ಕೆಪಿಸಿಸಿ ಅಧ್ಯಕ್ಷ ಹುದ್ದೆಯತ್ತ ದೇಶಪಾಂಡೆ ಚಿತ್ತ?
ಕಾರವಾರ,
ಡಿಸೆಂಬರ್ 19: ಮಾಜಿ ಸಚಿವ ಹಾಗೂ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಮತ್ತು ಕಾಂಗ್ರೆಸ್ ಹಿರಿಯ ಮುಖಂಡೆ ಮಾರ್ಗರೇಟ್ ಆಳ್ವಾ ಭೇಟಿ ಇದೀಗ ಜಿಲ್ಲೆಯಲ್ಲಿ ಸಾಕಷ್ಟು ಚರ್ಚೆಗಳನ್ನು ಹುಟ್ಟು ಹಾಕಿದೆ. ಭೇಟಿ ಹಿಂದೆ ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿರುವುದೇ ಕಾರಣ ಇರಬಹುದು ಎನ್ನುವ ಮಾತು ಎಲ್ಲೆಡೆ ಕೇಳಿಬರುತ್ತಿದೆ. id="toptextpromo"> id='are-slot-1' class='oiad oi-axt oiadv'>ಉತ್ತರ
ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಎಂದರೆ ಈ ಹಿಂದೆ ದೇಶಪಾಂಡೆ ಬಣ, ಆಳ್ವಾ ಬಣ ಎನ್ನಲಾಗುತ್ತಿತ್ತು. ಒಂದೇ ಪಕ್ಷದಲ್ಲೇ ಇದ್ದರೂ ಇಬ್ಬರೂ ಬದ್ಧ ವೈರಿಗಳಂತೆ ಇದ್ದು, ರಾಜಕೀಯ ಮಾಡುತ್ತಿದ್ದರು. ಜಿಲ್ಲಾ ಕಾಂಗ್ರೆಸ್ ನಲ್ಲಿ ಇಬ್ಬರು ನಾಯಕರ ಬೆಂಬಲಿಗರ ನಡುವೆ ಸಹ ಹಲವು ಬಾರಿ ಗುದ್ದಾಟಗಳೇ ನಡೆದಿತ್ತು. id='are-slot-2' class='oiad oi-axt oiadv'>
ಪ್ರತಿ ಚುನಾವಣೆಯಲ್ಲೂ ತಿಕ್ಕಾಟ
ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ನಡೆಯುವ ಪ್ರತಿ ಚುನಾವಣೆಗೂ ಟಿಕೆಟ್ ಹಂಚಿಕೆ ಸಂದರ್ಭದಲ್ಲಿ ಆಳ್ವಾ ಬಣ ಹಾಗೂ ದೇಶಪಾಂಡೆ ಬಣಗಳ ನಡುವೆ ತಿಕ್ಕಾಟ ನಡೆಯುತ್ತಿತ್ತು. ಯಾವ ಬಣದವರಿಗೆ ಟಿಕೆಟ್ ನೀಡಿದರೂ ಒಂದು ಬಣಕ್ಕೆ ಮೇಲುಗೈ ಎಂದು ಬಿಂಬಿಸಲಾಗುತ್ತಿತ್ತು.

ಒಂದಾದ ಬದ್ಧ ವೈರಿಗಳು?
ಇತ್ತೀಚಿನ ಕೆಲ ಬೆಳವಣಿಗೆಗಳನ್ನು ಗಮನಿಸಿದರೆ, ಜಿಲ್ಲೆಯ ರಾಜಕೀಯದಲ್ಲಿ ದ್ವೇಷಿಗಳಂತೆ ಇದ್ದ ಆಳ್ವಾ ಹಾಗೂ ದೇಶಪಾಂಡೆ ಇದೀಗ ಒಂದಾದಂತೆ ಕಾಣುತ್ತಿದೆ. ಕೆಲ ದಿನಗಳ ಹಿಂದೆ ಶಿರಸಿ ನಗರದಲ್ಲಿನ ಆಳ್ವಾ ಮನೆಗೆ ದೇಶಪಾಂಡೆ ಭೇಟಿ ನೀಡಿ ಚರ್ಚೆ ನಡೆಸಿರುವುದು ಇದಕ್ಕೆ ಪುಷ್ಠಿ ನೀಡಿದಂತಾಗಿದೆ.
ಸದ್ಯ ರಾಜ್ಯದಲ್ಲಿ ಖಾಲಿ ಇರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದೇಶಪಾಂಡೆ ಕಣ್ಣಿಟ್ಟಿರುವುದೇ ಬದ್ಧ ವೈರಿಗಳ ಭೇಟಿಗೆ ಕಾರಣ ಎನ್ನುವ ಮಾತು ಕೇಳಿಬಂದಿದೆ.

ದೇಶಪಾಂಡೆ ಹೆಸರು ಸೂಚಿಸುವ ಸಾಧ್ಯತೆ
ಉಪಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದ್ದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ ಸಲ್ಲಿಸಿದ್ದರು. ಸದ್ಯ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್, ಕೆ.ಎಚ್.ಮುನಿಯಪ್ಪ ಕಣ್ಣಿಟ್ಟಿದ್ದಾರೆ. ಆದರೆ, ಪಕ್ಷದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ತೀರ್ಮಾನ ಸಾಕಷ್ಟು ಪ್ರಾಮುಖ್ಯ ಹೊಂದಿದೆ. ಸಿದ್ದರಾಮಯ್ಯನವರು ಈ ಮೂವರೂ ಆಕಾಂಕ್ಷಿಗಳನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡುವುದಕ್ಕೆ ಒಪ್ಪುವ ಸಾಧ್ಯತೆ ಬಹಳ ಕಡಿಮೆ ಇದೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಆಪ್ತರಾಗಿರುವ ದೇಶಪಾಂಡೆ ಹೆಸರನ್ನು ಸಿದ್ದರಾಮಯ್ಯ ಸೂಚಿಸಬಹುದು ಎನ್ನಲಾಗಿದೆ. ದೇಶಪಾಂಡೆ ಕೂಡ ಈ ಹುದ್ದೆಗಾಗಿ ತೆರೆಮರೆಯ ಪ್ರಯತ್ನ ನಡೆಸುತ್ತಿದ್ದು, ಇದೇ ನಿಟ್ಟಿನಲ್ಲಿ ಆಳ್ವಾ ಅವರನ್ನು ಭೇಟಿ ಮಾಡಿದ್ದಾರೆಯೇ? ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ.

ಸಮರ್ಥವಾಗಿ ಅಧ್ಯಕ್ಷ ಸ್ಥಾನ ನಡೆಸಿದ್ದ ದೇಶಪಾಂಡೆ
ಕಾಂಗ್ರೆಸ್ ಪಕ್ಷದಲ್ಲಿ ದೇಶಪಾಂಡೆ ಹಿರಿಯ ಶಾಸಕರಾಗಿದ್ದಾರೆ. ಅಲ್ಲದೇ, ಬಿಜೆಪಿ ಸರ್ಕಾರ ಈ ಹಿಂದೆ ಆಡಳಿತದಲ್ಲಿದ್ದಾಗ, ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದ ಸಂದರ್ಭ ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾಗಿ ಸಮರ್ಥವಾಗಿ ಪಕ್ಷವನ್ನು ನಡೆಸಿದ್ದರು. ಗಣಿ ಹಗರಣದ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ದೇಶಪಾಂಡೆಯವರೇ ಪಕ್ಷದ ಅಧ್ಯಕ್ಷ ಸ್ಥಾನ ಹೊತ್ತಿದ್ದು, ಅನುಭವದ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷ ಹುದ್ದೆ ದೇಶಪಾಂಡೆಗೆ ಕೊಡಬಹದು ಎನ್ನಲಾಗಿದೆ. ಒಂದೊಮ್ಮೆ ದೇಶಪಾಂಡೆ ಹೆಸರು ಬಂದರೆ ಮಾರ್ಗರೆಟ್ ಆಳ್ವಾ ವಿರೋಧಿಸಬಹುದು ಎನ್ನುವ ನಿಟ್ಟಿನಲ್ಲಿಯೇ ದೇಶಪಾಂಡೆಯವರೇ ಆಸಕ್ತಿ ವಹಿಸಿ ಆಳ್ವಾ ಜೊತೆ ಮಾತುಕತೆ ನಡೆಸಿದ್ದಾರೆನ್ನುವ ಮಾತು ಇದೀಗ ಪಕ್ಷದ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿದೆ.












Click it and Unblock the Notifications