ಉತ್ತರ ಕನ್ನಡದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಗೆ ಸ್ಪಂದನೆ
ಬೆಂಗಳೂರು, ಆಗಸ್ಟ್ 1: ಉತ್ತರ ಕನ್ನಡ ಜಿಲ್ಲೆಯ ಜನರ ಬಹುಕಾಲದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಪ್ರಯತ್ನದಿಂದಾಗಿ ಸಫಲತೆಯತ್ತ ಹೆಜ್ಜೆ ಇಟ್ಟಿದೆ.
ಕರಾವಳಿ, ಮಲೆನಾಡು ಹಾಗೂ ಬಯಲು ಸೀಮೆಯಿಂದ ಸಮ್ಮಿಳಿತಗೊಂಡ ಭೌಗೋಳಿಕವಾಗಿ ಅತಿ ವಿಸ್ತೀರ್ಣ ಹೊಂದಿರುವ ಉತ್ತರ ಕನ್ನಡ ಜಿಲ್ಲೆಗೆ ತುರ್ತುನಿಗಾ ಘಟಕ/ ಟ್ರಾಮಕೇರ್ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕೆಂಬುದು ಉತ್ತರ ಕನ್ನಡ ಜಿಲ್ಲೆ ಜನರ ಬಹುಕಾಲದ ಬೇಡಿಕೆಯಾಗಿತ್ತು.
ಉತ್ತರ ಕನ್ನಡ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ತೀವ್ರಗೊಂಡ ಹೋರಾಟ
ಈ ಸಂಬಂಧ ಉಸ್ತುವಾರಿ ಸಚಿವರು ಸಭೆ ನಡೆಸಿದಾಗೆಲ್ಲ ಬಹುತೇಕ ಇದು ಚರ್ಚೆಯ ಕಾರ್ಯಸೂಚಿಯಾಗಿರುತ್ತಿತ್ತು. ಈ ಸಂಬಂಧ ಸರ್ಕಾರ ಟ್ರಾಮಕೇರ್ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಿಗೆ ಉತ್ಸಾಹ ತೋರಿದ್ದರೂ ಜಿಲ್ಲಾ ಕೇಂದ್ರದಲ್ಲಿ ಜಾಗದ ಕೊರತೆ ಅಡ್ಡಿಯಾಗುತ್ತಿತ್ತು.
ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಸತತ ಪ್ರಯತ್ನ ಹಾಗೂ ಸಲಹೆಗಳ ಮೇರೆಗೆ ಜಿಲ್ಲಾಡಳಿತ ಇದಕ್ಕೊಂದು ಪರಿಹಾರ ಕಂಡುಕೊಂಡಿದ್ದು ಈ ಎರಡೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಪರಿಹಾರ ಕ್ರಮಗಳನ್ನು ಸೂಚಿಸಿ ಶೀಘ್ರ ಅನುಷ್ಠಾನಕ್ಕೆ ಉತ್ತರ ಕನ್ನಡ ಜಿಲ್ಲಾಧಿಕಾರಿಯವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಜಿಲ್ಲೆಯ ಜನರಿಗೆ ಅತ್ಯಂತ ಅನುಕೂಲವಾಗಲಿದೆ ಎಂದ ಜಿಲ್ಲಾಧಿಕಾರಿ
ಪಿಎಂ ಅಭೀಮ್ ವತಿಯಿಂದ 50 ಹಾಸಿಗೆಗಳ ತುರ್ತುನಿಗಾ ಘಟಕ/ ಟ್ರಾಮಕೇರ್ ಸೆಂಟರ್ ಸ್ಥಾಪಿಸಲು 2021-22ನೇ ಸಾಲಿನಲ್ಲಿ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಈಗಾಗಲೆ ಅನುಮೋದನೆ ನೀಡಿದ್ದು ಅದನ್ನು ಅಂಕೋಲ ತಾಲೂಕಿನ ಹಟ್ಟಿಕೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿ ಸ್ಥಾಪಿಸುವುದು ಸೂಕ್ತವೆಂದು ಜಿಲ್ಲಾಧಿಕಾರಿಗಳು ತಮ್ಮ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಹಟ್ಟಿಕೇರಿ ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇದ್ದು ಉದ್ದೇಶಿತ ನೌಕಾನೆಲೆಯ ನಾಗರಿಕ ವಿಮಾನ ನಿಲ್ದಾಣದಿಂದ ಕೇವಲ 2 ಕಿ.ಮೀ.ದೂರದಲ್ಲಿದೆ. ಅಲ್ಲದೆ ಜಿಲ್ಲಾ ಕೇಂದ್ರದಿಂದ ಕೇವಲ 25ನಿಮಿಷಗಳ ಪ್ರಯಾಣವಾಗಿರುವುದರಿಂದ ಇಲ್ಲಿ ಟ್ರಾಮಕೇರ್ ಸೆಂಟರ್ ಸ್ಥಾಪಿಸುವುದರಿಂದ ಜಿಲ್ಲೆಯ ಜನರಿಗೆ ಅತ್ಯಂತ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ಇದಲ್ಲದೇ, ಜಿಲ್ಲೆಯ ಜನರ ಬಹುಕಾಲದ ಬೇಡಿಕೆಯಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸಲು ಕುಮಟಾ ತಾಲೂಕಿನ ಕುಮಟಾ ಹೋಬಳಿ ಹಾಗೂ ಮಿರ್ಜಾನ ಹೋಬಳಿಗಳ ಒಟ್ಟು ನಾಲ್ಕು ಕಡೆಗಳಲ್ಲಿ ಜಾಗವನ್ನು ಗುರುತಿಸಿದ್ದು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯೊಂದಿಗೆ ಇದನ್ನು ಸ್ಥಾಪಿಸಲು ಅನುಕೂಲಕರವಾಗಿದೆ ಎಂಬುದು ಪ್ರಸ್ತಾವನೆಯ ಪ್ರಮುಖ ಅಂಶವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ತೀವ್ರ ಪ್ರಯತ್ನ
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಮುಂಡಗೋಡ, ಹಳಿಯಾಳ, ಶಿರಸಿ ಸೇರಿಂದಂತೆ ಜಿಲ್ಲೆಯ ದೂರದ ಊರಿನಿಂದ ರೋಗಿಗಳನ್ನು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗೆ ಕರೆದೊಯ್ಯುವುದು ತಪ್ಪುತ್ತದೆ ಹಾಗೂ ಹೆಚ್ಚು ಜೀವಹಾನಿಯನ್ನು ತಪ್ಪಿಸಬಹುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಹೀಗೆ ಈ ಎರಡೂ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ತೀವ್ರ ಪ್ರಯತ್ನ ನಡೆಸಿದ್ದು ಜಿಲ್ಲೆಯ ಜನರ ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾದಂತಾಗಿದೆ.
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ ಜೋರಾಗ ತೊಡಗಿತ್ತು
ಇತ್ತೀಚಿನ ಆಂಬುಲೆನ್ಸ್ ಅಪಘಾತದ ಬಳಿಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟ ಜೋರಾಗ ತೊಡಗಿತ್ತು. ದೊಡ್ಡ ಮಟ್ಟದಲ್ಲಿ ಟ್ವಿಟ್ಟರ್ ಅಭಿಯಾನದ ಮೂಲಕ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ, ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದ್ದರು. ಇದಾದ ನಂತರ ಎಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎನ್ನುವ ಗೊಂದಲ ಸೃಷ್ಟಿಯಾಗಿತ್ತು ಮತ್ತು ಉತ್ತರ ಕನ್ನಡ ಭಾಗದ ಜನರು ಬೆಂಗಳೂರಿನಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದರು. ಈಗ, ಜಿಲ್ಲಾಡಳಿತ ಆಸ್ಪತ್ರೆಗೆ ಜಾಗವನ್ನು ಗುರುತಿಸಿದೆ.