ಉತ್ತರ ಕನ್ನಡದಲ್ಲಿ ಗದ್ದೆಗಿಳಿದು ನಾಟಿ ಮಾಡುವ ಮೂಲಕ ಜಿಲ್ಲಾಧಿಕಾರಿ ಪ್ರೇರಣೆ
ಕಾರವಾರ, ಆಗಸ್ಟ್ 1: ಕೃಷಿ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಇಳಿಕೆಯಾಗುತ್ತಿದೆ. ಅದರ ನಡುವೆ ಪ್ರವಾಹದ ಅಬ್ಬರಕ್ಕೆ ಸಾಕಷ್ಟು ಕೃಷಿ ಭೂಮಿಗಳೂ ಹಾನಿಯಾಗಿ, ಕೃಷಿ ಮಾಡುವವರೂ ಕೂಡ ವ್ಯವಸಾಯದಿಂದ ವಿಮುಖರಾಗುವ ಸಂದರ್ಭ ಎದುರಾಗಿದೆ. ಅಂಥವರಿಗೆ ಪ್ರೇರಣೆಯಾಗಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ವತಃ ಜಿಲ್ಲಾಧಿಕಾರಿಯೇ ಗದ್ದೆಗೆ ಇಳಿದು ನಾಟಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಉತ್ತರ ಕನ್ನಡ ಜಿಲ್ಲಾಧಿಕಾರಿ ಆಗಿರುವ ಮುಲ್ಲೈ ಮುಗಿಲನ್, ಸ್ವತಃ ತಾವೇ ಗದ್ದೆಗಿಳಿದು ನಾಟಿ ಕಾರ್ಯ ಮಾಡಿದ್ದಾರೆ. ಜಿಲ್ಲಾ ಕೇಂದ್ರದ ಪತ್ರಕರ್ತರು ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ನಾಟಿ ಕಾರ್ಯಕ್ಕೆ ಪಂಚೆ- ಶಲ್ಯದೊಂದಿಗೆ ಥೇಟ್ ರೈತನಂತೆ ತಯಾರಾಗಿ ಆಗಮಿಸಿದ ಜಿಲ್ಲಾಧಿಕಾರಿ, ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿವಿಧಾನ ಕೈಗೊಂಡರು.
ನಂತರ ಕೆಸರಿನ ಗದ್ದೆಗಿಳಿದು, ಸಸಿ ಮಡಿಗಳನ್ನು ಹಿಡಿದು ನಾಟಿ ಕಾರ್ಯ ಮಾಡಿದರೆ, ಜಿಲ್ಲಾಧಿಕಾರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ, ತಹಶೀಲ್ದಾರ ನಿಶ್ಚಲ್ ನರೋನಾ ಸೇರಿದಂತೆ ಜಿಲ್ಲಾ ಕೇಂದ್ರದ ಪತ್ರಕರ್ತರೂ ಸಾಥ್ ನೀಡಿದರು.

ಕೃಷಿ ಹಾಗೂ ಗದ್ದೆ ಕಾರ್ಯವೆಂದರೆ ಮೂಗು ಮುರಿಯುವವರ ನಡುವೆ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳು ಗದ್ದೆಗಿಳಿದು ನಾಟಿ ಕಾರ್ಯ ಮಾಡುವ ಮೂಲಕ ಮಾದರಿಯಾದರು. ಪತ್ರಿಕಾ ದಿನಾಚರಣೆಯನ್ನೂ ಈ ರೀತಿ ಆಯೋಜಿಸಿ ಜಿಲ್ಲಾ ಕೇಂದ್ರದ ಪತ್ರಕರ್ತರು ಕೂಡ ಆದರ್ಶ ಎನಿಸಿಕೊಂಡರು.
ಟ್ಯಾಗೋರ್ ಪ್ರಶಸ್ತಿ ಪ್ರದಾನ:
ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡುವ ಟ್ಯಾಗೋರ್ ಪ್ರಶಸ್ತಿಯನ್ನು ವಿಜಯ ಕರ್ನಾಟಕ ಶಿವಮೊಗ್ಗ ಆವೃತ್ತಿಯ ಮುಖ್ಯಸ್ಥ ವಿವೇಕ ಮಹಾಲೆ, ದಿಗ್ವಿಜಯ ನ್ಯೂಸ್ ಜಿಲ್ಲಾ ವರದಿಗಾರ ಶೇಷಗಿರಿ ಮುಂಡಳ್ಳಿ, ಪ್ರಜಾವಾಣಿ ಜಿಲ್ಲಾ ವರದಿಗಾರ ಸದಾಶಿವ ಎಂ.ಎಸ್. ಅವರಿಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿವೇಕ ಮಹಾಲೆ, ಪ್ರಾಮಾಣಿಕತೆ, ಪ್ರಯತ್ನಶೀಲತೆ ಇದ್ದಲ್ಲಿ ಉನ್ನತ ಸ್ಥಾನಕ್ಕೇರಬಹುದು. ಸ್ಥಾನ ಸಿಕ್ಕಾಗ ಬೀಗಬಾರದು. ಇಂದು ಪತ್ರಕರ್ತರಲ್ಲೂ ವರ್ಕ್ ಫ್ರಾಂ ಹೋಂ ಸಂಸ್ಕೃತಿ ಹೆಚ್ಚುತ್ತಿದೆ. ಇದು ವಿಷಯದ ಗಂಭೀರತೆ, ಅದರ ಆಳ-ಅಗಲವನ್ನು ಜನರಿಗೆ ಅರ್ಥ ಮಾಡಿಸುವಲ್ಲಿ ವಿಫಲವಾಗುತ್ತಿದೆ ಎಂದರು.

ಸಮ್ಮಾನ:
ಹಲವು ಸವಾಲುಗಳ ನಡುವೆ 50 ಎಕರೆ ಭತ್ತದ ಕೃಷಿ ಮಾಡಿ ಸಾಧನೆ ಮಾಡಿದ ಹಳಗಾದ ಧೋಲ ಗ್ರಾಮದ ಪ್ರಗತಿಪರ ರೈತ ಯಶವಂತ ಉಂಡೇಕರ್ ಹಾಗೂ ಸಿದ್ದರ ಗ್ರಾಮದ ಹಿರಿಯ ಕೃಷಿಕ, ನಿವೃತ್ತ ಶಿಕ್ಷಕ ಅನಂತ ಶಾಬು ನಾಯ್ಕ ದಂಪತಿಯನ್ನು ಸಂಘದಿಂದ ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪತ್ರಕರ್ತರು ಸಮಾಜಕ್ಕೆ ಅಂಟಿದ ರೋಗಗಳಿಗೆ ಚಿಕಿತ್ಸೆ ಕೊಡುವ ವೈದ್ಯರಿದ್ದಂತೆ ಎಂದರು. ಸಮಾಜದ ಕೆಲ ಕೆಡುಕುಗಳ ಮೂಲ ಅರಿತು ಜನರಿಗೆ ನೋವಾಗದಂತೆ, ಕಾಯಿಲೆಯೂ ಗುಣವಾಗುವಂತೆ ಚುಚ್ಚುಮದ್ದು ನೀಡುವ ಸವಾಲಿನ ಜವಾಬ್ದಾರಿ ಮಾಧ್ಯಮಗಳ ಮೇಲಿದೆ. ಉತ್ತರ ಕನ್ನಡ ಜಿಲ್ಲೆಯ ಮಾಧ್ಯಮಗಳು ಅದನ್ನು ಯಶಸ್ವಿಯಾಗಿ ನಿಭಾಯಿಸುತ್ತಿವೆ ಎಂದರು.

ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ.ಬಿ.ಹರಿಕಾಂತ ಸ್ವಾಗತಿಸಿದರು. ದೇವರಾಜ ನಾಯ್ಕ ಅತಿಥಿ ಪರಿಚಯ ಮಾಡಿದರು. ಸಂದೀಪ ಸಾಗರ ಕಾರ್ಯಕ್ರಮ ನಿರೂಪಿಸಿದರು. ಸುಭಾಶ್ಚಂದ್ರ ಎನ್.ಎಸ್. ವಂದಿಸಿದರು. ದೇವಸ್ಥಾನ ಸಮಿತಿ ಮುಕ್ತೇಸರ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ರಾಜೇಂದ್ರ ರಾಣೆ ಸಂಪೂರ್ಣ ಕಾರ್ಯಕ್ರಮ ಸಂಘಟಿಸಿದ್ದರು. ವೈಲವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ ನಾಯ್ಕ, ಉಪಾಧ್ಯಕ್ಷೆ ಮೇಘಾ ಗಾಂವಕರ್, ದೇವಸ್ಥಾನ ಸಮಿತಿ ಮುಕ್ತೇಸರ ದತ್ತಾತ್ರೆಯ ಗಾಂವಕರ್, ಅರ್ಚಕ ವಿಠ್ಠಲ ಜೋಷಿ, ದಿಲೀಪ ದತ್ತಾ ರಾಣೆ, ಸಾಯಿನಾಥ ನಾಯ್ಕ, ಸುರೇಶ ಗುರವ್, ದೇವಿದಾಸ ನಾಯ್ಕ, ಗೋಪಾಳಿ ಕೊಳಂಬಕರ್, ಬಾಬು ನಾಯ್ಕ, ಸುಭಾಷ ರಾಣೆ, ಮಹಾಬಲೇಶ್ವರ ನಾಯ್ಕ, ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ದರ್ಶನ ನಾಯ್ಕ, ಅರವಿಂದ ಗುನಗಿ ವೇದಿಕೆಯಲ್ಲಿದ್ದರು.











Click it and Unblock the Notifications