ಅತೃಪ್ತ ಶಾಸಕ ಶಿವರಾಮ್ ಹೆಬ್ಬಾರ್ ಮತದಾರರಿಗೆ ಬರೆದ ಕ್ಷಮಾಪಣಾ ಪತ್ರದಲ್ಲಿ ಏನಿದೆ?

ಕಾರವಾರ, ಜುಲೈ 15: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರಬೈಲ್ ಶಿವರಾಮ್ ಹೆಬ್ಬಾರ್ ಅವರು ಬಲು ನೊಂದು, ತಮ್ಮ ಕ್ಷೇತ್ರದ ಮತದಾರರಿಗೆ ಪತ್ರವೊಂದನ್ನು ಬರೆದಿದ್ದಾರೆ. ಶಿವರಾಮ್ ಹೆಬ್ಬಾರ್ ಅಂದರೆ, ಕಾಂಗ್ರೆಸ್ ನ ಅತೃಪ್ತ ಶಾಸಕ. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಆ ನಂತರ ತಮ್ಮಂತೆಯೇ ರಾಜೀನಾಮೆ ನೀಡಿದ, ಸಮಾನ ಮನಸ್ಕರ ಜತೆಗೆ ಮುಂಬೈನ ಹೋಟೆಲ್ ನಲ್ಲಿ ಇದ್ದಾರೆ.

ಅಂಥ ಶಿವರಾಮ್ ಹೆಬ್ಬಾರ್ ಬರೆದಿರುವ ಪತ್ರದ ಒಕ್ಕಣೆ ಏನು ಎಂಬುದನ್ನು ಇಡಿ ಇಡಿಯಾಗಿ ನಿಮ್ಮ ಮುಂದಿಡಲಾಗುತ್ತಿದೆ.

ಮುಂಬೈ ಹೊಟೆಲ್‌ನಿಂದ ಕ್ಷೇತ್ರದ ಜನರಿಗೆ ಬಹಿರಂಗ ಪತ್ರ ಬರೆದ ಶಾಸಕ***
ನನ್ನ ಆತ್ಮೀಯ ಕಾರ್ಯಕರ್ತರಲ್ಲಿ ಮತ್ತು ಮತದಾರ ಬಾಂಧವರಲ್ಲಿ ಇತ್ತೀಚಿನ ಹಠಾತ್ ರಾಜಕೀಯ ಬೆಳವಣಿಗೆ ಹಾಗೂ ಗೊಂದಲಗಳ ಕುರಿತು ಕ್ಷಮೆ ಯಾಚಿಸುತ್ತಾ, ಇಂಥ ಕಠಿಣ ನಿರ್ಧಾರಕ್ಕೆ ಬರಲೇಬೇಕಾದ ನನ್ನ ಅನಿವಾರ್ಯತೆ ಅಥವಾ ಅಸಹಾಯಕತೆಯ ಬಗ್ಗೆ ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.

what is there in shivaram hebbar facebook post

ಮಾನ್ಯರೇ, ಅಭಿವೃದ್ಧಿಯನ್ನೇ ಮಾನದಂಡವಾಗಿರಿಸಿಕೊಂಡು ಎರಡನೇ ಬಾರಿಗೆ ಶಾಸಕನಾಗಿ ಆಯ್ಕೆಯಾದ ನಾನು, ಈ ಮೈತ್ರಿ ಸರ್ಕಾರದಲ್ಲಿ ಸತತ 15 ತಿಂಗಳಲ್ಲಿ ತೀವ್ರ ಪ್ರಯತ್ನದ ಹೊರತಾಗಿಯೂ, ನನ್ನ ಕ್ಷೇತ್ರಕ್ಕೆ ಯಾವ ಹೊಸ ಯೋಜನೆಗಳನ್ನೂ ತರವಲ್ಲಿ ಯಶಸ್ಸು ಕಾಣಲಿಲ್ಲ.

ಸರ್ಕಾರದ ತಾರತಮ್ಯ ನೀತಿ ಒಂದೆಡೆಯಾದರೆ, ಪಕ್ಷದ ಹಿರಿಯ ನಾಯಕರೂ ಕೂಡ ನಮ್ಮ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸುವ ವ್ಯವಧಾನ ತೋರಿಸಲಿಲ್ಲ ಹಾಗೂ ಮುಂದೆ ನಿಂತು ಸಮಸ್ಯೆ ಬಗೆರಿಹರಿಸಬೇಕಾಗಿದ್ದ ಜಿಲ್ಲಾ ಮಂತ್ರಿಗಳಿಗಂತೂ ಜಿಲ್ಲೆಯಿಂದ ಆರಿಸಿ ಬಂದ ಪಕ್ಷದ ಇನ್ನೊಬ್ಬ ಶಾಸಕನಾದ ನನ್ನ ಕ್ಷೇತ್ರದ ಸಮಸ್ಯೆಗಳನ್ನು ಕೇಳಿಸಿಕೊಳ್ಳುವ ಕನಿಷ್ಠ ಕಾಳಜಿಯನ್ನು ತೋರಲಿಲ್ಲ.

ನಮ್ಮದು ಮಲೆನಾಡು ಜಿಲ್ಲೆಯಲ್ಲೆಗಳಲ್ಲಿಯೇ ಬೌಗೋಳಿಕವಾಗಿ ಅತ್ಯಂತ ದೊಡ್ಡ ಕ್ಷೇತ್ರ. ಕಾರ್ಯಕರ್ತರು, ಸಾರ್ವಜನಿಕರು, ವಿಶೇಷವಾಗಿ ನೀರಾವರಿ/ರಸ್ತೆಗಳು, ಆಸ್ಪತ್ರೆ ಹೀಗೆ ಹಲವು ಅರ್ಹ ಬೇಡಿಕೆ ಇದ್ದರೂ ಅದರ ಬಗ್ಗೆ ಸರ್ಕಾರದಿಂದ ಯಾವ ಬೆಂಬಲವೂ ಸಿಗುತ್ತಿಲ್ಲ, ಹೀಗೇ ಮುಂದುವರೆದರೆ ಅಭಿವೃದ್ಧಿಯ ಹೆಸರಲ್ಲಿ ಗೆಲ್ಲಿಸಿದ ಕ್ಷೇತ್ರದ ಮತದಾರರಿಗೆ ಮುಖ ತೋರಿಸುವುದಾದರೂ ಹೇಗೆ ಎನ್ನುವ ಪ್ರಶ್ನೆ....

ನನ್ನ ಹಿಂದಿನ ಅವಧಿಯಲ್ಲಿ ಕೈಗೆತ್ತಿಕೊಂಡ ಮಹತ್ವಾಕಾಂಕ್ಷಿ ಯೋಜನೆಯಾದ, ರೈತರಿಗೆ ಹಾಗೂ ಕೃಷಿಕರಿಗೆ ಅತ್ಯಂತ ಮಹತ್ವದ, ಹಲವಾರು ಕೆರೆ ತುಂಬುವ ಹಾಗೂ ಏತ ನೀರಾವರಿ ಯೋಜನೆಗಳನ್ನೂ ಪೂರ್ತಿಗೊಳಿಸುವುದಕ್ಕೆ ಹಾಗೂ ಮುಂದುವರಿದ ಎರಡನೇ ಹಂತದ ಯೋಜನೆಗೆ ಎಷ್ಟು ಬಾರಿ ಕೋರಿದರೂ ಈ ಸರ್ಕಾರದಿಂದ ಸರಿಯಾದ ಬೆಂಬಲ ಸಿಗಲಿಲ್ಲ.

ರಾಜ್ಯಾದ್ಯಂತ ಬಿಜೆಪಿ ಅಲೆಯಿದ್ದರೂ, ಅಭಿವೃದ್ಧಿಯನ್ನಷ್ಟೇ ಪರಿಗಣಿಸಿ ನನ್ನನ್ನು ಆರಿಸಿ ಕಳಿಸಿದ ನನ್ನ ಕ್ಷೇತ್ರದ ಜನರಿಗೆ ಯಾವ ಹೊಸ ಯೋಜನೆಗಳನ್ನೂ ತರಲಾಗದೇ, ತಂದ ಯೋಜನೆಯನ್ನು ಜಾರಿಗೊಳಿಸದೆ, ಸಮರ್ಥಿಸಿಕೊಳ್ಳುವುದಾದರೂ ಹೇಗೆ?

ನೀವೆಲ್ಲರೂ ನನ್ನನ್ನು 15-20 ವರ್ಷದಿಂದ ಹತ್ತಿರದಿಂದ ನೋಡಿದ್ದೀರಿ ಹಾಗೂ ನನ್ನ ವ್ಯಕ್ತಿತ್ವವನ್ನು ಬಲ್ಲಿರಿ. ಹಗಲೂ ರಾತ್ರಿ ನನ್ನ ಪರವಾಗಿ ಹಲವಾರು ಚುನಾವಣೆಯಲ್ಲಿ ಶ್ರಮಿಸಿದ್ದೀರಿ. ನಿಮ್ಮ ಶ್ರಮವನ್ನು ನಾನೆಂದೂ ಮರೆಯಲಾರೆ.

ನನ್ನ ಕಾರ್ಯಕರ್ತರ ಹಾಗೂ ಮತದಾರರ ಬೆಂಬಲದಿಂದ ಎರಡನೇ ಬಾರಿ ಶಾಸಕನಾಗಿದ್ದೇನೆ. ನನ್ನ ಮೊದಲೂ ಈ ಪ್ರದೇಶಕ್ಕೆ ಬೇರೆಯವರು ಶಾಸಕರಾಗಿದ್ದಾರೆ ಹಾಗೂ ನನ್ನ ನಂತರವೂ ಆಗುತ್ತಾರೆ. ಆದರೆ, ನನಗೆ ಸಿಕ್ಕಿರುವ ಅವಕಾಶದಲ್ಲಿ ನನ್ನ ಕ್ಷೇತ್ರದ ಜನರಿಗೆ/ರೈತರಿಗೆ ಬಹುಕಾಲ, ಮುಂದಿನ ಪೀಳಿಗೆಯೂ ನೆನಪಿಡುವಂತಹ ಶಾಶ್ವತ ಬೃಹತ್ ನೀರಾವರಿ ಯೋಜನೆಗಳನ್ನು ಈಗಾಗಲೇ ಕೈಗೆತ್ತಿಕೊಂಡಿದ್ದೇನೆ. ಏನೆ ಬೆಲೆ ತೆತ್ತಾದರೂ ಅದನ್ನು ಪೂರ್ಣಗೊಳಿಸಿ, ನನ್ನದೇ ಆದ ಅಭಿವೃದ್ಧಿಯ ಹೆಜ್ಜೆ ಗುರುತನ್ನು ಬಿಡುವ ಅಚಲ‌ ವಿಶ್ವಾಸ ಹೊಂದಿದ್ದೇನೆ.

ನನ್ನ ಕ್ಷೇತ್ರದ ಹಿತಾಸಕ್ತಿ ಬಿಟ್ಟು, ಯಾವುದೇ ಹಣ, ಆಸೆ ಆಮಿಷಗಳಿಗೆ ನನ್ನ ನೈತಿಕತೆಯನ್ನು ಮಾರಿಕೊಳ್ಳುವ ವ್ಯಕ್ತಿತ್ವ ಖಂಡಿತವಾಗಿಯೂ ನನ್ನದಲ್ಲ. ಅದರ ಅವಶ್ಯಕತೆಯೂ ನನಗಿಲ್ಲ.

ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ದಿನಂಪ್ರತಿ ಎರಡೂ ಪಕ್ಷಗಳ ನಾಯಕರ ಕಚ್ಚಾಟ ಹಾಗೂ ಸ್ವ-ಹಿತಾಸಕ್ತಿಗಳಿಂದಲೇ ಸುದ್ದಿಯಲಿದ್ದು, ಯಾವುದೇ ಅಭಿವೃದ್ಧಿ ಕೆಲಸಗಳಾಗದೇ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಅದರ ಭಾಗವಾದ ನಾವು, ಹಲವಾರು ಬಾರಿ ಸಾರ್ವಜನಿಕವಾಗಿ ಮುಜುಗರಕ್ಕೆ ಒಳಗಾಗಿದ್ದೇವೆ. ಈ ಮೈತ್ರಿಯಿಂದ ಪಕ್ಷಕ್ಕೂ ಕೂಡ ಭರಿಸಲಾಗದ ಹಾನಿಯಾಗಿದೆ. ಇದೇ ರೀತಿ ಅಭಿವೃದ್ಧಿ ಇಲ್ಲದೇ ಮಂದುವರಿದರೆ ಚುನಾವಣೆಯಲ್ಲಿ ಮುಂದೆ ಮತ ಕೇಳಲು ಕಷ್ಟವಾದೀತು.

ನನ್ನ ರಾಜೀನಾಮೆ ನಿನ್ನೆ-ಮೊನ್ನೆ ನಡೆದ ಹಠಾತ್ ಬೆಳವಣಿಗೆಯಲ್ಲ. ಸತತ 15 ತಿಂಗಳು ಅಳೆದೂ-ತೂಗಿ, ಪಕ್ಷದ/ಸರ್ಕಾರದ ಪರಿಮಿತಿಯಲ್ಲಿ ಎಲ್ಲಾ ಪ್ರಯತ್ನ ಗಳೂ ಮುಗಿದ ಮೇಲೆ, 3 ತಿಂಗಳು ಮುಂಚಿತವಾಗಿಯೇ ಮುಖಂಡರಿಗೆ ತಿಳಿಸಿ, ಅನಿವಾರ್ಯವಾಗಿ,
ಸರ್ಕಾರದ ಧೋರಣೆಯಿಂದ ಬೇಸತ್ತಿದ್ದ ಹಲವು ಸಮಾನ ಮನಸ್ಕ ಶಾಸಕರೊಡನೆ ಸಮಾಲೋಚಿಸಿ, ಈ ನಿರ್ಧಾರಕ್ಕೆ ಬಂದಿರುತ್ತೇನೆ.

ಅಭಿವೃದ್ಧಿಯಿಲ್ಲದೇ ಇದ್ದರೂ 5 ವರ್ಷ ಸಿಕ್ಕ ಅಧಿಕಾರವನ್ನು ಅನುಭವಿಸಿ, ಶಾಸಕನಾಗೇ ಮುಂದುವರೆಯುವುದು ಸುಲಭದ ಆಯ್ಕೆಯಾಗಿತ್ತು. ಆದರೆ ಕ್ಷೇತ್ರದ ಹಿತಾಸಕ್ತಿಗಾಗಿ ರಾಜೀನಾಮೆ ಕೊಟ್ಟು, ಅದರ ಪರಿಣಾಮಗಳನ್ನು ಎದುರಿಸಿ, ಪಕ್ಷದ ನಾಯಕರ ಸಿಟ್ಟು, ಅಧಿಕಾರದ ಬಲ ಪ್ರಯೋಗಗಳನ್ನೂ ಎದುರಿಸಿ, ಮತ್ತೆ ಜನರ ಬಳಿ ಹೋಗುವ ಗಟ್ಟಿಯಾದ ನಿರ್ಧಾರ ಮಾಡಿದ್ದೇನೆ. ಆದರೆ ಇನ್ನೂ ಪಕ್ಷದಲ್ಲಿಯೇ ಇದ್ದೇನೆ.

ಅತೀ ಶೀಘ್ರದಲ್ಲಿಯೇ ಕ್ಷೇತ್ರದಾದ್ಯಂತ ಸಂಚರಿಸಿ ಎಲ್ಲ ಕಾರ್ಯಕರ್ತರಲ್ಲಿ ಈ ಎಲ್ಲ ವಿಷಯ ಚರ್ಚಿಸುತ್ತೇನೆ.

ಆದರೂ ಈ ಎಲ್ಲಾ ರಾಜಕೀಯ ಬೆಳವಣಿಗೆಗಳು, ಕ್ಷೇತ್ರದಿಂದ 8-10 ದಿನ ಹೊರಗುಳಿಯಬೇಕಾದ ಅನಿವಾರ್ಯತೆ, ಎಲ್ಲದಕ್ಕೂ ನಾನು ಮನಃಪೂರ್ವಕವಾಗಿ ಕ್ಷಮೆ ಯಾಚಿಸುತ್ತೇನೆ.

ನಾನು ಎಲ್ಲೇ ಇರಲಿ ಎಲ್ಲ ವರ್ಗದ ಜನರು ಹಾಗೂ ನನ್ನ ಕಾರ್ಯಕರ್ತರನ್ನು ವಿಶ್ವಾಸದಿಂದ ನಡೆಸಿಕೊಂಡುಹೋಗುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ, ಇನ್ನೂ ಹೆಚ್ಚಿನ ರೀತಿಯ ಅಭಿವೃದ್ಧಿ ಕೆಲಸಗಳು ಮುಂದುವರಿಯಲಿದೆ ಎಂಬ ಭರವಸೆಯೊಂದಿಗೆ.
ನಿಮ್ಮ ಸಹಕಾರವಿರಲಿ.

ತಮ್ಮ ವಿಶ್ವಾಸಿ
ಶಿವರಾಮ ಹೆಬ್ಬಾರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+