ಉಮಳೆಜೂಗ ಗ್ರಾಮದ ಯುವಕರಿಗೆ ಮದುವೆ ಕನಸಿನ ಮಾತು! ಯಾಕಂತೆ?
ಕಾರವಾರ, ಜೂನ್.15: ಈ ಗ್ರಾಮದಲ್ಲಿ ಮದುವೆ ವಯಸ್ಸಿಗೆ ಬಂದಿರೋ ಸುಮಾರು ಯುವಕರಿದ್ದಾರೆ. ಆದರೆ ಯಾರೂ ಮದುವೆಯಾಗಿಲ್ಲ. ಅದಕ್ಕೂ ಕಾರಣ ಇದೆ. ಈ ಗ್ರಾಮದ ಹೆಸರು ಕೇಳಿದರೆ ಇಲ್ಲಿನ ಯುವಕರಿಗೆ ಯುವತಿಯನ್ನು ಮದುವೆ ಮಾಡಿಕೊಡಲು ಜನ ಹಿಂಜರಿಯುತ್ತಾರೆ.
ಹೌದು, ಕಾರವಾರ ತಾಲೂಕಿನ ವೈಲವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಉಮಳೆಜೂಗ ಗ್ರಾಮ ಕಾಳಿ ನದಿಯಿಂದ ಸುತ್ತುವರಿದಿದೆ. ಇಲ್ಲಿಗೆ ಹೋಗಬೇಕೆಂದರೆ ದೋಣಿಯಲ್ಲಿ ಸಾಹಸ ಮಾಡಿ, ಜೀವ ಕೈಯಲ್ಲಿ ಹಿಡಿದು ತೆರಳಬೇಕು.
ನದಿ ದಾಟಿದ ಬಳಿಕ ಮೊಣಕಾಲುದ್ದದ ಕೆಸರು ತುಂಬಿದ ರಸ್ತೆಯನ್ನು ದಾಟಿ ಊರು ಸೇರಬೇಕು. ಇದೇ ಕಾರಣಕ್ಕೆ ಇಲ್ಲಿನ ಯುವಕರಿಗೆ ಯುವತಿಯರನ್ನು ಕೊಡಲು ಹಿಂಜರಿಯುತ್ತಿದ್ದಾರೆ ಜನರು.

ಇಪ್ಪತ್ತೈದು ಮನೆಗಳ ಗ್ರಾಮ
30 ವರ್ಷ ದಾಟಿದರೂ ಮದುವೆಯಾಗದ ಸುಮಾರು ಆರು ಮಂದಿ ಯುವಕರು ಈ ಗ್ರಾಮದಲ್ಲಿ ಇದ್ದಾರೆ. ಅಂದಾಜು 45 ಎಕರೆ ವಿಸ್ತೀರ್ಣದ ಈ ದ್ವೀಪದಲ್ಲಿರುವ ಜನಸಂಖ್ಯೆಯೇ ನೂರು. ಇರುವುದು ಇಪ್ಪತ್ತೈದು ಮನೆಗಳು.

ಬೇಸತ್ತ ಯುವಕರು
ಕೆಲವರು ಹುಡುಗಿಯರು ಸಿಗದೇ ಮದುವೆಯಾಗದಿರುವುದಕ್ಕೆ ಉದ್ಯೋಗದ ನೆಪದಲ್ಲಿ ದೂರದ ಊರುಗಳಲ್ಲಿ ನೆಲೆಸಿದ್ದಾರೆ. ಊರಿನ ಅವ್ಯವಸ್ಥೆಯಿಂದ ಬೇಸತ್ತು ಈ ಗ್ರಾಮಕ್ಕೆ ಬರುವುದನ್ನೇ ಕಡಿಮೆ ಮಾಡಿದ್ದಾರೆ. ಅದರೆ, ದ್ವೀಪದಲ್ಲಿ ವಾಸ ಮಾಡುವುದು ಅನಿವಾರ್ಯ ಎಂದುಕೊಂಡವರು ಮಾತ್ರ ಇಲ್ಲಿ ಇದ್ದಾರೆ.

ಹಲವು ವರ್ಷಗಳ ಬೇಡಿಕೆ
ಗ್ರಾಮದಲ್ಲಿ ಭತ್ತ, ತೆಂಗನ್ನು ಬೆಳೆಯಲಾಗುತ್ತದೆ. ಇಲ್ಲಿಗೆ ಸಿದ್ದರ ಗ್ರಾಮದ ರಸ್ತೆಯ ಮೂಲಕ ನಯಾವಾಡದಿಂದ ಸೇತುವೆ ನಿರ್ಮಿಸಿಕೊಡಬೇಕಾಗಿದೆ. ಅದು ಸಾಧ್ಯವಿಲ್ಲದಿದ್ದರೆ ತೂಗುಸೇತುವೆಯಾದರೂ ಆಗಬೇಕು ಎಂಬುದು ಇಲ್ಲಿನ ಸ್ಥಳೀಯರ ಹಲವು ವರ್ಷಗಳ ಬೇಡಿಕೆಯಾಗಿದೆ.
ನದಿಯ ಒಂದು ದಡದಿಂದ ಮತ್ತೊಂದು ದಡಕ್ಕೆ ನೇರವಾಗಿ ಸುಮಾರು 150 ಮೀಟರ್ ಅಂತರವಿದೆ. ಆದರೆ, ಅಲ್ಲಿ ನೀರಿನ ಸೆಳೆತ ಹೆಚ್ಚಿರುವ ಕಾರಣ ಬಹುತೇಕರು ಸುತ್ತಿ ಬಳಸಿ ಒಂದು ಕಿ.ಮೀ ದೂರ ದೋಣಿಯಲ್ಲಿ ಪ್ರಯಾಣಿಸಿ ದಡ ಸೇರುತ್ತಾರೆ.

ಕೈಗೆಟುಕುವ ವಿದ್ಯುತ್ ತಂತಿ
ಇಲ್ಲಿ ಸೂಕ್ತ ನಿರ್ವಹಣೆ ಇಲ್ಲದೇ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು, ಕಂಬಗಳು ಕೂಡ ವಾಲಿಕೊಂಡಿವೆ. ಇದರಿಂದ ಇಲ್ಲಿನ ಗ್ರಾಮಸ್ಥರು ಆತಂಕದಲ್ಲೇ ಸಂಚರಿಸಬೇಕಾಗಿದೆ. ದ್ವೀಪಕ್ಕೆ ಸುಮಾರು 25 ವರ್ಷಗಳ ಹಿಂದೆಯೇ ವಿದ್ಯುತ್ ಸಂಪರ್ಕ ನೀಡಲಾಗಿದೆ. ಸಿದ್ದರ ಗ್ರಾಮದ ಮುಖಾಂತರ ವಿದ್ಯುತ್ ತಂತಿಗಳನ್ನು ದ್ವೀಪಕ್ಕೆ ತರಲಾಗಿದೆ.
ಒಂದು ಕಂಬದಿಂದ ಮತ್ತೊಂದು ಕಂಬಕ್ಕೆ ಸಾಕಷ್ಟು ಅಂತರವಿದ್ದು, ಆರಂಭದಲ್ಲಿ ಬಿಗಿಯಾಗಿದ್ದ ತಂತಿಗಳು ಕಾಲಕ್ರಮೇಣ ಸಹಜವಾಗಿ ಜೋತು ಬಿದ್ದಿವೆ. ಅವುಗಳನ್ನು ಬಿಗಿದು ಕಟ್ಟಬೇಕಿತ್ತು. ಆದರೆ, ಹೆಸ್ಕಾಂನವರು ಅವುಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ.
ಇಡೀ ದ್ವೀಪವಾಸಿಗಳು ಈ ತಂತಿಗಳ ಕೆಳಗಿನಿಂದಲೇ ಸಂಚರಿಸಬೇಕು. ಹೊಲ, ಗದ್ದೆಗಳೂ ಇಲ್ಲೇ ಇವೆ. ತಂತಿಗಳು ತೀರಾ ಹಳೆಯದಾಗಿರುವ ಕಾರಣ ಅವುಗಳು ಗಾಳಿ, ಮಳೆಗೆ ಕಡಿದು ಬೀಳುವ ಸಾಧ್ಯತೆಯಿದೆ. ಹೀಗಾಗಿ ನಮ್ಮ ಸುರಕ್ಷತೆಯ ಬಗ್ಗೆ ಆತಂಕ ಕಾಡುತ್ತದೆ. ಸಣ್ಣ ಬಾಲಕನ ಕೈಗೂ ಎಟುಕುವಷ್ಟು ಕೆಳಗೆ ತಂತಿಗಳಿರುವುದು ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications