ಆನಂದ್ ಅಸ್ನೋಟಿಕರ್ ರಾಜಕೀಯ ನಡೆ ನ.22ಕ್ಕೆ ಘೋಷಣೆ
ಕಾರವಾರ, ನವೆಂಬರ್ 12 : ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಮತ್ತೆ ರಾಜಕೀಯ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಸುಮಾರು ನಾಲ್ಕೂವರೆ ವರ್ಷದಿಂದ ಅವರು ರಾಜಕೀಯದಿಂದ ದೂರ ಉಳಿದಿದ್ದರು.
ಭಾನುವಾರ ಆನಂದ್ ಅಸ್ನೋಟಿಕರ್ ಅಭಿಮಾನಿಬಳಗ ಆನಂದ್ ಅವರು ರಾಜಕೀಯಕ್ಕೆ ಮತ್ತೆ ಬರಬೇಕು ಎಂದು ಒತ್ತಾಯಿಸಿ ಹಮ್ಮಿಕೊಂಡಿದ್ದ ಮುತ್ತಿಗೆ ಸಂದರ್ಭದಲ್ಲಿ ತಾವು ರಾಜಕೀಯಕ್ಕೆ ಮರಳಿ ಬರುವುದಾಗಿ ಅವರು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

ಆದರೆ, 2018ರ ಚುನಾವಣೆಯಲ್ಲಿ ಯಾವ ಪಕ್ಷದಿಂದ ಸ್ಪರ್ಧಿಸಲಿದ್ದಾರೆ? ಎಂಬುದು ಮಾತ್ರ ಇನ್ನೂ ಅಂತಿಮವಾಗಿಲ್ಲ. ಅಂಕೋಲಾ ಅಥವ ಕಾರವಾರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಹಬ್ಬಿದೆ.
2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಆನಂದ್ ಅಸ್ನೋಟಿಕರ್ ಭಾರೀ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಆ ನಂತರ ಅವರು ಕ್ಷೇತ್ರದಿಂದಲೇ ಕಣ್ಮರೆಯಾಗಿ ಉದ್ಯಮದತ್ತ ವಾಲಿದ್ದರು.
ಇತ್ತ ಬಿಜೆಪಿಯದ್ದೇ ಆಗಲಿ ಅಥವಾ ಇನ್ನಾವುದೇ ಸಂಘಟನೆಯ ಯಾವುದೇ ವೇದಿಕೆಯಲ್ಲಾಗಲಿ ಅಥವಾ ಸಂಘಟನೆಯಲ್ಲಾಗಲಿ ಅವರು ಕಾಣಿಸಿಕೊಂಡಿರಲಿಲ್ಲ. ಈಗ ಚುನಾವಣೆ ಹತ್ತಿರವಾಗುತ್ತಿದ್ದು, ಪುನಃ ರಾಜಕೀಯ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ.
ಚಿಕ್ಕ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿದ ಆನಂದ ಅಸ್ನೋಟಿಕರ್ ಅವರು ಶಾಸಕ ಹಾಗೂ ಸಚಿವರಾಗಿ ಅನೇಕ ಜನಪರ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದಾರೆ. ಹೀಗಾಗಿ ಅವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲೇಬೇಕು. ಕ್ಷೇತ್ರದ ಜನರು ನಿಮ್ಮ ನಾಯಕತ್ವ ಬೇಕು ಎನ್ನುತ್ತಿದ್ದಾರೆ ಎಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಆನಂದ್, 'ಜನರ ಒತ್ತಾಯದ ಮೇರೆಗೆ ಹಾಗೂ ಕಾರವಾರ-ಅಂಕೋಲಾ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ರಾಜಕೀಯಕ್ಕೆ ಮರು ಎಂಟ್ರಿ ಕೊಡುತ್ತೇನೆ. ಇಷ್ಟೆಲ್ಲ ಜನ ನಾನು ರಾಜಕೀಯಕ್ಕೆ ಬರುವುದನ್ನು ನಿರೀಕ್ಷಿಸುತ್ತಿದ್ದಾರೆ ಎಂದರೆ ಈಗಿರುವವರ ಆಡಳಿತ ಸರಿ ಇಲ್ಲ ಎಂದರ್ಥ' ಎಂದರು.
'ಹಿರಿಯರ ಆಶೀರ್ವಾದ ಪಡೆದು, ಅವರ ಸಲಹೆ ಪಡೆದು, ಕೊಲ್ಲೂರು ಮೂಕಾಂಬಿಕಾ ಹಾಗೂ ಇಡಗುಂಜಿಯ ಗಣಪತಿಯ ಆಶೀರ್ವಾದ ಪಡೆದು ಇದೇ 22ರ ಬಳಿಕ ರಾಜಕೀಯಕ್ಕೆ ಸಕ್ರಿಯವಾಗಿ ಬರ್ತೇನೆ. 30ರ ಬಳಿಕ ಯಾವ ಪಕ್ಷಕ್ಕೆ ಹೋಗ್ತೇನೆ ? ಅನ್ನೋ ನಿರ್ಧಾರವನ್ನು ಪ್ರಕಟಿಸುತ್ತೇನೆ' ಎಂದು ಹೇಳಿದರು.












Click it and Unblock the Notifications