Get Updates
Get notified of breaking news, exclusive insights, and must-see stories!

ಆನ್‌ಲೈನ್‌ ಪಡಿತರ ತಿದ್ದುಪಡಿಗೆ ಪರಿಪಾಟಲು: ತಿಂಗಳು ಅಲೆದರೂ ಪರಿಹಾರವಾಗದ ಸಮಸ್ಯೆ

ಕಳೆದ ಸುಮಾರು ಒಂದುವರೆ ತಿಂಗಳುಗಳಿಂದ ಇಲಾಖೆಯಲ್ಲಿನ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿ ತಿದ್ದುಪಡಿ ಅರ್ಜಿ ವಿಲೇವಾರಿಯಾಗದೆ ಜನರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯಿಂದ ಕಾರಾವಾರ ತಾಲೂಕಿನ ಸಾರ್ವಜನಿಕರು ಹೈರಾಣಾಗಿದ್ದಾರೆ.

ಕಾರವಾರ, ಫೆಬ್ರವರಿ 25: ಸರ್ಕಾರಿ ಸೇವೆಗಳು ತ್ವರಿತಗತಿಯಲ್ಲಿ ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಆನ್‌ಲೈನ್‌ ಸೇವೆ ಆರಂಭಿಸಿದೆ. ಆದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿನ ಜಿಎಸ್‌ಸಿ ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಚೀಟಿ ತಿದ್ದುಪಡಿಗೆ ತಿಂಗಳುಗಟ್ಟಲೆ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಪಡಿತರ ಚೀಟಿಯಲ್ಲಿನ ಹೆಸರು ಸೇರ್ಪಡೆ, ಹೆಸರು ತೆಗೆಯುವುದು, ವಿಳಾಸ ಬದಲಾವಣೆ, ಹೆಸರು ತಿದ್ದುಪಡಿ, ನ್ಯಾಯಬೆಲೆ ಅಂಗಡಿ ಬದಲಾವಣೆ ಸೇರಿದಂತೆ ಇತ್ಯಾದಿ ಸೇವೆಯನ್ನು ಪಡೆಯಲು ಕಾರವಾರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ನಿತ್ಯವೂ ಅರ್ಜಿ ಸಲ್ಲಿಸಲಾಗುತ್ತಿದೆ. ಆದರೆ ಕಳೆದ ಸುಮಾರು ಒಂದುವರೆ ತಿಂಗಳುಗಳಿಂದ ಇಲಾಖೆಯಲ್ಲಿನ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ವಿಲೇವಾರಿಯಾಗದೆ ಜನರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Server Problem Affected On Online Ration Card Revision

ಕಾರವಾರ ತಹಶೀಲ್ದಾರರ ಕಚೇರಿಯಲ್ಲಿ ಸುಮಾರು 400 ಕ್ಕೂ ಹೆಚ್ಚು ಅರ್ಜಿಗಳು ಸರ್ವರ್ ಸಮಸ್ಯೆಯಿಂದಾಗಿ ವಿಲೇವಾರಿಯಾಗದೆ ಬಾಕಿ ಉಳಿದುಕೊಂಡಿದೆ. ಅಲ್ಲದೆ ನಿತ್ಯ 50ಕ್ಕೂ ಹೆಚ್ಚು ಜನರು ತಿದ್ದುಪಡಿಗಾಗಿ ಕಾದು ಸುಸ್ತಾಗಿ ವಾಪಸ್‌ ತೆರಳುತ್ತಿದ್ದಾರೆ. ಇನ್ನು ಕೆಲವರು ವೈದ್ಯಕೀಯ ಚಿಕಿತ್ಸೆಗೆ, ಹೆರಿಗೆ ಸೇರಿದಂತೆ ಇನ್ನಿತರ ಕಾರಣಕ್ಕೆ ಹೆಸರು ಸೇರ್ಪಡೆ ಮಾಡಿ ತುರ್ತು ಸೌಲಭ್ಯಕ್ಕಾಗಿ ಕಾಯುತ್ತಿರುವವರು ಕಚೇರಿಗೆ ಅಲೆದು ಸುಸ್ತಾಗುವಂತಾಗಿದೆ.

"ತಿಂಗಳ ಹಿಂದೆ ಬಿಪಿಎಲ್ ಕಾರ್ಡ್‌ಗೆ ಹೆಸರು ಸೇರ್ಪಡೆ ಮಾಡಲು ಆನ್‌ಲೈನ್‌ ಅರ್ಜಿ ಸಲ್ಲಿಕೆ ಮಾಡಿದ್ದೇನೆ. ಆದರೆ ಹೆಸರು ಸೇರ್ಪಡೆಗೆ ತಹಶೀಲ್ದಾರ್ ಕಚೇರಿಗೆ ಮೂರು ಬಾರಿ ಬಂದರೂ ನೆಟ್ವರ್ಕ್ ಸಮಸ್ಯೆ ಎಂದು ವಾಪಸ್ಸ್ ಕಳುಹಿಸಿದ್ದಾರೆ. ದುಡಿದು ತಿನ್ನುವ ನಮಗೆ ಇಷ್ಟು ಸಣ್ಣ ಕೆಲಸಕ್ಕೆ ಹೀಗೆ ಅಲೆದಾಡಿಸಿದರೆ ಹೇಗೆ. ಅಧಿಕಾರಿಗಳು ಈ ಬಗ್ಗೆ ಕೂಡಲೇ ಕ್ರಮವಹಿಸಿ ತಕ್ಷಣ ಹೆಸರು ಸೇರ್ಪಡೆ ಮಾಡಬೇಕು" ಎಂದು ಸ್ಥಳೀಯರಾದ ದೇವಿದಾಸ್ ವೈಂಗಣಕರ್ ಆಗ್ರಹಿಸಿದ್ದಾರೆ.

Server Problem Affected On Online Ration Card Revision

ಇನ್ನು ಸಕಾಲದಲ್ಲಿ ಅರ್ಜಿ ವಿಲೇವಾರಿಗೆ ಎನ್ಐಸಿ ಸಂಸ್ಥೆ ಕೇವಲ ಎರಡು ಗಂಟೆ ಮಾತ್ರ ನೀಡುತ್ತಿದ್ದು, ಏಕಕಾಲದಲ್ಲಿ ರಾಜ್ಯದಾದ್ಯಂತ ಎಲ್ಲರೂ ಕೆಲಸ ಮಾಡುವ ಕಾರಣ ಸಮಸ್ಯೆಯಾಗುತ್ತಿದೆ ಎನ್ನಲಾಗಿದೆ. ಇದರಿಂದ ನಿತ್ಯ ಒಂದರಿಂದ ಎರಡು ಅರ್ಜಿ ಮಾತ್ರ ವಿಲೇವಾರಿ ಮಾಡಲು ಸಾಧ್ಯವಾಗಿದೆ. ಆದರೆ ಈ ಬಗ್ಗೆ ಜನರಿಗೆ ತಿಳಿಸಿದರು ಅರ್ಥವಾಗದೆ ಜನ ನಮ್ಮೊಂದಿಗೆ ಜಗಳವಾಡುತ್ತಾರೆ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ತಹಶೀಲ್ದಾರ್ ಕಚೇರಿ ಸಿಬ್ಬಂದಿ ತಿಳಿಸಿದ್ದಾರೆ.

ಇನ್ನು ಪಡಿತರ ಚೀಟಿ ಆನ್‌ಲೈನ್‌ ವ್ಯವಸ್ಥೆಯನ್ನು ಎನ್‌ಐಸಿ ಸಂಸ್ಥೆ ನಿರ್ವಹಣೆ ಮಾಡುತ್ತಿದ್ದ ಕಾರಣ ಕೆಲ ಗಂಟೆಗಳು ಮಾತ್ರ ಕೆಲಸಕ್ಕೆ ಅವಕಾಶ ನೀಡಿತ್ತು. ಇದರಿಂದ ಕೆಲವೇ ಅರ್ಜಿಗಳು ಮಾತ್ರ ವಿಲೇವಾರಿಯಾಗಿದೆ. ಆದರೆ ಈಗಾಗಲೇ ಜನಸಾಮಾನ್ಯರಿಂದ ಪಡೆದ ಅರ್ಜಿಗಳನ್ನು ಇನ್ನೊಂದು ವಾರದಲ್ಲಿ ಎಲ್ಲ ವಿಲೇವಾರಿ ಮಾಡಿ ಸಮಸ್ಯೆಯಾಗದಂತೆ ನೋಡಿಕೊಳ್ಳುವುದಾಗಿ ಕಾರವಾರ ಗ್ರೆಡ್ 2 ತಹಶೀಲ್ದಾರ್ ಶ್ರೀದೇವಿ ಭಟ್ ತಿಳಿಸಿದ್ದಾರೆ.

ಪಡಿತರ ಚೀಟಿ ತಿದ್ದುಪಡಿ, ಹೆಸರು ಸೇರ್ಪಡೆ ಸೇರಿದಂತೆ ಇತರೆ ಸಮಸ್ಯೆಗಳಿರುವುದು ಗಮನಕ್ಕೆ ಬಂದಿತ್ತು. ಆದರೆ ಆನ್‌ಲೈನ್‌ ಸೇವೆಯ ಗುತ್ತಿಗೆ ಪಡೆದಿದ್ದ ಎನ್‌ಐಸಿ ಸಂಸ್ಥೆ ಸರ್ವರ್ ನಿರ್ವಹಣೆ ಮಾಡುತ್ತಿದ್ದ ಕಾರಣ ಈ ಸಮಸ್ಯೆ ಎದುರಾಗಿತ್ತು. ಇದೀಗ ಕಂಪೆನಿ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಆನ್‌ಲೈನ್‌ ಸೇವೆಗೆ ಅವಕಾಶ ಕಲ್ಪಿಸುವುದಾಗಿ‌ ತಿಳಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥ ಮಾಡಲಾಗುವುದು ಎಂದು ಕಾರವಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ಮಂಜುನಾಥ ರೇವಣಕರ್ ತಿಳಿಸಿದ್ದಾರೆ.

ಒಟ್ಟಾರೆ ಆಗಾಗ ಕೈಗೊಡುವ ಆನ್‌ಲೈನ್‌ ಸೇವೆ ಸಮಸ್ಯೆಯಿಂದಾಗಿ ಜನಸಾಮಾನ್ಯರು ಹೈರಾಣಾಗುವಂತಾಗಿದೆ. ಸಣ್ಣ ಕೆಲಸಕ್ಕೆ ಮೂರ್ನಾಲ್ಕು ದಿನ ಕಚೇರಿ ಅಲೆಯುವ ಸ್ಥಿತಿ ನಿರ್ಮಾಣವಾಗುತ್ತಿದ್ದು, ಸರ್ಕಾರ ಇಂತಹ ಸಮಸ್ಯೆ ಬಗ್ಗೆ ಹೆಚ್ಚಿನ ಗಮನ ಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎನ್ನುವುದು ಸ್ಥಳೀಯರ ಆಗ್ರವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+