಎಂದು ಪ್ರಶ್ನಿಸಿದರು.