ಮುಂಬೈ ಹೊಟೆಲ್ನಿಂದ ಕ್ಷೇತ್ರದ ಜನರಿಗೆ ಬಹಿರಂಗ ಪತ್ರ ಬರೆದ ಶಾಸಕ
ಮುಂಬೈ, ಜುಲೈ 15: ಮೈತ್ರಿ ಸರ್ಕಾರದ ಮೇಲೆ ಮುನಿಸಿಕೊಂಡು ರಾಜೀನಾಮೆ ನೀಡಿ ಮುಂಬೈನ ಐಶಾರಾಮಿ ಹೊಟೆಲ್ ಸೇರಿರುವ ಅತೃಪ್ತ ಶಾಸಕ ಶಿವರಾಮ್ ಹೆಬ್ಬಾರ್ ಅವರು ತಮ್ಮ ಕ್ಷೇತ್ರದ ಜನರಿಗೆ ಫೇಸ್ಬುಕ್ನಲ್ಲಿ ಬಹಿರಂಗ ಪತ್ರ ಬರೆದಿದ್ದಾರೆ.
ಪ್ರಸ್ತುತ ಮುಂಬೈನ ರಿನೈಸೆನ್ಸ್ ಹೊಟೆಲ್ನಲ್ಲಿರುವ ಶಿವರಾಮ್ ಹೆಬ್ಬಾರ್ ಅವರು ಫೇಸ್ಬುಕ್ನಲ್ಲಿ ನಿನ್ನೆ ತಡರಾತ್ರಿ ಸುದೀರ್ಘವಾದ ಪೋಸ್ಟ್ ಒಂದನ್ನು ಹಾಕಿದ್ದು, ರಾಜೀನಾಮೆಗೆ ಕಾರಣ ನೀಡುವ ಜೊತೆಗೆ, ರಾಜೀನಾಮೆ ಅತ್ಯಂತ ಅವಶ್ಯಕವಾಗಿತ್ತು ಎಂದು ಸಮರ್ಥಿಸಿಕೊಳ್ಳುವ ಕಾರ್ಯ ಮಾಡಿದ್ದಾರೆ.
ಧಿಡೀರ್ ರಾಜಕೀಯ ಬೆಳವಣಿಗೆಗಳ ಬಗ್ಗೆ ಕ್ಷೇತ್ರದ ಜನರ ಕ್ಷಮೆ ಕೋರಿರುವ ಯಲ್ಲಾಪುರ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಅವರು, ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಈ ರಾಜೀನಾಮೆ ಅನಿವಾರ್ಯವೂ, ಅವಶ್ಯಕವೂ ಆಗಿತ್ತು ಎಂದು ಹೇಳಿದ್ದಾರೆ.

ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತುರುವುದು ಅಸಾಧ್ಯ ಎನಿಸುವಂತಹಾ ಸ್ಥಿತಿ ನಿರ್ಮಾಣವಾಗಿತ್ತು, ಪಕ್ಷದ ಹಿರಿಯರು, ಜಿಲ್ಲಾ ಸಚಿವರೂ ಸಹ ನನ್ನ ಮನವಿಗೆ ಸ್ಪಂದಿಸುವ ವ್ಯವಧಾನ ತೋರಲಿಲ್ಲ ಹಾಗಾಗಿ ಬಹಳ ಯೋಚಿಸಿ ಈ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಶೀವರಾಮ್ ಹೆಬ್ಬಾರ್ ಹೇಳಿದ್ದಾರೆ.
ಬಿಜೆಪಿ ಅಲೆ ಇದ್ದರೂ ಸಹ, ಅಭಿವೃದ್ಧಿ ದೃಷ್ಟಿಯಿಂದ ನನ್ನನ್ನು ಗೆಲ್ಲಿಸಿದ ನಿಮಗೆ ಧನ್ಯವಾದ ಆದರೆ ಈ ರಾಜೀನಾಮೆ ಅತ್ಯವಶ್ಯಕವಾಗಿತ್ತು, ಈ ನಿರ್ಣಯದ ಬಗ್ಗೆ ಪಕ್ಷದ ಹಿರಿಯರಿಗೆ ಈ ಮೊದಲೇ ತಿಳಿಸಿದ್ದೆ ಎಂದಿರುವ ಶಿವರಾಮ್ ಹೆಬ್ಬಾರ್, ಈ 8-10 ದಿನಗಳು ಕ್ಷೇತ್ರದಿಂದ ದೂರ ಇರುತ್ತೇನೆ ಇದಕ್ಕಾಗಿ ಕ್ಷಮೆ ಇರಲಿ ಎಂದು ಬರೆದುಕೊಂಡಿದ್ದಾರೆ.












Click it and Unblock the Notifications