ಶಿರವಾಡದ ರೆಸಾರ್ಟ್ನಲ್ಲಿ 500ಕ್ಕೂ ಅಧಿಕ ಹೊರರಾಜ್ಯ ಕಾರ್ಮಿಕರ ಕಾಮದ ಕಣ್ಣು: ಹೆಣ್ಣುಮಕ್ಕಳಿಗೆ ಆತಂಕ
ಕಾರವಾರ, ಡಿಸೆಂಬರ್, 04: ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಶಿರವಾಡದಲ್ಲಿ ಪ್ರವಾಸಿಗರ ಉಳಿಯುವಿಕೆಗಾಗಿ ರೆಸಾರ್ಟ್ ಪ್ರಾರಂಭಿಸಲಾಗಿತ್ತು. ಆದರೆ ಸದ್ಯ ಆ ರೆಸಾರ್ಟ್ ಸುತ್ತಮುತ್ತ ಸ್ಥಳೀಯರು ಓಡಾಡುವುದಕ್ಕೂ ಭಯ ಪರುವ ಪರಿಸ್ಥಿತಿ ನಿರ್ಮಾಣವಾಗಿದೆ. ರೆಸಾರ್ಟ್ನಲ್ಲಿ ಪ್ರವಾಸಿಗರ ಬದಲು ಬಿಹಾರ, ಉತ್ತರ ಪ್ರದೇಶ ಸೇರಿದಂತೆ ಹೊರ ರಾಜ್ಯದ ಸುಮಾರು ಐನೂರಕ್ಕೂ ಅಧಿಕ ಕಾರ್ಮಿಕರು ನೆಲೆಯೂರಿದ್ದಾರೆ. ಅದರಲ್ಲೂ ರಾತ್ರಿಯಾದರೆ ಅಲ್ಲಿನ ಸುತ್ತಮುತ್ತಲಿನ ಜನರು ಹೊರಗಡೆ ಬರುವುದಕ್ಕೂ ಬಯಪಡುತ್ತಿದ್ದಾರೆ.
ಸಾಮಾನ್ಯವಾಗಿ ರೆಸಾರ್ಟ್ನಲ್ಲಿ ನಿರ್ದಿಷ್ಟವಾಗಿ ಪ್ರವಾಸಿಗರು ಉಳಿಯುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಶಿರವಾಡದಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ಸುಮಾರು ಐನೂರಕ್ಕೂ ಅಧಿಕ ಹೊರರಾಜ್ಯದ ಕಾರ್ಮಿಕರು ವಾಸ ಮಾಡುತ್ತಿದ್ದಾರೆ. ರೆಸಾರ್ಟ್ಗೆ ಅನುಮತಿ ನೀಡಿದ ಜಾಗದಲ್ಲಿ ಕಾರ್ಮಿಕರು ಉಳಿಯಲು ಅವಕಾಶ ನೀಡಿದ್ದು ಯಾರು? ಎನ್ನುವ ಪ್ರಶ್ನೆ ಸ್ಥಳೀಯರದ್ದಾಗಿದೆ. ಕಳೆದ ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದ ರೆಸಾರ್ಟ್ನಲ್ಲಿ ಹೊರರಾಜ್ಯದ ಕಾರ್ಮಿಕರು ತಂಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ. ಕದಂಬ ನೌಕಾನೆಲೆ ಎರಡನೇ ಹಂತದ ವಿಸ್ತರಣೆ ಕಾಮಗಾರಿಗೆ ಐಟಿಡಿಸಿ ಎನ್ನುವ ಕಂಪನಿ ಗುತ್ತಿಗೆ ಪಡೆದಿತ್ತು. ಈ ಕಂಪನಿಯಲ್ಲಿ ಕೆಲಸ ಮಾಡುವ ಬಿಹಾರ ಸೇರಿದಂತೆ ಉತ್ತರ ಭಾರತದ ರಾಜ್ಯದ ಸುಮಾರು ಐನೂರಕ್ಕೂ ಅಧಿಕ ಕಾರ್ಮಿಕರನ್ನು ರೆಸಾರ್ಟ್ನಲ್ಲಿ ಉಳಿಸಲಾಗಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.
ಸ್ಮಶಾನ ಜಾಗದಲ್ಲಿ ನೌಕಾನೆಲೆ ಕಾಮಗಾರಿ ವಿಸ್ತರಣೆ: ಶವಸಂಸ್ಕಾರಕ್ಕೆ ಪರದಾಡಿದ ಗ್ರಾಮಸ್ಥರು
ರೆಸಾರ್ಟ್ನಲ್ಲಿ ತಂಗಿರುವ ಕಾರ್ಮಿಕರು
ರೆಸಾರ್ಟ್ನ ಬೋರ್ಡ್ ಅನ್ನು ತೆಗೆದು, ಕಂಪನಿಯ ಬೋರ್ಡ್ ಹಾಕಿ ಕಾರ್ಮಿಕರಿಗೆ ಉಳಿಯಲು ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಕಳೆದ ಒಂದು ವರ್ಷದಿಂದ ರೆಸಾರ್ಟ್ ಸುತ್ತಮುತ್ತ ಮಿನಿ ಬಿಹಾರ ಆದಂತಾಗಿದೆ. ಸಂಜೆ ಆದರೆ ಸಾಕು ಸುತ್ತಮುತ್ತಲಿನ ಮನೆಯವರು ಈ ಪ್ರದೇಶದಲ್ಲಿ ಓಡಾಡದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಕೆಲಸ ಮುಗಿಸಿಕೊಂಡು ಬರುವ ಕಾರ್ಮಿಕರು ಸುತ್ತಮುತ್ತಲಿನ ಮನೆಗಳ ಹೆಣ್ಣು ಮಕ್ಕಳ ಮೇಲೆಯೇ ಕಣ್ಣು ಹಾಯಿಸುತ್ತಿರುತ್ತಾರೆ. ಈ ಪ್ರದೇಶದಲ್ಲಿ ಹೆಣ್ಣು ಮಕ್ಕಳು ಓಡಾಡುವಾಗ ಅಸಭ್ಯ ವರ್ತನೆ ತೋರುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ. ಆದರೂ ಕೂಡ ಇದನ್ನು ಯಾರು ಕೇಳುವವರು ಇಲ್ಲದಂತಾಗಿದೆ ಎಂದು ಸ್ಥಳೀಯರಾದ ಎಲಿಷಾ ಎಲಕಪಾಟಿ ಆತಂಕ ವ್ಯಕ್ತಪಡಿಸಿದ್ದಾರೆ.
ಶಿರವಾಡ ಜನರ ಕಷ್ಟ ಆಲಿಸದ ಅಧಿಕಾರಿಗಳು
ಇನ್ನು ರೆಸಾರ್ಟ್ ಇರುವ ಶಿರವಾಡ ಭಾಗದ ಕೆಲ ಮನೆಗಳಿಗೆ ಇಂದಿಗೂ ಶೌಚಾಲಯಗಳಿಲ್ಲ. ಆದ್ದರಿಂದ ಇಲ್ಲಿನ ಜನರು ಬಹಿರ್ದಸೆಗೆ ಕಾಡಿನತ್ತ ಹೋಗುತ್ತಾರೆ. ಮಹಿಳೆಯರು ಶೌಚಾಲಯಕ್ಕೆ ತೆರಳಿದ ಸಂದರ್ಭದಲ್ಲಿ ಇದೇ ಹೊರ ರಾಜ್ಯದ ಕಾರ್ಮಿಕರು ಫೋಟೋ ತೆಗೆಯುತ್ತಾರೆ ಎನ್ನುವ ಆರೋಪ ಕೆಲ ತಿಂಗಳ ಹಿಂದೆಯೇ ಕೇಳಿ ಬಂದಿತ್ತು. ಅಲ್ಲದೇ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲನ್ನೂ ಸಹ ಏರಿದ್ದು, ಕಾರ್ಮಿಕರಿಗೆ ಪೊಲೀಸರು ವಾರ್ನಿಂಗ್ ಸಹ ಮಾಡಿದ್ದರು. ಆದರೂ ಹೊರ ರಾಜ್ಯದ ಕಾರ್ಮಿಕರು ತಮ್ಮ ಅಸಭ್ಯ ವರ್ತನೆಗಳನ್ನು ಮುಂದುವರೆಸಿದ್ದು, ಇದರಿಂದ ಸ್ಥಳೀಯರು ಬೇಸತ್ತ ಹೋಗಿದ್ದಾರೆ. ಇನ್ನು ರೆಸಾರ್ಟ್ನಲ್ಲಿ ಪ್ರವಾಸೋದ್ಯಮಕ್ಕೆ ಬರುವವರಿಗೆ ಮಾತ್ರ ಅವಕಾಶ ಇದೆ. ಆದರೆ ಇದರ ಬದಲು ಕಾರ್ಮಿಕರನ್ನು ಉಳಿಸಿಕೊಳ್ಳಲು ಮಾಲಿಕರು ಯಾವುದೇ ಅನುಮತಿ ಪಡೆದಿಲ್ಲ. ಸ್ಥಳೀಯ ಪಂಚಾಯತ್ನಲ್ಲಾಗಲಿ, ತಾಲೂಕು ಆಡಳಿತದಲ್ಲಾಗಲಿ ಅನುಮತಿ ಪಡೆಯದೇ ಕಾರ್ಮಿಕರಿಗೆ ಉಳಿಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರೂಪಾಲಿ ನಾಯ್ಕ ಕೊಟ್ಟ ಭರವಸೆ ಏನು?
ಈ ಬಗ್ಗೆ ಸ್ಥಳೀಯ ಶಾಸಕರ ಬಳಿ ಕೇಳಿದರೆ ಈಗಾಗಲೇ ಸಮಸ್ಯೆ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು, ಪೊಲೀಸ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಮೇಲಾಗಿ ಈ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇನೆ. ಕೊರೊನಾ ಸಂದರ್ಭದಲ್ಲಿ ರೆಸಾರ್ಟ್ನಲ್ಲಿ ವ್ಯವಹಾರ ಇಲ್ಲದ ಕಾರಣ ಕೆಲ ರೆಸಾರ್ಟ್ ಮಾಲಿಕರು ಕಾರ್ಮಿಕರಿಗೆ ಉಳಿಯಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ ಕಾರ್ಮಿಕರು ದುರ್ವರ್ಥನೆ ತೋರುವುದನ್ನು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದನ್ನು ಸರಿಪಡಿಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಶಾಸಕಿ ರೂಪಾಲಿ ನಾಯ್ಕ ಭರವಸೆ ನೀಡಿದ್ದಾರೆ.
ರೆಸಾರ್ಟ್ನಲ್ಲಿ ಉಳಿದ ಹೊರರಾಜ್ಯದ ಕಾರ್ಮಿಕರು
ಒಟ್ಟಿನಲ್ಲಿ ಪ್ರವಾಸಿಗರ ಬಳಕೆಗೆಂದು ಪ್ರಾರಂಭಿಸಿದ ರೆಸಾರ್ಟ್ನಲ್ಲಿ ಐನೂರಕ್ಕೂ ಅಧಿಕ ಕಾರ್ಮಿಕರನ್ನು ಉಳಿಯಲು ಅವಕಾಶ ಮಾಡಿಕೊಟ್ಟಿದ್ದು ಯಾರು? ಎನ್ನುವ ಪ್ರಶ್ನೆಗಳು ಎದ್ದಿವೆ. ಮೇಲ್ನೋಟಕ್ಕೆ ಇದು ಅನಧಿಕೃತ ಎನ್ನುವುದು ಕಾಣುತ್ತಿದೆ. ಅಲ್ಲದೆ ಹೊರ ರಾಜ್ಯದ ನೂರಾರು ಕಾರ್ಮಿಕರನ್ನು ತಂದು ಹಳ್ಳಿಯೊಂದರಲ್ಲಿ ವಾಸಕ್ಕೆ ಬಿಟ್ಟರೆ ಜನರು ಹೇಗೆ ಇರಬೇಕು? ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ. ಇನ್ನು ಇದಕ್ಕೆ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.