ಗೋಕರ್ಣ ಕ್ಷೇತ್ರಕ್ಕೂ ಟಿಪ್ಪು ಸುಲ್ತಾನ್ ಗೌರವ ಸಲಾಂ, ಹೀಗೊಂದು ಇತಿಹಾಸ
ಕಾರವಾರ, ನವೆಂಬರ್ 9: 'ಪ್ರಸಿದ್ಧ ಪ್ರವಾಸಿ ತಾಣ, ಶಿವನ ಪ್ರಾಣಲಿಂಗ ಇರುವ ಉತ್ತರ ಕನ್ನಡದ ಗೋಕರ್ಣ ಕ್ಷೇತ್ರಕ್ಕೆ ಹಜರತ್ ಟಿಪ್ಪು ಸುಲ್ತಾನ್ ಕೊಡುಗೆ ನೀಡಿದ್ದಾನೆ' ಎಂಬುದು ಟಿಪ್ಪು ಜಯಂತಿ ಆಚರಣೆ ಪರ- ವಿರೋಧದ ಚರ್ಚೆಗಳ ನಡುವೆ ಸ್ಥಳೀಯವಾಗಿ ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ಸ್ಥಳೀಯ ಪತ್ರಿಕೆಯೊಂದು ವರದಿ ಕೂಡ ಮಾಡಿದ್ದು, ಟಿಪ್ಪುವಿನ ಮೈಸೂರು ಸಂಸ್ಥಾನದ ಆಳ್ವಿಕೆಯಲ್ಲಿದ್ದ ಅಂದಿನ ಗೋಕರ್ಣ ಸಂಸ್ಥಾನವನ್ನು ಕಬಳಿಸಲು ತನ್ನ ಸೈನಿಕರಿಗೆ ಟಿಪ್ಪು ತಿಳಿಸಿದ್ದನಂತೆ. ಆತನ ಆಜ್ಞೆಯಂತೆ ಸೈನಿಕರು ದಾಳಿ ಮಾಡಿ, ಇಲ್ಲಿನ ಪುರಾಣ ಪ್ರಸಿದ್ಧ ಕೆಲವು ದೇವಾಲಯಗಳ ಮೂರ್ತಿಗಳನ್ನು ಕೊಂಚ ಭಗ್ನ ಮಾಡಿದ್ದರಂತೆ.
ಹೈದರಾಲಿ ಎಂಬ ನಿಷ್ಠ 'ಸೈನಿಕ', ಅವನ ಮಗ ಟಿಪ್ಪು 'ಸುಲ್ತಾನ'
ಅದೇ ದಿನ ಟಿಪ್ಪುವಿಗೆ ಹಾಗೂ ಆತನ ಸೇನಾಪತಿಗೆ ಕನಸಿನಲ್ಲಿ ಶಿವ ಬಂದು ಕಾಡತೊಡಗಿದ್ದನಂತೆ. ಇದರಿಂದ ಭಯಗೊಂಡ ಟಿಪ್ಪು ಮರುದಿನವೇ ಕ್ಷೇತ್ರಕ್ಕೆ ಬಂದು, ದೇವರಲ್ಲಿ ಕ್ಷಮೆ ಯಾಚಿಸಿದನೆಂದು ಹೇಳಲಾಗುತ್ತದೆ. ಬಳಿಕ ಭಗ್ನಗೊಳಿಸಿದ್ದ ಮೂರ್ತಿಗಳನ್ನು ಪುನರ್ ಪ್ರತಿಷ್ಠಾಪಿಸಲು ಸಂಕಲ್ಪಿಸಿದನಂತೆ.
ತನ್ನ ತಪ್ಪಿನ ಪ್ರಾಯಶ್ಚಿತ್ತವಾಗಿ ಗೋಕರ್ಣದ ಮಹಾಗಣಪತಿ ಸಹಿತ ಮುಖ್ಯ ದೇವರಿಗೆ ಗೌರವಪೂರ್ವಕವಾಗಿ 'ಸಲಾಂ' (ಗೌರವ ವಂದನೆ) ಅನ್ನು ನೀಡಿ, ಕಪ್ಪ ಕಾಣಿಕೆ ಸಲ್ಲಿಸಿದನೆಂದು ಹೇಳಲಾಗುತ್ತದೆ.
ಸಲಾಂ ಸಲ್ಲಿಕೆ
ಟಿಪ್ಪು ಸುಲ್ತಾನ್ ಗೌರವ ಸಲ್ಲಿಸಿದ ಸ್ಮರಣಾರ್ಥ ಇಂದಿಗೂ ವಾದ್ಯ, ನಗಾರಿ, ಜಾಗಟೆಯೊಂದಿಗೆ ಶಿವನ ಬೆಳ್ಳಿ ಲೇಪಿತ ಕಟ್ಟಿಗೆ, ಅಗ್ನಿಯ ದೀವಟಿಗೆ ಸಹಿತ 'ಸಲಾಂ' ವಂದನೆಯು ಗೋಕರ್ಣದ ಅನೇಕ ದೇವಾಲಯಗಳಿಗೆ ಶ್ರೀಕ್ಷೇತ್ರ ಮಹಾಬಲೇಶ್ವರ ದೇವಾಲಯದಿಂದ ಸಲ್ಲಿಕೆಯಾಗುತ್ತದೆ. ಜತೆಗೆ ಎಲ್ಲ ಉತ್ಸವಗಳಲ್ಲಿ 'ರಾಯಸಾ' ಕಳಿಸುವ ಪದ್ಧತಿ ಜಾರಿಗೆ ಬಂದಿದ್ದು ಕೂಡ ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿಯಂತೆ.
ಉಂಬಳಿಯಾಗಿ ಭೂ ದಾನ
ಇಲ್ಲಿನ ಬ್ರಾಹ್ಮಣ ಕುಟುಂಬವೊಂದಕ್ಕೆ ತೀವ್ರ ಬಡತನ ಬಂದು, ಭಿಕ್ಷೆ ಬೇಡುವ ಸ್ಥಿತಿ ಒದಗಿತ್ತಂತೆ. ಆಗ ಟಿಪ್ಪು ಭೂ ದಾನವನ್ನು ಉಂಬಳಿಯಾಗಿ ನೀಡಿದ. ಇಲ್ಲಿನ ಗ್ರಾಮ ದೇವತೆಯ ಸನ್ನಿಧಿಯಲ್ಲಿ ಕುರಿ, ಕೋಳಿಯ ರಕ್ತ ಬಲಿ ನೀಡುವುದು ಜಾರಿಗೆ ಬಂದಿದ್ದು ಟಿಪ್ಪುವಿನ ಆಳ್ವಿಕೆಯಲ್ಲಿಯೇ ಎನ್ನಲಾಗಿದೆ.
ರಜತ ಲೇಪಿತ ಕಟ್ಟಿಗೆ ಹಿಡಿಯುವ ಪದ್ಧತಿ
ಇಲ್ಲಿ ನಡೆಯುವ ಬಂಡಿ ಹಬ್ಬದಲ್ಲಿ ಭಾಗಿಯಾಗುವ ಪರಿವಾರ ದೇವರಿಗೆ ರಜತ ಲೇಪಿತ ಕಟ್ಟಿಗೆ ಹಿಡಿಯುವ ಪದ್ಧತಿ ಜಾರಿಗೆ ಬಂದಿದ್ದು ಈತನ ಆಳ್ವಿಕೆಯಲ್ಲಿಯಂತೆ. ಅಂದಿನ ಗ್ರಾಮ ಹಬ್ಬದಲ್ಲಿ ಕಟ್ಟಿಗೆದಾರರು ಅನುವಂಶೀಯವಾಗಿ ಪಾಲ್ಗೊಂಡು ಅದನ್ನು ಇಂದಿಗೂ ಮುಂದುವರಿಸಿದ್ದಾರೆ.
ಟಿಪ್ಪುವಿನ ಭೂದಾನ
ಗೋಕರ್ಣ ಸಮೀಪದ ಹಿರೇಗುತ್ತಿಯ ಸಣ್ಣ ಹೊಸಬ, ಹಿರೇ ಹೊಸಬದ ವಾಸಸ್ಥಾನವಿದೆ. ಭೂಮಿ ಇರುವ ಮೊದಲು ಅಲ್ಲಿ ಪೂರ್ತಿ ಅಘನಾಶಿನಿ ನದಿಯ ಹಿನ್ನೀರು ಆವರಿಸಿ, ಸೈನಿಕರಿಗೆ ಉಳಿಯಲು ಜಾಗವಿರಲಿಲ್ಲ. ಪಕ್ಕದ ಅಡವಿಯಲ್ಲಿ ಕ್ರೂರ ಪ್ರಾಣಿಗಳ ಭಯದಲ್ಲಿ ವಾಸಮಾಡುವಂತೆ ಆಗಿತ್ತಂತೆ. ಆ ನಂತರ ಅವರಿಗಾಗಿ ವಿಶಾಲ ಭೂ ಪ್ರದೇಶವನ್ನು ನಿರ್ಮಿಸಿದವನು ಟಿಪ್ಪು. ಇಂದಿಗೂ ಅಲ್ಲಿನ ರೈತರು ಮಾಡಿದ ಗದ್ದೆ ಟಿಪ್ಪು ನಿರ್ಮಿಸಿದ ಬಗ್ಗೆ ಕುರುಹುಗಳು ಇಲ್ಲಿನ ಜಂಭೆ ಭಟ್ಟರ ಸಾಹಿತ್ಯದಲ್ಲಿ ದೊರೆತಿದೆ.
ಸಂಪತ್ತು ಸಮೃದ್ಧವಾಗಿಡಲು ಶ್ರಮ ವಹಿಸಿದ ಟಿಪ್ಪು
ಟಿಪ್ಪು ಸುಲ್ತಾನ್ ಅಂದಿನ ಮೈಸೂರು ರಾಜ್ಯದಲ್ಲಿ ಗೋಕರ್ಣ, ಮಂಜುಗುಣಿ, ಬನವಾಸಿ, ಅಂಕೋಲಾ ಕ್ಷೇತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿ ಅಲ್ಲಿನ ಯಾವುದೇ ಸಮುದ್ರ ಹಾಗೂ ನದಿ ಮುಖಜ ಭೂಮಿಯಲ್ಲಿನ ದೇವಾಲಯಗಳ ಕಟ್ಟಡ ಹಾಗೂ ಸಂಪತ್ತನ್ನು ಸಮೃದ್ಧವಾಗಿಡಲು ಟಿಪ್ಪು ಅಪಾರ ಶ್ರಮ ವಹಿಸಿದ ಬಗ್ಗೆಯೂ ಉಲ್ಲೇಖವಿದೆ.