ಓಟು ಬೇಕು, ಜವಾಬ್ದಾರಿ ಬೇಡ್ವಾ? ಸಂಸದ ಅನಂತಕುಮಾರ್ ಗೆ ಪ್ರಶ್ನಿಸಿದ ಮುಂಡಗೋಡ ಗ್ರಾಮಸ್ಥರು
ಮುಂಡಗೋಡ, ಆಗಸ್ಟ್ 13: ನೆರೆ ವೀಕ್ಷಣೆಗೆ ತೆರಳಿದ್ದ ಉತ್ತರ ಕನ್ನಡದ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಸಂತ್ರಸ್ತರು ಘೇರಾವ್ ಹಾಕಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದಲ್ಲಿ ನೆರೆ ಪರಿಸ್ಥಿತಿ ಪರಿಶೀಲನೆಗೆ ಬಂದಿದ್ದ ಅವರನ್ನು ಮುತ್ತಿಗೆ ಹಾಕಿದ ಗ್ರಾಮಸ್ಥರು, ತಮ್ಮ ಗ್ರಾಮಕ್ಕೆ ಬರುವಂತೆ ಒತ್ತಾಯ ಮಾಡಿದರು. ಈ ವೇಳೆ 'ನಾನು ಬರುವುದು ಮುಖ್ಯವಲ್ಲ. ಅಧಿಕಾರಿಗಳು ಕೆಲಸ ಮಾಡುವುದು ಮುಖ್ಯ' ಎಂದು ಹೆಗಡೆ ಹೇಳಿದ್ದಾರೆ.
ಚಿಗಳ್ಳಿ ಚೆಕ್ ಡ್ಯಾಮ್ ಒಡೆದು ಹೋದ ಹಿನ್ನೆಲೆಯಲ್ಲಿ ಮೊದಲೇ ರೊಚ್ಚಿಗೆದ್ದಿದ್ದ ಜನರು, ಸಂಸದರ ಈ ಮಾತಿನಿಂದ ಮತ್ತಷ್ಟು ಕುಪಿತರಾದರು. 'ನಿಮಗೆ ಓಟು ಬೇಕು. ಜನ ಸಾಯುತ್ತಿದ್ದಾರೆ, ಅದರ ಜವಾಬ್ದಾರಿ ಬೇಡ' ಎಂದು ರೈತರು ಸಂಸದರಿಗೆ ಘೇರಾವ್ ಹಾಕಿ ಪ್ರತಿಭಟಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಮುಂಡಗೋಡಿನ ಚಿಗಳ್ಳಿ ಜಲಾನಯನ ಪ್ರದೇಶದ ರೈತರೂ ತಾಲೂಕು ಪೊಲೀಸ್ ಠಾಣೆಯ ಎದುರು ಇಂದು ಪ್ರತಿಭಟನೆ ನಡೆಸಿದ್ದಾರೆ.
ಚಿಗಳ್ಳಿ ಜಲಾಶಯ 5,000 ಎಕರೆಗಳಷ್ಟು ಕೃಷಿ ಭೂಮಿಗೆ ನೀರುಣಿಸುತ್ತಿತ್ತು. ಇದೀಗ ಡ್ಯಾಂ ಒಡೆದು ಬೆಳೆಯನ್ನು ಕಳೆದುಕೊಳ್ಳುವುದರೊಂದಿಗೆ ನೀರಿನ ಮೂಲವನ್ನೇ ಕಳೆದುಕೊಂಡಿದ್ದೇವೆ. ನೀರಾವರಿ ಇಲಾಖೆ ಜಲಾಶಯದ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಇಂಥ ಘಟನೆ ನಡೆದಿದೆ ಎಂದು ಚಿಗಳ್ಳಿ ಮತ್ತು ಮುಂಡಸಾಲಿ ಗ್ರಾಮಸ್ಥರು ಆರೋಪಿಸಿದ್ದಾರೆ.












Click it and Unblock the Notifications