ಪ್ರತ್ಯೇಕ ನೀರು ಪೂರೈಕೆ ಯೋಜನೆಗೆ ಬೇಡಿಕೆ ಇಟ್ಟ ‘ಸೀಬರ್ಡ್’

ಕಾರವಾರ, ಫೆಬ್ರವರಿ 20: ಬೇಸಿಗೆ ಆರಂಭಕ್ಕೆ ಇನ್ನೇನು ಒಂದು ತಿಂಗಳು ಬಾಕಿ ಉಳಿದಿದೆ. ಆದರೆ, ಕರಾವಳಿ ನಿವಾಸಿಗರಿಗೆ ಈಗಲೇ ಕುಡಿಯುವ ನೀರಿನ ತತ್ವಾರ ಎದುರಾಗುವ ಆತಂಕ ಕಾಡುತ್ತಿದೆ. ಇದಕ್ಕೆ ಕಾರಣವಾಗಿರುವುದು ತಾಲ್ಲೂಕಿನ ಅರಗಾ ಗ್ರಾಮದಲ್ಲಿರುವ ಕದಂಬ ನೌಕಾನೆಲೆ.

ಹೌದು. ದೇಶದ ರಕ್ಷಣೆಯ ಅಂಗವಾಗಿರುವ ನೌಕಾನೆಲೆಯಿಂದ ಇದೀಗ ಸ್ಥಳೀಯರಿಗೆ ನೀರಿನ ಬವಣೆ ಎದುರಾಗುವ ಆತಂಕ ಶುರುವಾಗಿದೆ. ಕರಾವಳಿಯ ತಾಲ್ಲೂಕುಗಳಿಗೆ ಪ್ರಮುಖ ನೀರಿನ ಮೂಲವಾಗಿರುವ ನದಿಗಳಿಂದ ನೌಕಾನೆಲೆ ಪ್ರತ್ಯೇಕ ನೀರಿನ ಸರಬರಾಜು ವ್ಯವಸ್ಥೆ ಕಲ್ಪಿಸುವಂತೆ ಬೇಡಿಕೆ ಇಟ್ಟಿರುವುದು ಈ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ "ಗಂಗಾವಳಿಯಿಂದ ನೀರು ಸರಬರಾಜು ಮಾಡಲು ಫೆಬ್ರುವರಿ ಕೊನೆಯವರೆಗೂ ಸಮಸ್ಯೆ ಇಲ್ಲ.

ಆ ಬಳಿಕ ಬೇಸಿಗೆಯಲ್ಲಿ ನೀರಿನ ಹರಿವು ಕಡಿಮೆಯಾಗುವುದರಿಂದ ನೀರನ್ನು ತಡೆದು ನಿಲ್ಲಿಸಿ, ಕಾರವಾರ ಹಾಗೂ ಗ್ರಾಮೀಣ ಭಾಗಗಳಿಗೆ ಪೂರೈಕೆ ಮಾಡಲಾಗುತ್ತಿತ್ತು. ಇದೀಗ ಗಂಗಾವಳಿಯಿಂದ ನೌಕಾನೆಲೆಗೆ ಪ್ರತ್ಯೇಕವಾಗಿ ನೀರು ಪೂರೈಕೆ ಮಾಡಲು ಬ್ಯಾರೇಜ್ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ನೀರು ಪೂರೈಕೆಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ" ಎಂದು ಭರವಸೆ ನೀಡಿದ್ದಾರೆ ಜಲಮಂಡಳಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸುರೇಶ್.

 ಜಲಮಂಡಳಿಗೆ ನೌಕಾನೆಲೆ ಬೇಡಿಕೆ

ಜಲಮಂಡಳಿಗೆ ನೌಕಾನೆಲೆ ಬೇಡಿಕೆ

ಜಿಲ್ಲೆಯ ಕರಾವಳಿಯಲ್ಲಿ ಹರಿಯುವ ಕಾಳಿ ಹಾಗೂ ಗಂಗಾವಳಿ ನದಿಗಳು ಕಾರವಾರ ಹಾಗೂ ಅಂಕೋಲಾ ತಾಲ್ಲೂಕುಗಳ ಪ್ರದೇಶಗಳಿಗೆ ಕುಡಿಯುವ ನೀರಿನ ಪ್ರಮುಖ ಆಸರೆಯಾಗಿವೆ. ಅದರಲ್ಲೂ ಗಂಗಾವಳಿ ನದಿಯಿಂದ ಕಾರವಾರ ನಗರದ ಬಹುಪಾಲು ಪ್ರದೇಶಕ್ಕೆ ನೀರು ಪೂರೈಕೆಯಾಗುತ್ತದೆ. ಇದೇ ನದಿಯಿಂದ ಕದಂಬ ನೌಕಾನೆಲೆಗೂ ನೀರು ಪೂರೈಕೆ ಮಾಡುತ್ತಿದ್ದು, ಕಳೆದ ಬಾರಿ ಭೀಕರ ಬೇಸಿಗೆ ಎದುರಾದ ಪರಿಣಾಮ ಗಂಗಾವಳಿ ನದಿ ಬತ್ತಿದ್ದರಿಂದ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ಆದರೆ, ಈ ಬಾರಿ ನೌಕಾನೆಲೆಯ ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದ್ದು, ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಪ್ರತ್ಯೇಕ ನೀರಿನ ವ್ಯವಸ್ಥೆ ಮಾಡುವಂತೆ ಜಲಮಂಡಳಿಗೆ ನೌಕಾನೆಲೆ ಬೇಡಿಕೆ ಇಟ್ಟಿದೆ. ಇದರಿಂದ ಬೇಸಿಗೆಯಲ್ಲಿ ಮತ್ತೆ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

 ‘ಉಪ್ಪು ನೀರು ಶುದ್ಧೀಕರಿಸಿಕೊಳ್ಳಲಿ’

‘ಉಪ್ಪು ನೀರು ಶುದ್ಧೀಕರಿಸಿಕೊಳ್ಳಲಿ’

ಕಳೆದ ಬಾರಿ ಗಂಗಾವಳಿ ಬತ್ತಿದ ಪರಿಣಾಮ ಕಾರವಾರ ಭಾಗದ ಜನರು ನೀರಿಗಾಗಿ ಪರದಾಡುವಂತಾಗಿತ್ತು. ಇದೀಗ ನೌಕಾನೆಲೆಗೆ ಪ್ರತ್ಯೇಕವಾಗಿ ನೀರು ಸರಬರಾಜಾಗುವುದರಿಂದ ಬೇಸಿಗೆಯಲ್ಲಿ ಮತ್ತೆ ನೀರಿನ ಸಮಸ್ಯೆ ಎದುರಾಗಲಿದೆ. ಅಲ್ಲದೇ ನೌಕಾನೆಲೆ ಕಾಮಗಾರಿಗಳಿಗೆ ಕುಡಿಯುವ ನೀರನ್ನು ಬಳಕೆ ಮಾಡುವುದು ಸರಿಯಲ್ಲವಾಗಿದ್ದು, ಮಂಗಳೂರಿನಲ್ಲಿರುವಂತೆ ಉಪ್ಪು ನೀರನ್ನು ಶುದ್ಧೀಕರಿಸಿ ಕಾಮಗಾರಿಗೆ ಬಳಸಿಕೊಳ್ಳಬೇಕು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

 ಯಾವುದೇ ಸಮಸ್ಯೆ ಇಲ್ಲ ಎಂದ ಜಲಮಂಡಳಿ

ಯಾವುದೇ ಸಮಸ್ಯೆ ಇಲ್ಲ ಎಂದ ಜಲಮಂಡಳಿ

ನೌಕಾನೆಲೆಯಲ್ಲಿ ಎರಡನೇ ಹಂತದ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಹೆಚ್ಚಿನ ನೀರಿನ ಅಗತ್ಯತೆ ಇದೆ. ಅಲ್ಲದೇ ಬೇಸಿಗೆಯಲ್ಲಿ ಕಾಮಗಾರಿ ಮುಂದುವರಿಸಲು ನೀರಿನ ಅಭಾವ ಎದುರಾಗುವುದರಿಂದ ಕಾಳಿ ಅಥವಾ ಗಂಗಾವಳಿ ನದಿಯಿಂದ ಕಾಮಗಾರಿಗೂ ಸಾಕಾಗುವಷ್ಟು ನೀರನ್ನು ಪೂರೈಸುವಂತೆ ನೌಕಾನೆಲೆ ಬೇಡಿಕೆ ಇಟ್ಟಿದೆ. ಈ ನಿಟ್ಟಿನಲ್ಲಿ ಈಗಾಗಲೇ ಎರಡೂ ನದಿಗಳಿಂದ ನೀರನ್ನು ಪೂರೈಕೆ ಮಾಡುವ ಸಾಧ್ಯತೆಗಳ ಕುರಿತು ಜಲಮಂಡಳಿ ಕ್ರಿಯಾ ಯೋಜನೆಯನ್ನೂ ರೂಪಿಸಿ ಸಲ್ಲಿಕೆ ಮಾಡಿದ್ದು, ಇನ್ನೂ ಯೋಜನೆ ಅಂತಿಮವಾಗಿಲ್ಲ. ಆದರೆ, ಇದರಿಂದ ನಗರಕ್ಕೆ ನೀರು ಪೂರೈಕೆ ಮಾಡಲು ಸಮಸ್ಯೆಯಾಗುವುದಿಲ್ಲ ಎಂದು ಜಲಮಂಡಳಿ ತಿಳಿಸಿದೆ.

 40 ಮಿಲಿಯನ್ ಲೀಟರ್ ನೀರು ಅಗತ್ಯ

40 ಮಿಲಿಯನ್ ಲೀಟರ್ ನೀರು ಅಗತ್ಯ

ನೌಕಾನೆಲೆಯಲ್ಲಿ 2024ರವರೆಗೆ ಎರಡನೇ ಹಂತದ ಕಾಮಗಾರಿ ನಡೆಯುವುದರಿಂದ 40 ಮಿಲಿಯನ್ ಲೀಟರ್ ಗಳಷ್ಟು ನೀರಿನ ಅಗತ್ಯ ಇದೆ ಎನ್ನಲಾಗಿದೆ. ಹೀಗಾಗಿ ಪ್ರತ್ಯೇಕ ನೀರಿನ ವ್ಯವಸ್ಥೆಗೆ ನೌಕಾನೆಲೆ ಬೇಡಿಕೆ ಇಟ್ಟಿದ್ದು, ಗಂಗಾವಳಿ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡಿದಲ್ಲಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗುವುದನ್ನು ತಪ್ಪಿಸಬಹುದು ಎನ್ನುವುದು ಜಲಮಂಡಳಿ ಅಧಿಕಾರಿಗಳ ಅಭಿಪ್ರಾಯವಾಗಿದೆ. ಆದರೆ, ಈ ಬಾರಿ ಉತ್ತಮ ಮಳೆಯಾಗಿದ್ದರೂ ಅದನ್ನು ಸಂಗ್ರಹಿಸಿ ಇಡುವ ಕೆಲಸವಾಗಿಲ್ಲ. ಹೀಗಿರುವಾಗ ನೌಕಾನೆಲೆಗೆ ಪ್ರತ್ಯೇಕವಾಗಿ ನೀರನ್ನು ಸರಬರಾಜು ಮಾಡಿದ ಬಳಿಕ ಜನಸಾಮಾನ್ಯರ ಬಳಕೆಗೆ ಸಾಕಾಗುವಷ್ಟು ನೀರು ಇರಲಿದೆಯೇ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+