ದಾಂಡೇಲಿ: ಕಾಳಿ ನದಿಗೆ ಇಳಿದ ಇಬ್ಬರು ಯುವತಿಯರು ನೀರು ಪಾಲು
ಕಾರವಾರ, ಡಿಸೆಂಬರ್ 26: ಧಾರವಾಡದಿಂದ ಪ್ರವಾಸಕ್ಕೆಂದು ಕುಟುಂಬಸ್ಥರ ಜೊತೆ ದಾಂಡೇಲಿಗೆ ಬಂದಿದ್ದ ಯುವತಿಯರಿಬ್ಬರು ನೀರು ಪಾಲದ ಘಟನೆ ಸೋಮವಾರ ಮೌಳಂಗಿಯಲ್ಲಿ ನಡೆದಿದೆ.
ಕಾರವಾರದಲ್ಲಿ ಜಲಪಾತಕ್ಕೆ ಇಳಿದ ಐವರು ನೀರುಪಾಲು
ಧಾರವಾಡದ ಮರಾಠಾ ಕಾಲೋನಿ ನಿವಾಸಿಗಳಾದ ಒಂದೇ ಕುಟುಂಬದ ಪದ್ಮಪ್ರಿಯ ಅರುಣ್ ಪಾಟೀಲ (21) ಮತ್ತು ರಜನಿ ಆನಂದ ಪಾಟೀಲ (22) ಮೃತಪಟ್ಟವರು. ಪ್ರವಾಸಕ್ಕೆಂದು ದಾಂಡೇಲಿಯ ಮೌಳಂಗಿ ಇಕೋ ಪಾರ್ಕಿಗೆ ಆಗಮಿಸಿದ್ದರು. ಈ ವೇಳೆ ಕಾಳಿ ನದಿಗಿಳಿದಿದ್ದ ಇವರು ನೀರಿನ ಸುಳಿಗೆ ಸಿಲುಕಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಅಲ್ಲಿ ನೆರೆದಿದ್ದ ಪ್ರವಾಸಿಗರು ಎಚ್ಚರಿಕೆ ನೀಡಿದ್ದಾರದಾರೂ ಅದನ್ನು ಗಮನಿಸದೇ ನದಿಯಲ್ಲಿ ಮುಂದೆ ಹೋಗಿರುವುದೆ ಈ ದುರಂತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುರಕ್ಷತೆಗೆ ಆಧ್ಯತೆ ನೀಡಬೇಕು: ಮೌಳಂಗಿ ಇಕೋ ಪಾರ್ಕಿನ ಅಭಿವೃದ್ಧಿ ಸಮಿತಿಯವರು ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಇನ್ನಷ್ಟು ಸಂಖ್ಯೆಯಲ್ಲಿ ಸುರಕ್ಷಾ ಸಿಬ್ಬಂದಿಗಳನ್ನು ನೇಮಿಸಬೇಕೆಂಬ ಆಗ್ರಹವು ಕೇಳಿ ಬರುತ್ತಿದೆ.
ಈಗಾಗಲೆ ಮೌಳಂಗಿ ಇಕೋ ಪಾರ್ಕ್ ಆರಂಭವಾದಗಿನಿಂದ ಪ್ರವಾಸಿಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಲ್ಲಿ ಕುಡಿತ ಮೋಜು ಮಸ್ತಿಗಳಿಗೆ ಕಡಿವಾಣ ಹಾಕಬೇಕಾದ ಗುರುತರ ಜವಾಬ್ದಾರಿ ಅರಣ್ಯ ಇಲಾಖೆಯ ಮೇಲಿದೆ.