ಉಜಿರೆ ಬಾಲಕನ ಅಪಹರಣ; ಆರೋಪಿಗಳು ಬೆಳ್ತಂಗಡಿ ಪೊಲೀಸರ ವಶಕ್ಕೆ
ಕೋಲಾರ, ಡಿಸೆಂಬರ್ 19: ಉಜಿರೆಯಿಂದ 8 ವರ್ಷದ ಬಾಲಕನನ್ನು ಅಪಹರಣ ಮಾಡಿದ್ದ ಎಲ್ಲಾ ಆರೋಪಿಗಳನ್ನು ಮಂಗಳೂರಿನ ಬೆಳ್ತಂಗಡಿ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ಬಾಲಕನನ್ನು ರಕ್ಷಣೆ ಮಾಡಿದ್ದ ಕೋಲಾರದ ಮಾಸ್ತಿ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದರು.
ಶನಿವಾರ ಕೋಲಾರದ ಮಾಸ್ತಿ ಠಾಣೆಯಿಂದ 6 ಆರೋಪಿಗಳನ್ನು ಪೊಲೀಸರು ಕರೆದುಕೊಂಡು ಹೋಗಿ ಮಾಲೂರು ತಾಲೂಕು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಆರೋಪಿಗಳನ್ನು ವಶಕ್ಕೆ ಪಡೆಯಲು ಬೆಳ್ತಂಗಡಿಯಿಂದ ನಂದಕುಮಾರ್ ನೇತೃತ್ವದಲ್ಲಿ ಪೊಲೀಸರ ತಂಡ ಆಗಮಿಸಿತ್ತು.

ಬಾಲಕನ ಅಪಹರಣದ ಬಗ್ಗೆ ಕೋಲಾರದ ಮಾಸ್ತಿ ಠಾಣೆಯ ಮುಂಭಾಗ ಮಾಧ್ಯಮಗಳ ಜೊತೆ ಬೆಳ್ತಂಗಡಿ ಸರ್ಕಲ್ ಇನ್ಸ್ಪೆಕ್ಟರ್ ಸಂದೇಶ್ ಮಾತನಾಡಿದರು. "ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿದ್ದೇವೆ. ನಮ್ಮ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಿದೆ" ಎಂದರು.
"ಬೆಳ್ತಂಗಡಿ ಠಾಣೆಗೆ ಆರೋಪಿಗಳನ್ನು ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಿದ್ದೇವೆ. ತನಿಖೆಯ ಹಂತದಲ್ಲಿಯೇ ಕೋಲಾರದವರು ಇದ್ದಾರೆ ಎಂದು ಸಣ್ಣ ಮಾಹಿತಿ ಸಿಕ್ಕಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದೇವೆ. ಮೇಲ್ನೋಟಕ್ಕೆ ಮಂಜುನಾಥ್ ಹಾಗೂ ಮಹೇಶ್ ಭಾಗಿಯಾಗಿರುವ ಅನುಮಾನವಿದೆ" ಎಂದು ಸಂದೇಶ್ ಮಾಹಿತಿ ನೀಡಿದರು.

"ಯಾರೋ ಅಪಹರಣ ಮಾಡುವುದಕ್ಕೆ ಪ್ರೇರಣೆ ನೀಡಿದ್ದಾರೆ ಎಂಬು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ.
ಹೊರ ರಾಜ್ಯದ ಸಿಮ್ ಕಾರ್ಡ್ ನಂಬರ್ಗಳಿಂದ ಪೋಷಕರಿಗೆ ಕರೆ ಬಂದಿದೆ. ಬಿಟ್ ಕಾಯಿನ್ ವಹಿವಾಟಿನಲ್ಲಿ ಬಾಲಕನ ಪೋಷಕರು ತೊಡಗಿದ್ದರು. ನೂರು ಬಿಟ್ ಕಾಯಿನ್ಗೆ ಸಹ ಬೇಡಿಕೆ ಇಡಲಾಗಿತ್ತು" ಎಂದು ವಿವರಣೆ ನೀಡಿದರು.
ಅಪಹರಣಕಾರರಿಂದ ರಕ್ಷಣೆ ಮಾಡಿರುವ ಬಾಲಕ ಅನುಭವ್ (8) ನನ್ನು ನ್ಯಾಯಾಲಯದ ಅನುಮತಿ ಪಡೆದು ಪೋಷಕರ ವಶಕ್ಕೆ ಒಪ್ಪಿಸಲಾಗಿದೆ. ಪ್ರಕರಣದ ತನಿಖೆಯನ್ನು ಬೆಳ್ತಂಗಡಿ ಪೊಲೀಸರು ಮುಂದುವರೆಸಲಿದ್ದಾರೆ.












Click it and Unblock the Notifications