ಮಕ್ಕಳಿಗೆ ಬಲೂನ್ ಕೊಡುವ ಮುನ್ನ ಎಚ್ಚರ: ಉತ್ತರ ಕನ್ನಡದಲ್ಲಿ ಬಾಲಕ ದಾರುಣ ಸಾವು
ಉತ್ತರ ಕನ್ನಡ, ಡಿಸೆಂಬರ್ 02: ಪ್ರಸ್ತುತ ದಿನಗಳಲ್ಲಿ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುವುದೇ ಪೋಷಕರಿಗೆ ದೊಡ್ಡ ಸವಾಲಾಗಿದೆ. ಮಕ್ಕಳು ಏನೇ ಆಟವಾಡುತ್ತಿದ್ದರು ಸಾವಿರ ಸಲ ಗಮನಿಸಬೇಕಾದ ಪರಿಸ್ಥಿತಿ ಬಂದಿದೆ. ಮಕ್ಕಳು ಮೊಬೈಲ್ಗಳಲ್ಲೇ ಆಟವಾಡುತ್ತಾ ಮುಳುಗಿರುತ್ತಾರೆ ಎಂದು ಇತರ ಬೇರೆ ವಸ್ತುಗಳನ್ನು ನೀಡಿದರೆ ಅದರಿಂದ ಕೂಡ ಅಪಾಯಗಳು ಸಂಭವಿಸುತ್ತದೆ. ಇದೇ ರೀತಿಯ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ.
ಆಟವಾಡಲು ಬಲೂನ್ ಊದುತ್ತಿದ್ದ ಬಾಲಕ ಏಕಾಏಕಿ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ನಡೆದಿದೆ. ಜೋಗನಕೊಪ್ಪ ಗ್ರಾಮದ ನವೀನ ನಾರಾಯಣ ಬೆಳಗಾಂವಕರ (13) ಮೃತ ಬಾಲಕ ಎಂದು ಗುರುತಿಸಲಾಗಿದೆ.

ಹದಿಮೂರು ವರ್ಷದ ನವೀನ ನಾರಾಯಣ ಬೆಳಗಾಂವಕರ ನಿನ್ನೆ (ಡಿಸೆಂಬರ್ 01) ಭಾನುವಾರ ರಾತ್ರಿ ವೇಳೆ ಆಟವಾಡಲು ಬಲೂನು ಊದುತ್ತಿದ್ದ. ಈ ವೇಳೆ ಗಾಳಿಯ ರಭಸಕ್ಕೆ ಬಾಯಿಂದ ಗಾಳಿ ತುಂಬುವಾಗ ಬಲೂನ್ ತಿರುಗಿ ಬಂದು ಬಾಲಕನ ಗಂಟಲಿಗೆ ಸಿಲುಕಿಕೊಂಡಿದೆ. ಮೊದಲು ಬಾಲಕನ ಗಂಟಲಲ್ಲಿ ಸಿಲುಕಿದ್ದ ಬೂಲುನನ್ನು ಪೋಷಕರೇ ತೆಗೆಯಲು ಪ್ರಯತ್ನಿಸಿದ್ದಾರೆ. ಇದರಿಂದ ಬಾಲಕನಿಗೆ ಉಸಿರಾಡಲು ಮತ್ತಷ್ಟು ಕಷ್ಟವಾಗಿದೆ ಎನ್ನಲಾಗಿದೆ.
ಕೂಡಲೇ ಬಾಲಕನನ್ನು ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಬಲೂನ್ ಗಂಟಲಿಗೆ ಸಿಲುಕಿದ ಕಾರಣ ತೆಗೆಯಲು ಆಗದೇ ಉಸಿರುಗಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವನ್ನಪ್ಪಿದ್ದಾನೆ. ಮೃತ ಬಾಲಕ ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಹದಿಮೂರು ವರ್ಷದ ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಹಳಿಯಾಳ ಪೋಲಿಸರು ಬಾಲಕ ಸಾವನ್ನಪ್ಪಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಪ್ಪಳ: ಗೀಸರ್ ಸ್ಫೋಟ.. ಐವರ ಸ್ಥಿತಿ ಗಂಭೀರ
ಗ್ಯಾಸ್ ಗೀಸರ್ ಸ್ಫೋಟಗೊಂಡು ಐವರು ಗಂಭೀರವಾಗಿ ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಬಸ್ ಡಿಪೋ ಹತ್ತಿರದ ಮನೆಯೊಂದರಲ್ಲಿ ಏಕಾಏಕಿ ಗ್ಯಾಸ್ ಗೀಸರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಪ್ರೀತಿ, ಶೋಭಾ, ಶೃತಿ, ಭಾಗ್ಯಮ್ಮ ಹಾಗೂ ಕವಿತಾ ಚಂದ್ರಶೇಖರ್ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಗಾಯಾಳುಗಳನ್ನು ಗಂಗಾವತಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಗಂಗಾವತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications