12 ವರ್ಷದ ನಂತರ ಕಬ್ಬಿಣದ ಅದಿರು ಹರಾಜಿಗೆ ಸಿದ್ಧತೆ
ಕಾರವಾರ, ಫೆಬ್ರವರಿ 3: ಬಳ್ಳಾರಿಯ ಅಕ್ರಮ ಗಣಿಗಾರಿಕೆಯಲ್ಲಿ ವಿದೇಶಕ್ಕೆ ಸಾಗಾಣೆಯಾಗುತ್ತಿದ್ದ ಅದಿರನ್ನು ಸಿಬಿಐ ದಾಳಿ ನಡೆಸಿ ವಶಕ್ಕೆ ಪಡೆದು ಕಾರವಾರದ ಬೈತಖೋಲ್ ವಾಣಿಜ್ಯ ಬಂದರು ಪ್ರದೇಶದಲ್ಲಿ ದಾಸ್ತಾನು ಮಾಡಲಾಗಿತ್ತು.
ಈಗ ಬರೋಬ್ಬರಿ 12 ವರ್ಷಗಳ ನಂತರ ಹರಾಜಿಗೆ ಕೋರ್ಟ್ ಅನುಮತಿ ನೀಡಿದ್ದು, ಜಿಲ್ಲಾಡಳಿತ ಈ ಅದಿರು ಹರಾಜಿಗೆ ಮುಂದಾಗಿದೆ. ಆದರೆ ಕಬ್ಬಿಣದ ಅದಿರು ಹರಾಜು ಪಡೆಯಲು ಯಾರೂ ಮುಂದೆ ಬರುತ್ತಿಲ್ಲ ಎನ್ನುವುದು ಇಲ್ಲಿ ಗಮನಾರ್ಹವಾಗಿದೆ.
ತೀಳ್ಮಾತಿ ತೀರದಲ್ಲಿ ಬರಿದಾಗುತ್ತಿದೆ ಕಪ್ಪು ಮರಳು; ಅಕ್ರಮವಾಗಿ ಒಯ್ಯುತ್ತಿರುವ ಪ್ರವಾಸಿಗರು
ಬಳ್ಳಾರಿಯ ಅಕ್ರಮ ಗಣಿಗಾರಿಕೆ ಪ್ರಕರಣ ಅಲ್ಲಿನ ಗಣಿದಣಿಗಳನ್ನು ಮಾತ್ರವಲ್ಲದೇ, ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರನ್ನೂ ಜೈಲಿಗೆ ತಳ್ಳುವ ಮೂಲಕ ರಾಜ್ಯದ ಇತಿಹಾಸದಲ್ಲೇ ಅಧಿಕಾರವಿದ್ದ ಸಂದರ್ಭದಲ್ಲಿ ಜೈಲಿಗೆ ಹೋದ ಮುಖ್ಯಮಂತ್ರಿ ಎನ್ನುವ ಅಪಖ್ಯಾತಿಗೂ ಕಾರಣವಾಗಿತ್ತು.
ಆ ಅಕ್ರಮ ಗಣಿಗಾರಿಕೆಯಲ್ಲಿನ ಅದಿರನ್ನು ಕಾರವಾರ ಮತ್ತು ಬೇಲೇಕೇರಿ ಬಂದರಿನ ಮೂಲಕ ವಿದೇಶಕ್ಕೆ ಸಾಗಿಸಲಾಗುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು, ನೂರಾರು ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಬಂದರಿನಲ್ಲಿ ವಶಕ್ಕೆ ಪಡೆದು ಕೇಸ್ ದಾಖಲು ಮಾಡಿದ್ದರು.
ಇನ್ನು ಕಾರವಾರ ಬಂದರು ವ್ಯಾಪ್ತಿಯಲ್ಲೇ ನೂರಾರು ಲೋಡ್ ಅದಿರನ್ನು 12 ವರ್ಷಗಳಿಂದ ರಾಶಿ ಹಾಕಿಡಲಾಗಿತ್ತು. ಹೀಗಾಗಿ ಮಳೆಗಾಲದಲ್ಲಿ ಈ ಅದಿರು ಮಳೆ ನೀರಲ್ಲಿ ಸವಕಳಿಯಾಗಿ ಸಮುದ್ರ ಸೇರುತ್ತಿದೆ. ಇದರಿಂದ ಬಂದರಿನ ಬ್ರೇಕ್ ವಾಟರ್ ಪ್ರದೇಶಕ್ಕೆ ಅದಿರು ತುಂಬುತ್ತಿದ್ದು, ಬೋಟ್ ನಡೆಸುವುದಕ್ಕೂ ಸಹ ತೊಂದರೆಯಾಗುತ್ತಿರುವುದರಿಂದ ಜಿಲ್ಲಾಡಳಿತ ಹರಾಜಿಗೆ ಕೋರ್ಟ್ ಅನುಮತಿ ಕೇಳಿತ್ತು.
Recommended Video
ಹೀಗಾಗಿ ಜಿಲ್ಲಾಡಳಿತದ ಮನವಿ ಮೇರೆಗೆ ಕಾರವಾರ ಬಂದರಲ್ಲಿರುವ ಅದಿರನ್ನು ಮಾತ್ರ ಹರಾಜು ಹಾಕಲು ಕೋರ್ಟ್ ಅನುಮತಿ ನೀಡಿದೆ. ಹೀಗಾಗಿ ಜಿಲ್ಲಾಡಳಿತ ಕೇವಲ ಕಾರವಾರ ಬಂದರಿನ ವ್ಯಾಪ್ತಿಯಲ್ಲಿರುವ ನೂರಾರು ಮೆಟ್ರಿಕ್ ಟನ್ ಅದಿರು ಹರಾಜಿಗೆ ಮುಂದಾಗಿದೆ. ಆದರೆ ದಾಸ್ತಾನು ಮಾಡಿ 12 ವರ್ಷ ಕಳೆದಿದ್ದರಿಂದ ಅದಿರು ಈಗ ಟೆಂಪರ್ ಕಳೆದುಕೊಂಡಿರುವ ಸಾಧ್ಯತೆ ಇರುವುದರಿಂದಾಗಿ ಯಾವುದೇ ಕಂಪನಿಯೂ ಸಹ ಇದನ್ನು ಹರಾಜು ಪಡೆಯಲು ಮುಂದಾಗುತ್ತಿಲ್ಲ ಎನ್ನಲಾಗಿದೆ.