ಕದ್ರಾದಿಂದ ಕಾಳಿ ನದಿಗೆ ಬಿಡುವ ನೀರಿನಿಂದ ಪ್ರವಾಹ, ಶಾಶ್ವತ ಪರಿಹಾರಕ್ಕೆ ಆಗ್ರಹ!
ಕಾರವಾರ, ಜುಲೈ 20: ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರಿಸುತ್ತಿದ್ದ ಮಳೆ ಕೊಂಚ ಕಡಿಮೆಯಾಗಿದೆ. ನದಿ ತೀರದ ಜನರಲ್ಲಿ ಆದರೂ ಪ್ರವಾಹದ ಆತಂಕ ದೂರವಾಗಿಲ್ಲ. ಅದರಲ್ಲಿಯೂ ಕದ್ರಾ ಜಲಾಶಯದಿಂದ ಪ್ರತಿ ವರ್ಷವೂ ಒಮ್ಮೆಲೆ ಸೃಷ್ಟಿಯಾಗುವ ನೆರೆಯಿಂದಾಗಿ ಜೀವ ಭಯದಲ್ಲಿ ಬದುಕುತ್ತಿರುವ ಈ ಭಾಗದ ಮಂದಿ ಇದೀಗ ಶಾಶ್ವತ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಾಳಿ ನದಿ ಪಾತ್ರದ ಜನರಿಗೆ ಮಳೆ ನಿಂತರೂ ನೆರೆ ಆತಂಕ ಕಾಡತೊಡಗಿದೆ. ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಕಾಳಿ ನದಿ ಉಕ್ಕಿ ಹರಿದ ಪರಿಣಾಮ ಕಾರವಾರ ತಾಲೂಕಿನ ಕದ್ರಾ ಜಲಾಶಯದಿಂದ ನೀರನ್ನು ಹೊರ ಬಿಡುತ್ತಿದ್ದಾರೆ.
ಕಳೆದ ಮೂರು ವರ್ಷಗಳಿಂದಲೂ ಈ ಜಲಾಶಯದಿಂದ ನೀರು ಹೊರಬಿಟ್ಟ ಕಾರಣದಿಂದಾಗಿ ಕದ್ರಾ, ಮಲ್ಲಾಪುರ, ಕುರ್ನಿಪೇಟೆ ಸೇರಿದಂತೆ ನದಿ ಪಾತ್ರದ ಹಲವು ಗ್ರಾಮಗಳಲ್ಲಿ ನೆರೆಯಿಂದ ಜನರಿಗೆ ಸಾಕಷ್ಟು ಹಾನಿಯಾಗಿತ್ತು. ಆದರೆ ನೆರೆಯಿಂದ ಮನೆಗಳನ್ನು ಕಳೆದುಕೊಂಡವರಿಗೆ ಸರ್ಕಾರ ನಿಗದಿಪಡಿಸಿದ್ದ ಪರಿಹಾರ ಕೂಡ ಇನ್ನು ಬಿಡುಗಡೆಯಾಗಿಲ್ಲ.
ಆದರೆ ಈ ಬಾರಿ ಮತ್ತೆ ಮಳೆಯಾಗುತ್ತಿದ್ದು ಜಲಾಶಯದಿಂದ ಸುಮಾರು 40 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡುತ್ತಿದ್ದಾರೆ. ಇದೇ ರೀತಿ ಮಳೆ ಮುಂದುವರೆದರೆ ಜಲಾಶಯದ ನೀರು ಭರ್ತಿಯಾಗಿ ಹೆಚ್ಚಿನ ನೀರು ಬಿಡುವುದರಿಂದ ನೆರೆ ಸೃಷ್ಟಿಯಾಗುವ ಭೀತಿ ಎದುರಾಗಿದೆ.
ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಿ ಜಲಾಶಯದಿಂದ ಆಗುತ್ತಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು. ಪದೇ ಪದೇ ನೆರೆಯಿಂದ ತಾವು ಸಮಸ್ಯೆಗೆ ಸಿಲುಕಿಕೊಳ್ಳಲು ಸಾಧ್ಯವಿಲ್ಲ. ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದು ಇನ್ನಾದರೂ ನಮಗೂ ನೆಮ್ಮದಿಯಿಂದ ಬದುಕಲು ಅನುಕೂಲಮಾಡಿಕೊಡಬೇಕು ಎಂದು ಕದ್ರಾ ಅಣೆಕಟ್ಟು ನೆರೆ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಉದಯ ನಾಯ್ಕ ಆಗ್ರಹಿಸಿದ್ದಾರೆ.

ಹೂಳು ತೆಗೆಸಲು ಆಗ್ರಹ
ಇನ್ನು ಕದ್ರಾ ಡ್ಯಾಂ ನಿರ್ಮಾಣವಾಗಿ ನಾಲ್ಕು ದಶಕಗಳೇ ಕಳೆದಿದೆ. ಡ್ಯಾಂ ನಲ್ಲಿ ಇದೀಗ 17 ಮೀ ನಷ್ಟು ಹೂಳೆ ತುಂಬಿಕೊಂಡಿದೆ. ಭಾರೀ ಮಳೆ ಬಂದಾಗ ನೀರಿನ ಒಳ ಹರಿವು ಹೆಚ್ಚಾಗಿ ಬೇಗ ಜಲಾಶಯ ಭರ್ತಿಯಾಗಲಿದ್ದು ನೀರನ್ನು ಏಕಾಏಕಿ ಹೊರಬಿಡಲಾಗುತ್ತಿದೆ. ಇದರಿಂದ ಇಲ್ಲಿ ವಾಸಿಸುವ ಜನರು ನೆರೆ ಸಮಸ್ಯೆ ಅನುಭವಿಸುವಂತಾಗಿದೆ. ಕೂಡಲೇ ಡ್ಯಾಂ ಹೂಳು ತೆಗೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡು ಪ್ರವಾಹ ಪರಿಸ್ಥಿತಿ ಎದುರಾಗುವುದನ್ನು ತಡೆಗಟ್ಟಬೇಕು ಎಂದು ಇಲ್ಲಿನ ಸ್ಥಳೀಯರು ಆಗ್ರಹಿಸಿದ್ದಾರೆ.

ಸಭಾಭವನಕ್ಕೆ ಮನವಿ
ಇನ್ನು ನೆರೆ ಸಂತ್ರಸ್ತರಿಗೆ ಪ್ರವಾಹ ಪರಿಸ್ಥಿತಿಯಲ್ಲಿ ಉಳಿಯಲು ಸೂಕ್ತ ಪ್ರದೇಶದಲ್ಲಿ ಕಟ್ಟಡ ಅಥವಾ ಸಭಾಭವನ ನಿರ್ಮಿಸುವಂತೆ ಇಲ್ಲವೇ ಊರನ್ನೇ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಹಾಗೂ ಉಸ್ತುವಾರಿ ಮಂತ್ರಿಗಳಿಗೆ ಮನವಿ ನೀಡಲಾಗಿತ್ತು. ಆದರೆ ಅದು ಕಾಗದಲ್ಲಿಯೇ ಉಳಿದಿದೆ. ಮುಂದಿನ ದಿನಗಳಲ್ಲಿ ನಮ್ಮ ಮನವಿ ಈಡೇರದಿದ್ದರೆ ಹೋರಾಟ ಮಾಡುವುದು ಅನಿವಾರ್ಯ ಎಂದು ಹೋರಾಟ ಸಮಿತಿ ಸದಸ್ಯರು ಎಚ್ಚರಿಸಿದ್ದಾರೆ.

ಪರಿಹಾರ ಹಣ ಕೈಸೇರಿಲ್ಲ
ಇನ್ನು ಕಳೆದ ವರ್ಷದ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ ಧನ ಇನ್ನು ಕೈಗೆ ಬಂದಿಲ್ಲ. ಕೆಲವರಿಗೆ ಮೊದಲ ಕಂತಿನ 90 ಸಾವಿರ ಹಣ ಮಾತ್ರ ಬಂದಿದೆ. ಅದರೊಂದಿಗೆ ಅವರ ಬಳಿ ಇದ್ದ ಹಣವನ್ನು ಸೇರಿಸಿ ಮನೆ ನಿರ್ಮಾಣಕ್ಕೆ ಇಳಿದಿದ್ದಾರೆ. ಈಗ ಮುಂದಿನ ಕಂತು ಬಿಡುಗಡೆ ಮಾಡದೆ ಹೆಚ್ಚಿನ ಜನರು ತೊಂದರೆಯಲ್ಲಿದ್ದು ಕೂಡಲೇ ಪರಿಹಾರದ ಹಣ ಬಿಡುಗಡೆಗೆ ಆಗ್ರಹಿಸಿದ್ದಾರೆ.

ಕೆಪಿಸಿಎಲ್ಗಾಗಿ ಆಸ್ತಿ ಕಳೆದುಕೊಂಡವರ ಅಳಲು
"ಕೆಪಿಸಿಎಲ್ನವರು ಸಿಎಸ್ಆರ್ ಅನುದಾನವನ್ನು ಈವರೆಗೂ ಬಳಕೆ ಮಾಡಿಕೊಂಡ ಬಗ್ಗೆ ಇಲ್ಲಿನ 4 ಪಂಚಾಯತಿಗಳಲ್ಲಿಯೂ ದಾಖಲೆಗಳಿಲ್ಲ. ಈ ಅನುದಾನದಿಂದ ನಮಗೆ ಬೇರೆಡೆ ಮನೆ ನಿರ್ಮಿಸಿ ಕೊಡಬಹುದು, ಆದರೆ ಅಂತಹ ಕೆಲಸಕ್ಕೆ ಮುಂದಾಗಿಲ್ಲ. ಅಲ್ಲದೇ ಕೆಪಿಸಿಎಲ್ ಯೋಜನೆಗೆ ನಮ್ಮ ಅಸ್ತಿ ಕಳೆದುಕೊಂಡು ಈಗ ಪರದಾಡುತಿದ್ದೇವೆ. ಆದರೂ ನಮ್ಮವರಿಗೆ ಅಲ್ಲಿ ಉದ್ಯೋಗ ಅವಕಾಶಗಳೇ ಇಲ್ಲ. ಹೀಗೆ ಮುಂದುವರೆದರೆ ಕೆಪಿಸಿಎಲ್ ಎದುರು ಪ್ರತಿಭಟನೆ ಮಾಡುತ್ತೇವೆ" ಎಂದು ಕದ್ರಾ ಆಣೆಕಟ್ಟು ನೆರೆ ಸಂತ್ರಸ್ತರ ಹೋರಾಟ ಸಮಿತಿಯ ಉಪಾಧ್ಯಕ್ಷೆ ಅಶ್ವಿನಿ ಪೆಡ್ನೇಕರ್ ಎಚ್ಚರಿಸಿದ್ದಾರೆ.












Click it and Unblock the Notifications