ಶಿರಸಿ ಧಗಧಗ, ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ
Recommended Video
ಶಿರಸಿ, ಡಿಸೆಂಬರ್ 12: ಪರೇಶ್ ಮೇಸ್ತ ಅನುಮಾನಾಸ್ಪದ ಸಾವಿನ ಪ್ರಕರಣ ಖಂಡಿಸಿ ಇಂದು ಹಿಂದೂ ಸಂಘಟನೆಗಳು ಶಿರಸಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದೆ.'
ರಾಷ್ಟ್ರಭಕ್ತರ ಹೆಣಗಳ ಮೇಲೆ ಸಿಎಂ ರಾಜಕಾರಣ: ಬಿಜೆಪಿ ಆಕ್ರೋಶ
ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಚ್, ಅಶ್ರುವಾಯು ಪ್ರಯೋಗಿಸಿದರು. ಗಲಭೆಯಲ್ಲಿ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ. ಜತೆಗೆ 6 ವಾಹನಗಳು ಕಲ್ಲು ತೂರಾಟಕ್ಕೆ ಜಖಂಗೊಂಡಿವೆ.
ಪರೇಶ್ ಹತ್ಯೆ : ಉತ್ತರ ಕನ್ನಡ ಜಿಲ್ಲೆಯಲ್ಲಿ 3 ದಿನ ನಿಷೇಧಾಜ್ಞೆ
ಶಿರಸಿ ಬಂದ್
ಪರೇಶ್ ಮೇಸ್ತ ಪ್ರಕರಣವನ್ನು ಖಂಡಿಸಿ ಹಾಗೂ ಪರೇಶ್ ಮೇಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹಿಂದೂಪರ ಸಂಘಟನೆಗಳು ಇಂದು ಶಿರಸಿ ಬಂದ್ ಗೆ ಕರೆ ನೀಡಿದ್ದವು. ಇಂದು ಮುಂಜಾನೆಯಿಂದಲೇ ಶಿರಸಿ ಸಂಪೂರ್ಣ ಬಂದ್ ಆಗಿದ್ದರೂ ಅಲ್ಲಲ್ಲಿ ಅಂಗಡಿಗಳು ತೆರೆದಿರುವುದನ್ನು ಪ್ರತಿಭಟನಾಕಾರರು ಮುಚ್ಚಿಸಿದರು.
ಕಾಗೇರಿ ನೇತೃತ್ವದಲ್ಲಿ ಪ್ರತಿಭಟನೆ
ಶಿರಸಿಯ ವಿಕಾಸ ಆಶ್ರಮ ಮೈದಾನದ ಮುಂದೆ ಸೇರಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ಶಾಸಕ ವಿಶ್ವೇಶರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಪ್ರತಿಭಟನೆಗಿಳಿದರು. ಈ ವೇಳೆ ಪ್ರತಿಭಟನಾ ಜಾಥಾ ನಡೆಸಲು ಮುಂದಾದ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ತಡೆದರು.
ಲಾಠಿ ಚಾರ್ಜ್
ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ತಡೆದಾಗ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಒಂದು ಹಂತದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸೂಚನೆ ದೊರೆತ ಹಿನ್ನಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಜತೆಗೆ ಪ್ರತಿಭಟನೆ ನಡೆಸಲು ಮುಂದಾಗಿದ್ದ ಹಲವಾರು ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಪ್ರತಿಭಟನೆಯಲ್ಲಿ ಹಿಂಸಾಚಾರ
ಇದರಿಂದ ಕೆರಳಿದ ಪ್ರತಿಭಟನಾ ನಿರತ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಕಲ್ಲು ತೂರಾಟದಲ್ಲಿ 6ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿದ್ದು ಕೆಎಸ್ಆರ್ಟಿಸಿ ಬಸ್ ಗಳ ಮೇಲೂ ಉದ್ರಿಕ್ತ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ.
ಅಂಗಡಿ ವಸ್ತುಗಳಿಗೆ ಬೆಂಕಿ
ಈ ನಡುವೆ ಬಸ್ ನಿಲ್ದಾಣಕ್ಕೆ ನುಗ್ಗಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಬಸ್ ಸಂಚಾರ ತಡೆದಿದ್ದಾರೆ. ಕೆಲ ಅಂಗಡಿಗಳಿಗೆ ನುಗ್ಗಿದ ಪ್ರತಿಭಟನಾಕಾರರು ಅಂಗಡಿಯ ವಸ್ತುಗಳನ್ನು ಹೊರಗೆಸೆದು ಬೆಂಕಿ ಹಚ್ಚಿದ್ದಾರೆ.
ಈ ನಡುವೆ ಮಾಧ್ಯಮ ಪ್ರತಿನಿಧಿಗಳ ವಿರುದ್ದ ಆಕ್ರೋಶ ಹೊರಹಾಕಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿಡಿಯೋ ಮಾಡದಂತೆ ಬೆದರಿಕೆ ಹಾಕಿದ್ದಾರೆ. ಪರೇಶ ಮೇಸ್ತ ಸಾವಿನ ಸುದ್ದಿ ಮಾಡದೆ, ಬೆಳಗೆರೆ ಸುದ್ದಿ ಪ್ರಸಾರ ಮಾಡುತ್ತಿರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಲಾ- ಕಾಲೇಜುಗಳಿಗೆ ರಜೆ
ಶಿರಸಿ ಬಂದ್ ಹಿನ್ನೆಲೆಯಲ್ಲಿ ಇಲ್ಲಿನ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ಜನ ಸಂಚಾರ ಸಂಪೂರ್ಣ ನಿಂತು ಹೋಗಿದೆ. ಆಸ್ಪತ್ರೆಗಳು ಮಾತ್ರ ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.
ಪೊಲೀಸ್ ಸರ್ಪಗಾವಲು
ಉದ್ವಿಘ್ನಗೊಂಡಿರುವ ಶಿರಸಿಯಲ್ಲಿ ಭದ್ರತೆಗಾಗಿ ಐದು ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಕರಿಸಿಕೊಳ್ಳಲಾಗಿದೆ.
ಧಾರವಾಡ, ರಾಮನಗರ, ಮಂಡ್ಯ, ಬಳ್ಳಾರಿ, ಉಡುಪಿ, ಬೆಂಗಳೂರಿನ ಪೊಲೀಸ್ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕೆಎಸ್ಆರ್ ಪಿ, ಸಿವಿಲ್ ಪೊಲೀಸ್ ಹಾಗೂ ಅಗ್ನಿಶಾಮಕ ದಳ ಸೇರಿದಂತೆ ಸುಮಾರು 1500 ಕ್ಕೂ ಹೆಚ್ಚು ಸಿಬ್ಬಂದಿಗಳು ಶಿರಸಿಯ ಭದ್ರತೆಯ ಹೊಣೆ ಹೊತ್ತಿದ್ದಾರೆ.