ಗಣರಾಜ್ಯೋತ್ಸವದ ದಿನ ರೈತರ ಪ್ರತಿಭಟನೆ ದುರದೃಷ್ಟಕರ; ಹೆಬ್ಬಾರ್
ಕಾರವಾರ, ಜನವರಿ 26: "ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ರೀತಿ ಟ್ರಾಕ್ಟರ್ಗಳನ್ನು ತಂದು ತೊಂದರೆ ಕೊಡುತ್ತಿರುವುದು ಯಾವ ಸಂಘಟನೆಗೂ ಶೋಭೆ ತರುವಂಥದ್ದಲ್ಲ" ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಮಂಗಳವಾರ ಕಾರವಾರದಲ್ಲಿ ಮಾತನಾಡಿದ ಸಚಿವರು, " ರೈತ ಪ್ರತಿಭಟನೆ ದುರದೃಷ್ಟಕರ. ರೈತರು ತಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಡಬೇಕಾಗಿತ್ತು. ಆದರೆ, ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಈ ರೀತಿ ತೊಂದರೆ ಕೊಡುತ್ತಿರುವುದು ಶೋಭೆ ತರುವಂಥದ್ದಲ್ಲ" ಎಂದರು.
"ರೈತರ ಪ್ರತಿಭಟನೆಯಲ್ಲಿ ಏನಾದರು ರಾಜಕೀಯ ಅಡಗಿದೆಯೋ? ಎಂಬ ಬಗ್ಗೆ ತನಿಖೆ ಮಾಡಬೇಕಾದ ಅವಶ್ಯಕತೆ ಇದೆ. ರೈತರು ರಾಜಕೀಯಕ್ಕೆ ಒಳಗಾಗಬಾರದು ಎಂಬುದೇ ನನ್ನ ವಿನಂತಿ. ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕಾಗಿರುವುದು ನನ್ನ ಕರ್ತವ್ಯ. ಕೋವಿಡ್ ನಂತಹ ವಿಷಮ ಪರಿಸ್ಥಿತಿಯಲ್ಲೂ 40 ಲಕ್ಷ ರೈತರಿಗೆ ಪರಿಹಾರಧನ ಕೊಟ್ಟಿದ್ದೇವೆ. ನಾವು ಯಾವುದೇ ರೈತರನ್ನೂ ಕಡೆಗಣಿಸುವಂಥ ಕಾರ್ಯ ಮಾಡಿಲ್ಲ" ಎಂದು ತಿಳಿಸಿದರು.

"ಶೂನ್ಯ ಬಡ್ಡಿದರದಲ್ಲಿ ಸಾಲ, 5 ರೂ. ನಂತೆ ಹಾಲಿಗೆ ಸಬ್ಸಿಡಿ, ಭತ್ತಕ್ಕೆ 1888 ರೂ. ಬೆಂಬಲ ಬೆಲೆಯಲ್ಲಿ ಖರೀದಿಸಲು ಉತ್ತರ ಕನ್ನಡದ ನಾಲ್ಕು ಕಡೆ ಕೇಂದ್ರಗಳನ್ನು ತೆರೆಯಲಾಗಿದೆ. ರೈತರ ಫಸಲು ಹಾಳಾದಾಗೆಲ್ಲ ಅವರ ಬೆಂಬಲಕ್ಕೆ ನಿಂತಿದ್ದೇವೆ" ಎಂದು ಸಚಿವರು ವಿವರಿಸಿದರು.
"ರೈತಾಪಿ ಸಮುದಾಯಕ್ಕೆ ಕಷ್ಟ ಬಂದಾಗ ಕಬ್ಬಿನ ಬೆಳೆಗಳ ಪ್ರಶ್ನೆ ಬಂದಾಗ 10,680 ಕೋಟಿ ರೂ. ಕಬ್ಬು ಬೆಳೆಗಾರರಿಗೆ ಖರ್ಚು ಮಾಡಲಾಗಿದೆ. ಬೆಳೆಗಾರರಿಗೆ ನೀಡಬೇಕಾಗಿದ್ದ ಹಣದಲ್ಲಿ ಶೇ 99ರಷ್ಟು ಪಾವತಿಯಾಗಿದೆ. ರೈತರ ವಿಚಾರ ಬಂದಾಗ ನಮ್ಮ ಸರ್ಕಾರ ಯಾವ ಕಾಲಕ್ಕೂ ಹಿಂದೆ ಬಿದ್ದಿಲ್ಲ" ಎಂದು ಸಚಿವರು ಮಾಹಿತಿ ನೀಡಿದರು.
"ರೈತರ 200 ಎಕರೆಯವರೆಗಿನ ತಮ್ಮ ಜಮೀನನ್ನು ಮಾರಾಟ ಮಾಡಲು ಯಾವುದೇ ಅನುಮತಿ ಬೇಕಾಗಿಲ್ಲ ಎಂಬ ಕಾಯ್ದೆ ಜಾರಿಗೆ ತರಲಾಗಿದೆ. ಆದಾಯ ತೆರಿಗೆಗೆ ಇದ್ದ 20 ಲಕ್ಷ ಮಿತಿಯನ್ನು ತೆಗೆದು ಹಾಕಲಾಗಿದೆ. ಇದರಿಂದ ತಮ್ಮ ಆಸ್ತಿಗಳೆಲ್ಲ ಹೋಗಿಬಿಡಬಹುದೆಂಬ ದುಗುಡ ಅವರಲ್ಲಿದೆ" ಎಂದು ಶಿವರಾಂ ಹೆಬ್ಬಾರ್ ಹೇಳಿದರು.
"ನಾವು ತಂದಿರುವ ಕಾನೂನು ರೈತ ಪರವಾದ ಕಾನೂನು ಎಂದು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ರೈತ ಪರವಾಗಿಯೇ ಕೆಲಸ ಮಾಡುತ್ತೇವೆ" ಎಂದರು.












Click it and Unblock the Notifications