ಕುಸಿದ ಅಂತರ್ಜಲ ಮಟ್ಟ: ಉತ್ತರ ಕನ್ನಡದಲ್ಲಿ ನೀರಿಗಾಗಿ ಹಾಹಾಕಾರ
ಕಾರವಾರ, ಮೇ 24: ಉತ್ತರ ಕನ್ನಡದಲ್ಲಿ ದಿನ ಕಳೆದಂತೆ ಬಿಸಿಲು ಕೆಂಡದಂತಾಗಿದೆ. ಅಂತರ್ಜಲ ಮಟ್ಟ ಪಾತಾಳಕ್ಕೆ ತಲುಪಿದ್ದು, ನೀರಿಗಾಗಿ ಹಾಹಾಕಾರ ಶುರುವಾಗಿದೆ. ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗಿರುವ ಕಾರಣ ಕೆಲವೆಡೆ ಟ್ಯಾಂಕರ್ಗಳ ಮೂಲಕ ನೀರು ಪೂರೈಸಿ ದಾಹ ತೀರಿಸುವ ಪರಿಸ್ಥಿತಿ ಬಂದೊದಗಿದೆ.
ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ಬೀಸಿಲಿ ತಾಪಕ್ಕೆ ಜನ ನಿತ್ಯವೂ ಬಸವಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದೆರಡು ದಿನದ ಹಿಂದೆ ಕೆಲ ಗಂಟೆ ಮಳೆ ಸುರಿದಿತ್ತಾದರೂ ಮತ್ತೆ ಮಳೆ ಮಾಯವಾಗಿದ್ದು, ಸೆಕೆ ಮತಷ್ಟು ಹೆಚ್ಚಾಗಿದೆ. ಮಾತ್ರವಲ್ಲದೆ ಜಿಲ್ಲೆಯ ಪ್ರಮುಖ ನದಿಗಳಲ್ಲಿ ನೀರಿನ ಹರಿವು ನಿಲ್ಲುವ ಹಂತಕ್ಕೆ ತಲುಪಿದ್ದು, ನದಿಗಳಿಂದ ನೀರು ಪೂರೈಕೆಯೇ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ಅದರಲ್ಲಿಯೂ ಕರಾವಳಿ ಭಾಗದಲ್ಲಿ ನೀರು ಬರಿದಾಗುತ್ತಿರುವ ಬೆನ್ನಲ್ಲೇ ಇರುವ ಅಲ್ಪ ಸ್ವಲ್ಪ ನೀರಿಗೂ ಉಪ್ಪು ನೀರು ಸೇರಿಕೊಳ್ಳುತ್ತಿರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.

ಕಾರವಾರ, ಅಂಕೋಲಾ ನಗರ ಹಾಗೂ ವಿವಿಧ ಗ್ರಾಮಗಳಿಗೆ ನೀರು ಪೂರೈಸುವ ಗಂಗಾವಳಿ, ಕುಮಟಾ, ಹೊನ್ನಾವರಕ್ಕೆ ನೀರು ಪೂರೈಸುವ ಅಘನಾಶಿನಿಯಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಶಿರಸಿ ನಗರಕ್ಕೆ ನೀರು ಪೂರೈಸುವ ಕೆಂಗ್ರೆ ಹೋಳೆ ಹರಿವು ನಿಲ್ಲಿಸಿದೆ. ಭಟ್ಕಳದಲ್ಲಿ ಕಡವಿನಕಟ್ಟಾ ಡ್ಯಾಂನಲ್ಲಿ ನೀರು ಕಡಿಮೆಯಾಗಿದೆ.
ಸದ್ಯ ಎಲ್ಲ ನಗರಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗದಿದ್ದರೂ, ಇದೇ ವಾತಾವರಣ ಮುಂದುವರಿದಲ್ಲಿ ತಿಂಗಳ ಅಂತ್ಯಕ್ಕೆ ಎಲ್ಲಾ ನದಿಗಳಿಂದ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಳ್ಳುವ ಆತಂಕ ಶುರುವಾಗಿದೆ. ಕಳೆದ ಬಾರಿ ಜಿಲ್ಲೆಯ 111 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗಿತ್ತು.

ಈ ಬಾರಿ ಜಿಲ್ಲೆಯ 110 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಬಹುದು ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಅಂದಾಜಿಸಿದೆ. ಕಾರವಾರ ಕಾಳಿ ನದಿಯ ಬಲ ದಂಡೆಯಲ್ಲಿರುವ ಹಣಕೋಣ, ಕದ್ರಾ, ಗೋಟೆಗಾಳಿ ಅಸ್ನೋಟಿ ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಸ್ನೋಟಿ ಗ್ರಾಪಂನಲ್ಲಿ ಈಗಾಗಲೇ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಕದ್ರಾ ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಕಂಡುಬಂದಿದ್ದು, ಗ್ರಾಮಸ್ಥರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ.
ಹಳಿಯಾಳದ ಮಂಗಳವಾಡ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಉಂಟಾದ ಬಗ್ಗೆ ಖಾಲಿ ಕೊಡ ಹಿಡಿದು ಪ್ರತಿಭಟನೆ ನಡೆಸಿದ್ದು, ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ತುರ್ತು ಪರಿಹಾರಕ್ಕೆ ಸೂಚನೆ
ಜಿಲ್ಲೆಯಲ್ಲಿ ಈವರೆಗೆ ಯಾವುದೇ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿಲ್ಲ. ಇದರಿಂದ ನೀರು ಪೂರೈಕೆಗೆ ಯಾವುದೇ ವಿಶೇಷ ಅನುದಾನ ಇಲ್ಲದಂತಾಗಿದೆ. ಸ್ಥಳೀಯ ಅನುದಾನ ಹೊಂದಿಸಿಕೊಂಡು ಸಮಸ್ಯೆಗೆ ತುರ್ತು ಪರಿಹಾರ ಕಂಡುಕೊಳ್ಳಲು ಸೂಚಿಸಲಾಗಿದೆ. ತೀರ ಅಗತ್ಯವಿದ್ದಲ್ಲಿ ಬೋರ್ವೆಲ್ಗಳನ್ನು ಅಳವಡಿಸಬೇಕು.
ಪೈಪ್ಲೈನ್ ಇದ್ದು, ನೀರು ಸಿಗುತ್ತಿಲ್ಲ ಎಂದಾದರೆ ಪೈಪ್ಲೈನ್ ದುರಸ್ತಿಗೆ ಕ್ರಮ ವಹಿಸಬೇಕು. ಇದ್ಯಾವುದೂ ಆಗದೇ ಇದ್ದಲ್ಲಿ ಅಂತಿಮವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಬೇಕು ಎಂದು ತಾಲೂಕು ಪಂಚಾಯಿತ್ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಲಾಗಿದೆ. ಆದರೆ ಈ ಎಲ್ಲ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ ಎಂದು ಎಂದು ಜಿಪಂ ಸಿಇಒ ಈಶ್ವರ ಕಾಂದೂ ತಿಳಿಸಿದ್ದಾರೆ.
ಸದ್ಯ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ-13, ಭಟ್ಕಳ-11, ಹಳಿಯಾಳ-8, ಹೊನ್ನಾವರ-19, ಕಾರವಾರ-10, ಕುಮಟಾ-12, ಮುಂಡಗೋಡ-10, ಸಿದ್ದಾಪುರ-7, ಶಿರಸಿ-6, ಜೊಯಿಡಾ-3, ಯಲ್ಲಾಪುರದ-2 ಗ್ರಾಮಗಳಲ್ಲಿ ನೀರಿನ ಅಭಾವ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ.











Click it and Unblock the Notifications