ಅನರ್ಹರಿಗೆ ಹಣ ನೀಡಿದ ಬಗ್ಗೆ ಸಿದ್ದರಾಮಯ್ಯ ಆಧಾರ ನೀಡಲಿ: ಬಿಎಸ್ವೈ ಸವಾಲು
Recommended Video
ಕಾರವಾರ, ನವೆಂಬರ್ 24: "ಸೋಲಿಗೆ ಹೆದರಿ ಟೀಕಿಸುವ ಸಿದ್ದರಾಮಯ್ಯನವರ ಟೀಕೆಗಳಿಗೆ ನಾನು ಉತ್ತರಿಸುವುದಿಲ್ಲ. ಜನರೇ ಡಿಸೆಂಬರ್ 5ರಂದು ಇದಕ್ಕೆಲ್ಲ ಉತ್ತರ ನೀಡುತ್ತಾರೆ" ಎಂದು ಮುಖ್ಯಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಯಲ್ಲಾಪುರ- ಮುಂಡಗೋಡ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಪರ ಮತಯಾಚನೆಗೆಂದು ಶಿರಸಿಯ ಬನವಾಸಿಗೆ ಬಂದಿದ್ದ ಅವರು, ಮಾಧ್ಯಮದವರೊಂದಿಗೆ ಮಾತನಾಡಿದರು.
ಉಪ ಚುನಾವಣೆ; ಸಿದ್ದರಾಮಯ್ಯಗೆ ಬಿಜೆಪಿ ಚಾಲೆಂಜ್!
'ಸಿದ್ದರಾಮಯ್ಯನವರಿಗೆ ತಾವು ಸೋಲುವ ಭಯ ಅಡರಿದೆ. ಅದಕ್ಕೆ, ಪ್ರತಿ ಅನರ್ಹ ಶಾಸಕರಿಗೂ ನಾವು 25 ಕೋಟಿ ನೀಡಿದ್ದೇವೆ ಎಂದು ಟೀಕಿಸುತ್ತಿದ್ದಾರೆ. ನಾನು ಹಣ ಕೊಟ್ಟಿದ್ದೇನೆನ್ನುವುದನ್ನು ಆಧಾರ ಸಮೇತ ತೋರಿಸಲಿ' ಎಂದು ಸವಾಲೆಸೆದರು.
"ರಾಜ್ಯದ ಉಪಚುನಾವಣೆಯ ಅಷ್ಟೂ ಕ್ಷೇತ್ರವನ್ನು ಗೆಲ್ಲುವ ಮೂಲಕ ಮುಂದಿನ ಮೂರೂವರೆ ವರ್ಷ ಆಡಳಿತ ನಡೆಸಲಿದ್ದೇವೆ. ರಾಜ್ಯಕ್ಕೆ ಹೊಸ ಬಜೆಟ್ ಅನ್ನು ನೀಡಲಿದ್ದು, ಹೆಚ್ಚಿನ ಅನುದಾನಗಳನ್ನು ಬಿಡುಗಡೆ ಮಾಡಲಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ 25 ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದಾಗ ಮಾಧ್ಯಮದವರೂ ಸೇರಿ ಯಾರೂ ನನ್ನನ್ನು ನಂಬಿರಲಿಲ್ಲ. ಆದರೆ, ಅದು ನಿಜವಾಯಿತ. ಲೋಕಸಭಾ ಚುನಾವಣೆಯಲ್ಲಿ ನಾನು ನುಡಿದ ಭವಿಷ್ಯದಂತೆಯೇ ಈ ಬಾರಿಯೂ ಆಗುತ್ತದೆ. ಈ ಬಾರಿ ಉಪಚುನಾವಣೆಯ ಎಲ್ಲ ಕ್ಷೇತ್ರಗಳನ್ನೂ ಗೆಲ್ಲಲಿದ್ದೇವೆ. ಭವಿಷ್ಯ ನಿಜವಾಗಲಿದೆ. ಗೆಲುವು ನಮ್ಮದೇ" ಎಂದರು.
ಸಿದ್ದರಾಮಯ್ಯಗೆ ಭಾರತ ರತ್ನಕ್ಕೆ ಶಿಫಾರಸು ಮಾಡುತ್ತಾರಾ?
"ಯಲ್ಲಾಪುರ- ಮುಂಡಗೋಡ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಮ ಹೆಬ್ಬಾರ್ ಈಗಾಗಲೇ ಗೆದ್ದಾಗಿದೆ. ಎಷ್ಟು ಅಂತರದಿಂದ ಎಂದಷ್ಟೇ ನೋಡುವುದು ಬಾಕಿ ಉಳಿದಿದೆ"ಎಂದರು.