ಉತ್ತರ ಕನ್ನಡ : ಹಿರಿಯ ವಕೀಲ ಅಜಿತ್ ನಾಯಕ ಕೊಲೆಯಾಗಿದ್ದು ಏಕೆ?
ಕಾರವಾರ, ಜುಲೈ 29 : ಹಿರಿಯ ವಕೀಲ ಅಜಿತ್ ನಾಯಕ ಅವರ ಹತ್ಯೆ ದಾಂಡೇಲಿ ಎಂಬ ಪುಟ್ಟ ಪಟ್ಟಣದಲ್ಲಿ ಇದೀಗ ಭಯದ ವಾತಾವರಣ ಸೃಷ್ಟಿಸಿದೆ. ದಾಂಡೇಲಿಯ ಇತಿಹಾಸದಲ್ಲೇ ಕಂಡರಿಯದ ಭರ್ಬರ ಹತ್ಯಾ ಸಂಸ್ಕೃತಿಗೆ ಜನರು ಭಯಭೀತರಾಗಿದ್ದಾರೆ.
ಕ್ರಿಯಾಶೀಲ ಹೋರಾಟಗಾರ, ಪ್ರಖ್ಯಾತ ವಕೀಲ, ರಾಜಕಾರಣಿ, ಚಿಂತಕ, ಸಾಮಾಜಿಕ ಹೋರಾಟಗಾರರಾಗಿ ಅಜಿತ ನಾಯಕ ದಾಂಡೇಲಿಯಲ್ಲಿ ಗುರುತಿಸಿಕೊಂಡಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಬಹಳ ಚುರುಕು ಸ್ವಭಾವದವರಾಗಿದ್ದ ಅಜಿತ್, ಮೂರು ದಶಕಗಳ ಹಿಂದೆ ಆರಂಭಿಸಿದ್ದ ದಾಂಡೇಲಿಯನ್ನು ತಾಲೂಕಾಗಿ ಮಾಡುವ ಹೋರಾಟವು ರಾಜ್ಯದಲ್ಲಿ ಗಮನ ಸೆಳೆದಿತ್ತು.
ದಾಂಡೇಲಿಯ ಹೋರಾಟಗಾರ, ವಕೀಲ ಅಜಿತ್ ನಾಯ್ಕ ಮೇಲೆ ಹಲ್ಲೆ, ಸಾವು
ಸ್ಥಳೀಯರೇ ಹೇಳುವ ಪ್ರಕಾರ ಅಜಿತ್ ಅವರ ಕುಟುಂಬ ಯಾರ ತಂಟೆ, ತಕರಾರಿಗೆ ಹೋಗುವವರಲ್ಲ. ಹಾಗಂತ, ಅಜಿತ್ ಮಾತ್ರ ಸಾರ್ವಜನಿಕರ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ವ್ಯಕ್ತಿ. ಆದರೆ, ಸ್ಥಳೀಯವಾಗಿ ಯಾರೂ ಕೂಡ ಅವರ ವಿರುದ್ಧ ಇರಲಿಲ್ಲ.
ಅವರೊಬ್ಬ ಪ್ರಖ್ಯಾತ ವಕೀಲರಾಗಿ ಕಾರ್ಯನಿರತರಾಗಿದ್ದರು. ಹಾಗಿದ್ದರೆ ಅಜಿತ್ ಹತ್ಯೆಗೆ ಕಾರಣವೇನು? ಸ್ಥಳೀಯವಾಗಿಯೇ ಯೋಚಿಸಿ ಹೇಳುವುದಾದರೆ, ಅವರ ವಕೀಲ ವೃತ್ತಿಯ ಪ್ರಖ್ಯಾತಿಯೇ ಅವರು ಹತ್ಯೆಯಾಗುವಂತೆ ಮಾಡಿತು?.
ಅಜಿತ್, ಬಹಳ ಚುರುಕು ವಕೀಲರಾಗಿದ್ದರಿಂದ ಅವರ ಬಳಿ ಭೂಮಿಗೆ ಸಂಬಂಧಿಸಿದ ಹೆಚ್ಚಿನ ಪ್ರಕರಣಗಳು ಬರುತ್ತಿದ್ದವು. ಭೂಮಿಯ ವ್ಯಾಜ್ಯಗಳನ್ನು ನ್ಯಾಯಾಲಯಕ್ಕೆ ಕೊಂಡು ಹೋಗಿ ಕಕ್ಷಿದಾರನಿಗೆ ನ್ಯಾಯ ಒದಗಿಸುವಲ್ಲಿ ಅಜಿತ್ ನಿಪುಣರಾಗಿದ್ದರು. ಹೀಗಾಗಿ ಇದೇ ಅವರ ಹತ್ಯೆಗೆ ಕಾರಣವಿರಬಹುದೇ? ಎಂಬ ಅನುಮಾನಗಳು ಸ್ಥಳೀಯವಾಗಿ ಕಾಡಲಾರಂಭಿಸಿದೆ.
ಭೂಮಿ ವ್ಯಾಜ್ಯಗಳು ಹತ್ಯೆಗೆ ಕಾರಣ ಹೇಗೆ? : ಸಾಮಾನ್ಯವಾಗಿ ಯಾವುದೇ ಪ್ರಕರಣದಲ್ಲಿ ಒಬ್ಬರಿಗೆ ಲಾಭ, ಇನ್ನೊಬ್ಬರಿಗೆ ನಷ್ಟ ಇದ್ದೇ ಇರುತ್ತದೆ. ಅದರಂತೆಯೇ, ತಮ್ಮ ಕಕ್ಷಿದಾರನಿಗೆ ನ್ಯಾಯ ಕೊಡಿಸುವ ಭರದಲ್ಲಿ ಅಜಿತ್ ಎದುರುದಾರರ ವಿರೋಧ ಕಟ್ಟಿಕೊಳ್ಳುತ್ತಿದ್ದರು.
ಇತ್ತೀಚಿಗೆ ಹೆಚ್ಚಾಗಿರುವ ಈ 'ಲ್ಯಾಂಡ್ ಮಾಫಿಯಾ' ಅಜಿತ್ ನ ಮೇಲೆ ಎರಗಿದ್ದು ಎಂದು ಹೇಳಲಾಗುತ್ತಿದೆ. ಹತ್ಯೆಯ ರಾತ್ರಿಯೇ ಆತ್ಮಹತ್ಯೆ? ಅಜಿತ್ ಅವರ ಹತ್ಯೆ ನಡೆದ ರಾತ್ರಿಯೇ ದಾಂಡೇಲಿಯ ಐಸಿಎಂ ಫ್ಯಾಕ್ಟರಿಯ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದು ಕೂಡ ಹಲವರಿಗೆ ಅನುಮಾನಗಳನ್ನು ಮೂಡಿಸಿದೆ. ಎಳನೀರು ವ್ಯಾಪಾರಸ್ಥ ವಿನೋದ್ ರಾವ್ ಎಂಬಾತ ದಾಂಡೇಲಿಯ ಮಾರುತಿ ನಗರದಲ್ಲಿರುವ ತನ್ನ ಮನೆಯಿಂದ ಶುಕ್ರವಾರ ಮಧ್ಯಾಹ್ನ ಹೊರ ಹೋದವನು ರಾತ್ರಿಯಾದರೂ ಮನೆಗೆ ಮರಳಿಲ್ಲ.
ಈ ನಡುವೆ ರಾತ್ರಿ 9.30ರ ಸುಮಾರಿಗೆ ಅಜಿತ್ ನಾಯಕ ಅವರು ಜೆಎನ್ ರಸ್ತೆಯಲ್ಲಿರುವ ತಮ್ಮ ಕಚೇರಿಯಿಂದ ಇಳಿದು ಬರುವಾಗ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಮಾರಕಾಸ್ತ್ರದಿಂದ ಅವರ ಕುತ್ತಿಗೆಗೆ ಹೊಡೆದು ಪರಾರಿಯಾಗಿದ್ದ.
ಈ ಸುದ್ದಿ ಕಾಳ್ಗಿಚ್ಚಿನಂತೆ ದಾಂಡೇಲಿಯಲ್ಲಿ ಹಬ್ಬಿತ್ತು. ಮಧ್ಯರಾತ್ರಿಯವರೆಗೆ ಇದೇ ವಿಷಯವಾಗಿ ಜನರೆಲ್ಲ ಕೇಂದ್ರೀಕೃತವಾಗಿದ್ದ ವೇಳೆ ವಿನೋದ ರಾವ್ ಅವರ ಆತ್ಮಹತ್ಯೆಯ ವಿಚಾರ ಎಲ್ಲಿಯೂ ಅಷ್ಟೊಂದಾಗಿ ಪಸರಿಸಿಲ್ಲ. ವಿನೋದ ರಾವ್, ತನ್ನ ಆಟೊ ರಿಕ್ಷಾ, ಬೈಕ್ ಹಾಗೂ ಮೊಬೈಲ್ ಎಲ್ಲವನ್ನೂ ಮನೆಯಲ್ಲೇ ಬಿಟ್ಟು ಅರಣ್ಯ ಪ್ರದೇಶಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಇದಕ್ಕೂ ಹತ್ಯೆಗೂ ಸಂಬಂಧವಿದೆಯೇ ಎಂಬ ಬಗ್ಗೆಯೂ ಪೊಲೀಸರು ಗಮನ ಹರಿಸಿದ್ದಾರೆ .
'ಎಲ್ಲ ಹಂತಗಳಲ್ಲೂ ತನಿಖೆ ನಡೆಸಿ, ಕೆಲವೇ ದಿನಗಳಲ್ಲಿ ಆರೋಪಿಯನ್ನು ಪತ್ತೆ ಹಚ್ಚುವುದಾಗಿ' ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.
ಈ ನಡುವೆ ಶನಿವಾರ ವ್ಯಕ್ತಿಯೊಬ್ಬನನ್ನು ಪೊಲೀಸರು ವಿಚಾರಿಸಿರುವ ಕುರಿತು ಸ್ಥಳೀಯ ಪತ್ರಿಕೆಯೊಂದು ಸುದ್ದಿ ಪ್ರಕಟಿಸಿದೆ. ಜಿಲ್ಲೆಯಾದ್ಯಂತ ವಕೀಲರು ಪ್ರತಿಭಟನೆ ನಡೆಸಿದ್ದಾರೆ. ಕಾರವಾರ, ಕುಮಟಾ, ಶಿರಸಿಯಲ್ಲಿ ಮೌನ ಪ್ರತಿಭಟನೆ ನಡೆಸಿ ಅಜಿತ್ ನಾಯಕರ ಹತ್ಯೆಯನ್ನು ಖಂಡಿಸಿದ್ದಾರೆ.