ಅಮಿತ್ ಶಾ ಭೇಟಿಗಾಗಿ ಗೋಕರ್ಣದಲ್ಲಿ ಅಂಗಡಿ ತೆರವು
ಕಾರವಾರ, ಫೆ.21: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು (ಫೆ.21) ಉಡುಪಿ ಹಾಗೂ ಕುಮಟಾಕ್ಕೆ ಭೇಟಿ ನೀಡಲಿದ್ದಾರೆ.
ಉಡುಪಿಯಲ್ಲಿ ಸಾಮಾಜಿಕ ಜಾಲತಾಣದ ಕಾರ್ಯಕರ್ತರ ಸಮಾವೇಶ, ಮಂಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳ ಶಕ್ತಿ ಕೇಂದ್ರದ ಉಸ್ತುವಾರಿಗಳ ಸಮಾವೇಶವನ್ನು ನಡೆಸಲಿದ್ದಾರೆ.
ಅಲ್ಲಿಂದ ಅವರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಲಿದ್ದಾರೆ. ಭಟ್ಕಳ, ಕುಮಟಾ, ಕಾರವಾರ ವಿಧಾನಸಭಾ ಕ್ಷೇತ್ರಗಳ ಒಂಭತ್ತು ಬೂತ್ ಮಟ್ಟದ ಕಾರ್ಯಕರ್ತರ ನವಶಕ್ತಿ ಸಮಾವೇಶವನ್ನು ಕುಮಟಾದ ಕೊಂಕಣ ಎಜುಕೇಷನಲ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದೆ.
ಜಾತ್ರೆ ಮಳಿಗೆಗಳ ತೆರವು
ಅಮಿತ್ ಷಾ ಅವರು ಹೊನ್ನಾವರದ ಮೃತ ಪರೇಶ್ ಮೇಸ್ತನ ಮನೆಗೆ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಲಿದ್ದಾರೆ ಹಾಗೂ ಗೋಕರ್ಣ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿಯ ಮೂಲಗಳು ತಿಳಿಸಿವೆ.
ಗೋಕರ್ಣ ಭೇಟಿ ಹಿನ್ನಲೆಯಲ್ಲಿ ಇಲ್ಲಿ ನಡೆಯುತ್ತಿದ್ದ ಜಾತ್ರೆಗಾಗಿ ಹಾಕಿದ್ದ ತಾತ್ಕಾಲಿಕ ಅಂಗಡಿಗಳನ್ನು ತೆರವುಗೊಳಿಸಲು ಉತ್ತರಕನ್ನಡ ಜಿಲ್ಲಾಡಳಿತ ಆದೇಶಿಸಿದೆ.
ಮೇಲಿನ ಕೇರಿಯಿಂದ ರಥಬೀದಿ ಮಾರ್ಗವಾಗಿ ಮುಖ್ಯ ದೇವಸ್ಥಾನದವರೆಗಿನ ಇಕ್ಕೆಲಗಳಲ್ಲಿ ಅಳವಡಿಸಿರುವ ಅಂಗಡಿಗಳನ್ನು ತೆರವುಗೊಳಿಸಲು ಜಿಲ್ಲಾಡಳಿತ ಆದೇಶಿಸಿರುವುದರಿಂದ ಜಾತ್ರೆಯ ಪೇಟೆ ಅಸ್ತವ್ಯಸ್ತಗೊಂಡು, ಅಂಗಡಿಕಾರರ ಅಸಮಧಾನಕ್ಕೆ ಕಾರಣವಾಗಿದೆ.
ಅಮಿತ್ ಶಾ ಉನ್ನತ ಭದ್ರತೆ ಹೊಂದಿರುವ ವ್ಯಕ್ತಿಯಾಗಿದ್ದು, ಭದ್ರತಾ ನಿಯಮ ಪಾಲಿಸುವುದು ಅಗತ್ಯ. ಹೀಗಾಗಿ ಅವರು ಹೋದ ಬಳಿಕ ಅಂಗಡಿಗಳನ್ನು ಇಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.