ಕಾರವಾರದಲ್ಲಿ ಕಳವು ಮಾಡುತ್ತಿದ್ದ ವಿದೇಶಿ ಪ್ರವಾಸಿಗರಿಬ್ಬರ ಬಂಧನ
ಕಾರವಾರ, ಫೆಬ್ರವರಿ 07: ಜನರ ಗಮನವನ್ನು ಬೇರೆಡೆ ಸೆಳೆದು ಕಳವು ಮಾಡುತ್ತಿದ್ದ ಚಾಲಾಕಿ ವಿದೇಶಿ ಪ್ರವಾಸಿಗರಿಬ್ಬರನ್ನು ಕಾರವಾರ ಪೊಲೀಸರು ಬಂಧಿಸಿ ರಾಜಸ್ಥಾನ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಇರಾನ್ ದೇಶದ ಮೆಹರಾಜ್ ಹಾಗೂ ಹಡಿ ಬಂಧಿತರು. ಇಬ್ಬರನ್ನೂ ರಾಜಸ್ಥಾನ ಚುರು ಪೊಲೀಸರಿಗೆ ಮಂಗಳವಾರ ಹಸ್ತಾಂತರಿಸಲಾಗಿದೆ.
ಡಿ.26ರಂದು ಪ್ರವಾಸಿ ವೀಸಾದ ಮೇಲೆ ದೆಹಲಿಗೆ ಬಂದಿಳಿದಿದ್ದ ಇರಾನ್ ಪ್ರಜೆಗಳಿಬ್ಬರು ಅಲ್ಲಿ ದೇಶ ಸುತ್ತುವುದಾಗಿ ಹೇಳಿ ಕಾರೊಂದನ್ನು ಬಾಡಿಗೆಗೆ ಪಡೆದಿದ್ದರು. ಜ. 6ರಂದು ರಾಜಸ್ಥಾನದ ಚುರು ಜಿಲ್ಲೆಯ ರತ್ನಗ್ರಹ್ ಪಟ್ಟಣಕ್ಕೆ ತೆರಳಿದ್ದ ಇಬ್ಬರು ಖದೀಮರು ಅಲ್ಲಿನ ವ್ಯಾಪಾರಿಯೊಬ್ಬರ ಬಳಿ ಭಾರತೀಯ ನೋಟುಗಳನ್ನು ನೋಡಬೇಕು ಎಂದು ಹೇಳಿದ್ದರು. ವ್ಯಾಪಾರಿ 2 ಸಾವಿರ ಹಾಗೂ 500 ರೂ.ಗಳನ್ನು ತೋರಿಸಿದ್ದ. ಅದನ್ನು ಪರಿಶೀಲಿಸುವ ನೆಪದಲ್ಲಿ ವ್ಯಾಪಾರಿಯ ಗಮನ ಬೇರೆಡೆ ಸೆಳೆದು 50 ಸಾವಿರ ರೂ. ದೋಚಿದ್ದರು.
ಈ ಸಂಬಂಧ ರತ್ನಗ್ರಹ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ಬರ ಬೇಟೆಗಾಗಿ ಚುರು ಪೊಲೀಸರ ತಂಡ ರಚಿಸಲಾಗಿತ್ತು. ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ಖದೀಮರು ದೆಹಲಿ, ಮುಂಬೈ, ಹರಿಯಾಣದಲ್ಲಿ ಓಡಾಡಿದ್ದನ್ನು ಪತ್ತೆ ಮಾಡಿದ್ದರು.

ಫೆ.2ರಂದು ಕಾರವಾರಕ್ಕೆ ಬಂದು ಲಾಡ್ಜ್ ಒಂದರಲ್ಲಿ ನೆಲೆಸಿದ್ದನ್ನು ಖಚಿತಪಡಿಸಿಕೊಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಅದನ್ನು ಆಧರಿಸಿ ಕಾರವಾರ ಸಿಪಿಐ ಸಂತೋಷ ಶೆಟ್ಟಿ ನೇತೃತ್ವದ ತಂಡ ಇಬ್ಬರನ್ನು ಬಂಧಿಸಿ ಚುರು ಪೊಲೀಸರಿಗೆ ಹಸ್ತಾಂತರಿಸಿದೆ.












Click it and Unblock the Notifications