ಉತ್ತರ ಕನ್ನಡ: ಹರಿಯುವ ಹಳ್ಳಗಳೇ ಹಳ್ಳಿಗರಿಗೆ ಕಂಟಕ
ಕಾರವಾರ, ಜೂನ್.24: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದಿವೆ. ಆದರೆ, ಈವರೆಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅದೆಷ್ಟೋ ಹಳ್ಳಿಗಳಿಗೆ ಹೊರ ಪ್ರಪಂಚದ ಸಂಪರ್ಕವೇ ಇಲ್ಲ. ಒಂದು ಗ್ರಾಮದಿಂದ ಇನ್ನೊಂದು ಗ್ರಾಮಕ್ಕೆ ಬರಬೇಕೆಂದರೆ ಏನಾದರೊಂದು ಸಾಹಸ ಮಾಡಿಯೇ ತಲುಪುವ ಪರಿಸ್ಥಿತಿ ಈ ಹಳ್ಳಿಗರದ್ದು.
ಅಂಥ ಹಳ್ಳಿಗಳ ಸಾಲಿಗೆ ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೇಳೂರು ಗ್ರಾಮದ ಹಿಣೆಬೈಲ್ ಹಾಗೂ ಬಿಚ್ಚಾಂಡೆ ಹಳ್ಳಿಗಳು ಕೂಡ ಸೇರುತ್ತವೆ.
ಹಳ್ಳಿಗಳಲ್ಲಿ ಉದ್ಯೋಗ ಸೃಷ್ಟಿಗೆ ಮಿನಿ ಸೂಪರ್ ಮಾರ್ಕೆಟ್!
ಜಿಲ್ಲಾ ಕೇಂದ್ರ ಕಾರವಾರದಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಈ ಎರಡು ಹಳ್ಳಿಗಳಲ್ಲಿ ಗುನಗಿ, ಗೌಡ ಹೀಗೆ ವಿವಿಧ ಸಮುದಾಯದ ಕುಟುಂಬಗಳು ವಾಸಿಸುತ್ತಿವೆ. ಪಾಲಕರೆಲ್ಲರೂ ವಿದ್ಯೆ ಕಲಿಯದಿದ್ದರೂ ಮಕ್ಕಳಿಗೆ ಶಿಕ್ಷಣ ನೀಡುವ ಹಂಬಲ ಇಲ್ಲಿನವರದ್ದು.
ಆದರೆ, ಶಿಕ್ಷಣ ನೀಡುವ ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಇವರಿಗೆ ಈ ಹಳ್ಳಿಗಳಲ್ಲಿ ಹರಿಯುವ ಹಳ್ಳಗಳೇ ಕಂಟಕವಾಗಿದೆ...
ಸಾಹಸ ಮಾಡಿ ಹಳ್ಳ ದಾಟುವ ಜನರು
ಹಿಣೆಬೈಲ್ ಹಾಗೂ ಶಿರ್ಲೆಗದ್ದೆ ನಡುವೆ ಹಿಣೆಬೈಲ್ ಹಳ್ಳವೊಂದಿದೆ. ಇದು ಮಳೆಗಾಲದಲ್ಲಿ ತುಂಬಿ ಹರಿಯುತ್ತದೆ. ಈ ಸಂದರ್ಭದಲ್ಲಿ ಹಳ್ಳದಲ್ಲಿ ನಡೆದು ಆಚೆ ತಲುಪುವುದು ಅಪಾಯಕಾರಿಯಾಗಿದೆ. ನೀರಿನ ಹರಿವು ಕಡಿಮೆಯಾದ ಮೇಲಷ್ಟೇ ಹಳ್ಳವನ್ನು ದಾಟಬಹುದಾಗಿದೆ. ಆದರೆ, ಸಾಹಸ ಮಾಡಿ ಇಲ್ಲಿನ ಜನರು ಈ ಹಳ್ಳವನ್ನು ದಾಟುತ್ತಾರೆ. ದಾಟಲೇಬೇಕು ಕೂಡ.
ಮಳೆಯಾದರೆ ಮಕ್ಕಳಿಗೆ ರಜೆ
ಮಕ್ಕಳಿಗೆ ಶಿಕ್ಷಣ ನೀಡಲು ಈ ಸಾಹಸ ಅನಿವಾರ್ಯವಾಗಿದೆ. ಹಳ್ಳದಾಚೆಯಲ್ಲಿ ಅಂಗನವಾಡಿ ಕೇಂದ್ರ ಇರುವುದರಿಂದ ಹಿಣೆಬೈಲ್ ನ ಮಕ್ಕಳು ಈ ಹಳ್ಳ ದಾಟಿಯೇ ಆ ಕಡೆ ತೆರಳಬೇಕು. ಆದರೆ, ಚಿಕ್ಕ ಚಿಕ್ಕ ಮಕ್ಕಳಿರುವುದರಿಂದ ನೀರಿನಲ್ಲಿ ಕೊಚ್ಚಿ ಹೋಗುವ ಭಯ ಅವರ ಪಾಲಕರಲ್ಲಿದೆ.
ಹೀಗಾಗಿ ಪಾಲಕರೇ ಮಕ್ಕಳನ್ನ ಎತ್ತಿಕೊಂಡು ಹಳ್ಳದಾಚೆ ಬಿಟ್ಟು ಬರುವ ಪರಿಸ್ಥಿತಿ ಇದೆ. ಅಚಾನಕ್ ಆಗಿ ಭಾರೀ ಮಳೆಯಾದರೆ ಅಂದು ಈ ಮಕ್ಕಳಿಗೆ ರಜೆ!
ನಡಿಗೆಯಲ್ಲೇ ಸಾಗುವ ಮಕ್ಕಳು
ಇಲ್ಲಿಗೆ ಸಂಪರ್ಕ ಕಲ್ಪಿಸಲು ಕಿರು ಸೇತುವೆಯೊಂದನ್ನು ಅಥವಾ ಕಾಲು ಸಂಕವನ್ನಾದರು ನಿರ್ಮಿಸಿಕೊಡಬೇಕು ಎಂಬುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ. ಬಿಚ್ಚಂಡೆ ಹಳ್ಳಿಯದ್ದೂ ಇದೇ ಪರಿಸ್ಥಿತಿ. ಇಲ್ಲಿನ ಬಿಚ್ಚಾಂಡೆ ಹಳ್ಳ ದಾಟಿ ಬಿಚ್ಚಾಂಡೆ ಗ್ರಾಮದ ಮಕ್ಕಳು ಹೈಸ್ಕೂಲಿಗೆ ತೆರಳಬೇಕು.
ಹೀಗಾಗಿ, ಶಾಲೆಯಲ್ಲಿ ಕೊಟ್ಟ ಸೈಕಲ್ ಅನ್ನು ಒಯ್ಯಲಾಗದೇ ಹಳ್ಳದ ಬದಿಯೇ ನಿಲ್ಲಿಸಿಟ್ಟು ನಡಿಗೆಯಲ್ಲೇ ಈ ಮಕ್ಕಳು ಸಾಗುತ್ತಾರೆ.
ಇದೊಂದೇ ಗ್ರಾಮಸ್ಥರ ಆಗ್ರಹ
ಒಟ್ಟಾರೆ ಈ ಹಳ್ಳಿಗಳಿಗೆ ಇನ್ನೊಂದು ಕಡೆ ಸಂಪರ್ಕ ಕಲ್ಪಿಸಲು, ಮಳೆಗಾಲದ ಸಂದರ್ಭ ಅಪಾಯ ಏನಾದರು ಉಂಟಾದಲ್ಲಿ ತುರ್ತು ಕ್ರಮಕ್ಕೆ ಸಹಕಾರಿಯಾಗುವಂತೆ ಕಾಲು ಸಂಕವನ್ನಾದರು ನಿರ್ಮಿಸಿಕೊಡಲು ಜಿಲ್ಲಾಡಳಿತ ಮುಂದಾಗಬೇಕು ಎನ್ನುವುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.