ಕಾರವಾರ: ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸದ ರೈತರು, ಬೆಳೆ ಪರಿಹಾರಕ್ಕೆ ಹಿನ್ನಡೆ
ಕಾರವಾರ, ಜನವರಿ 20: ಉತ್ತರ ಜಿಲ್ಲೆಯ ರೈತರಿಗೆ ಬೆಳೆ ಪರಿಹಾರ ಪಡೆಯಬೇಕಾದರೆ ಭೂ ಹಿಡುವಳಿಯನ್ನು ಸೂಕ್ತ ರೀತಿಯಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳುವುದು ಈಗ ಕಡ್ಡವಾಗಿದೆ. ಜಿಲ್ಲೆಯಲ್ಲಿ ಸದ್ಯ ಪ್ರಕ್ರಿಯೆಗೆ ಹಿನ್ನಡೆಯಾಗಿದೆ.
ರೈತರು ಬೆಳೆ ಹಾನಿಯ ಪರಿಹಾರ ದೊರೆಯುವ ಕಾರ್ಯ ಆಗಬೇಕಾದರೆ ಶೇ.100ರಷ್ಟು ಹಿಡುವಳಿಯನ್ನು ಫ್ರೂಟ್ಸ್ ಐಡಿ ಅಡಿಯಲ್ಲಿ ನೋಂದಣಿ ಮಾಡಬೇಕು ಎಂದು ಸರಕಾರ ಸೂಚನೆ ನೀಡಿದೆ. ತಂತ್ರಾಂಶದಲ್ಲಿರುವ ದಾಖಲೆಗಳ ಆಧಾರ ಮೇಲೆ ಜಿಲ್ಲೆಯಲ್ಲಿ 5.60 ಲಕ್ಷ ಭೂ ಹಿಡುವಳಿಗಳಿವೆ ಎಂದು ಪರಿಗಣಿಸಲಾಗಿದೆ.

ಇದುವರೆಗೆ 3.80 ಲಕ್ಷ ಹಿಡುವಳಿಗಳನ್ನು (ಶೇ.67.81) ರಾಜ್ಯ ಸರ್ಕಾರದ ಫ್ರೂಟ್ಸ್ ಐಡಿಯಲ್ಲಿ ಸೇರ್ಪಡೆ ಮಾಡಲಾಗಿದೆ. ಉಳಿದ ಹಿಡುವಳಿಗಳ ಮಾಹಿತಿಗಳನ್ನು ಸರಕಾರ ಕೇಳುತ್ತಿದೆ. ಬರ ಪರಿಹಾರ ತಡೆ ಹಿಡಿದಿದೆ. ಇದರಿಂದ ಹಿಡುಗಳಿಗಳ ಪಟ್ಟಿ ಶುದ್ಧ ಮಾಡುವ ಪ್ರಕ್ರಿಯೆ ನಡೆದಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಜಿಲ್ಲೆಯ 12 ರಲ್ಲಿ 11 ತಾಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಅಲ್ಲಿ ಬೆಳೆ ಸಮೀಕ್ಷೆ ನಡೆಸಿ, ಶೇ. 30 ಕ್ಕಿಂತ ಹೆಚ್ಚು ಹಾನಿಯಾದ ರೈತರ ಪಟ್ಟಿ ಮಾಡಲಾಗಿದೆ. 58,545 ಹೆಕ್ಟೇರ್ ಪ್ರದೇಶದಲ್ಲಿ 59.60 ಕೋಟಿ ರೂ. ಬೆಳೆ ಹಾನಿಯಾಗಿದೆ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಸದ್ಯ ಮೊದಲ ಹಂತದಲ್ಲಿ ಪ್ರತಿ ರೈತನಿಗೆ ತಲಾ 2 ಸಾವಿರ ರೂ.ಬೆಳೆ ಪರಿಹಾರ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ನಾಲ್ಕು ದಿನದ ಹಿಂದೆ ಘೋಷಿಸಿದ್ದಾರೆ. ಆದರೆ, ಫ್ರೂಟ್ಸ್ ಐಡಿ ನೋಂದಣಿಯ ವಿಳಂಬದಿಂದ ಜಿಲ್ಲೆಯಲ್ಲಿ ಪರಿಹಾರ ರೈತರ ಬ್ಯಾಂಕ್ ಖಾತೆಗಳಿಗೆ ತಲುಪುವುದು ವಿಳಂಬವಾಗುವ ಸಾಧ್ಯತೆ ಇದೆ.
ಎನ್ಎ ಆದ ಭೂಮಿ, ಅಕ್ರಮ ಸಕ್ರಮ ಯೋಜನೆಯಡಿ(94 ಸಿ ಹಾಗೂ 94ಸಿಸಿ) ಮನೆ ನಿರ್ಮಾಣಕ್ಕೆ ಮಂಜೂರಾದ ಭೂಮಿಗಳೂ ರೈತರ ಭೂ ಹಿಡುವಳಿ ಎಂದು ಭೂಮಿ ತಂತ್ರಾಂಶದಲ್ಲಿ ದಾಖಲಾಗಿವೆ. ಇದರಿಂದ ಎಷ್ಟೇ ಫ್ರೂಟ್ಸ್ ನೋಂದಣಿ ಮಾಡಿಸಿದರೂ ಗುರಿ ತಲುಪಲು ಸಾಧ್ಯವಾಗುತ್ತಿಲ್ಲ. ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಅವರ ಸೂಚನೆಯಂತೆ ಕಂದಾಯ ಅಧಿಕಾರಿಗಳನ್ನು ರೈತರ ಮನೆಗಳಿಗೆ ತೆರಳುತ್ತಿದ್ದಾರೆ.
ಜಿಲ್ಲೆಯಲ್ಲಿ ಎನ್ಎ ಆದ ಭೂಮಿಗಳು, ಅಕ್ರಮ, ಸಕ್ರಮದಲ್ಲಿ ನೀಡಿದ ಭೂಮಿಗಳನ್ನು ಗುರುತಿಸಿ, ನಿಖರವಾಗಿ ಯಾರು ಕೃಷಿ ಮಾಡುತ್ತಿದ್ದಾರೆ ಅವರ ಹೆಸರನ್ನು ಮಾತ್ರ ತಂತ್ರಾಂಶದಲ್ಲಿಟ್ಟು ಉಳಿದವನ್ನು ತೆಗೆದು ಹಾಕಲು ಕ್ರಮ ವಹಿಸಲಾಗುತ್ತಿದೆ. ಜಿಲೆಯಲ್ಲಿ ಸುಮಾರು 50 ಸಾವಿರಕ್ಕೂ ಇಂಥ ಭೂ ಹಿಡುವಳಿಗಳು ಇರಬಹುದು ಎಂದು ಅಂದಾಜಿಸಲಾಗಿದೆ.
ಫ್ರೂಟ್ಸ್ ಐಡಿ ಬಗ್ಗೆ ಮಾಹಿತಿ
ಬರ ಪರಿಹಾರ ಹಾಗೂ ಇತರೆ ಯಾವುದೇ ಸರ್ಕಾರಿ ಸೌಲಭ್ಯ ದೊರೆಯಬೇಕು ಎಂದರೂ ಅದಕ್ಕೆ ರೈತರು ತಮ್ಮ ಬ್ಯಾಂಕ್ ಖಾತೆ, ಆಧಾರ ಸಂಖ್ಯೆ, ಆರ್ಟಿಸಿ ಇತರ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಂಡು. ಏಕೀಕೃತ ಗುರುತಿನ ಸಂಖ್ಯೆ (ಎಫ್ಐಡಿ) ಪಡೆಯುವುದು ಕಡ್ಡಾಯವಾಗಿದೆ. ಈ ಐಡಿ ಇದ್ದ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಬರ ಪರಿಹಾರ ಹಣ ಜಮಾ ಆಗಲಿದೆ.
ಜಿಲ್ಲೆಯಲ್ಲಿ ಫ್ರೂಟ್ಸ್ ಐಡಿ ಸಂಪೂರ್ಣವಾಗಿಲ್ಲ ಎಂಬ ಕಾರಣಕ್ಕೇ ನಮಗೆ ಬರ ಪರಿಹಾರ ಪಡೆಯಲು ತಡವಾಗಿದೆ. ಫ್ರೂಟ್ಸ್ ನಲ್ಲಿ ನೋಂದಾಯಿಸಿ ಬರ ಪರಿಹಾರ ಪಡೆಯಲು ಸೂಚಸಲಾಗಿದೆ. ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ (ಭತ್ತ , ಮೆಕ್ಕೆಜೋಳ, ಕಬ್ಬು, ಹತ್ತಿ) ಪರಿಹಾರವನ್ನು ಸಂಬಂಧಪಟ್ಟ ರೈತರ ಖಾತೆಗೆ ಪಾವತಿಸಬೇಕಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿನ ಒಟ್ಟು 5,92,928 ಪ್ಲಾಟ್ ಗಳಲ್ಲಿ 4,60,880 ಪ್ಲಾಟ್ ಗಳನ್ನು ಈಗಾಗಲೇ ಫ್ರೂಟ್ಸ್ ತಂತ್ರಾಂಶದಲ್ಲಿ ಸಂಬಂಧ ಪಟ್ಟ ರೈತರ ಎಫ್ಐಡಿ ಯನ್ನು ಸೃಜಿಸಲಾಗಿದೆ.
ಬಾಕಿ ಉಳಿದ 1,32,048 ಪ್ಲಾಟ್ ಗಳ ರೈತರು ಆಧಾರ ಕಾರ್ಡ್, ಪಹಣಿ ಪತ್ರಿಕೆ ಬ್ಯಾಕ್ ಖಾತೆಗಳನ್ನು ಆಯಾ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಅಥವಾ ಕಂದಾಯ ಇಲಾಖೆ, ಕೃಷಿ ಇಲಾಖೆ, ರೇಷ್ಮೇ ಇಲಾಖೆ, ತೋಟಗಾರಿಕೆ ಇಲಾಖೆಯ ಕಚೇರಿಗಳಲ್ಲಿ ನೇರವಾಗಿ ಸಂಪರ್ಕಿಸಿ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಲು ಎಲ್ಲಾ ರೈತರಲ್ಲಿ ಸೂಚಿಸಲಾಗಿದೆ. ಬರ ಪರಿಹಾರದ ಮೊದಲನೇ ಹಂತದಲ್ಲಿ ಪರಿಹಾರವನ್ನು ನೇರವಾಗಿ ರೈತರ ಖಾತೆಗೆ ಪಾವತಿಸಲು ಕ್ರಮವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.












Click it and Unblock the Notifications