ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಸಭೆ: ಶಾಸಕಿ ರೂಪಾಲಿ-ಮಾಜಿ ಶಾಸಕ ಸತೀಶ್ ಸೈಲ್ ವಾಕ್ಸಮರ
ಕಾರವಾರ, ಸೆಪ್ಟೆಂಬರ್ 28: ಹುಬ್ಬಳ್ಳಿ -ಅಂಕೋಲಾ ರೈಲ್ವೆ ಯೋಜನೆ ಸಂಬಂಧ ಕೇಂದ್ರ ರೈಲ್ವೆ ಯೋಜನಾ ಸಮಿತಿಯು ಅಹವಾಲು ಸ್ವೀಕಾರ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿರುವುದಕ್ಕೆ ಮಾಜಿ ಶಾಸಕ ಸತೀಸ್ ಸೈಲ್ ವಿರೋಧ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಸೀಮಿತ ಜನರಿಗೆ ಮಾತ್ರ ಅವಕಾಶ ಮಾಡಿಕೊಟ್ಟಿರುವುದಕ್ಕೆ ಸಭೆ ಆರಂಭವಾದ ಕೆಲ ಹೊತ್ತಿನಲ್ಲಿಯೇ ಮಾಜಿ ಶಾಸಕ ಸತೀಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಾರ್ವಜನಿಕ ಅಹವಾಲು ಸಭೆಯನ್ನು ತೆರೆದ ಸ್ಥಳದಲ್ಲಿ ಆಯೋಜಿಸಬೇಕು. ಆದರೆ ಕೆಲವೇ ಕೆಲವು ಜನರು ಸೇರಲು ಸಾಧ್ಯವಿರುವ ಪ್ರದೇಶದಲ್ಲಿ ಸಭೆ ಮಾಡುವುದಕ್ಕೆ ವಿರೋಧವಿದೆ. ಇದರಿಂದ ಎಷ್ಟೊ ಮಂದಿ ಅಹವಾಲು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಜಿಲ್ಲಾಧಿಕಾರಿ ಕಚೇರಿ ಎದುರಿನ ಶಾಮಿಯಾನ ಹಾಕಿದ ಪ್ರದೇಶದಲ್ಲಿ ಸಭೆ ನಡೆಸುವಂತೆ ಆಗ್ರಹಿಸಿದರು.
ಸೆಪ್ಟೆಂಬರ್ 30ಕ್ಕೆ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಮೋದಿ ಚಾಲನೆ
ಈ ವೇಳೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ ಸಾಕಷ್ಟು ಸಂಖ್ಯೆಯಲ್ಲಿ ಸಂಘಟನೆಗಳು, ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿರುವ ಹಿನ್ನಲೆ ಒಬ್ಬರಾದ ಮೇಲೆ ಒಬ್ಬರನ್ನು ಕರೆದು ಅಹವಾಲು ಸ್ವೀಕರಿಸೋದಾಗಿ ತಿಳಿಸಿದರು. ಈ ವೇಳೆ ಶಾಸಕಿ ರೂಪಾಯಿ ನಾಯ್ಕ ಸತೀಶ್ ಸೈಲ್ರಿಗೆ ಸಭೆಗೆ ಅಡ್ಡಿಪಡಿಸದಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಬಾರಿ ವಿವಿಧ ಯೋಜನೆಗಳ ಸಾರ್ವಜನಿಕ ಅಹವಾಲು ಸಭೆಗಳಲ್ಲಿ ಇದೇ ರೀತಿ ಅಡ್ಡಿಪಡಿಸುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲದರಲ್ಲೂ ರಾಜಕೀಯ ತಂದಿಟ್ಟು ಕಾರವಾರ ಹಾಳು ಮಾಡಿದ್ದೀರ, ಸುಮ್ಮನೆ ಇಲ್ಲಿ ಭಾಷಣ ಮಾಡಬೇಡಿ, ಹೋಗಿ ಕೂತ್ಕೊಳ್ಳಿ' ಎಂದು ಏರು ಧ್ವನಿಯಲ್ಲೇ ಹೇಳಿದರು. ಇದು ಇಬ್ಬರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಒಂದು ಹಂತದಲ್ಲಿ ಸೈಲ್ ವಿರುದ್ಧ ರೂಪಾಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಆದರೆ ಯಾವುದೇ ಕಾರಣಕ್ಕೂ ಸಾರ್ವಜನಿಕರನ್ನು ಒಳಗೆ ಕರೆಯದೇ ಸಭೆ ನಡೆಸದಂತೆ ಸತೀಶ್ ಸೈಲ್ ಪಟ್ಟು ಹಿಡಿದರು. ಈ ವೇಳೆ ಜಿಲ್ಲಾಧಿಕಾರಿಗಳು ಸಭೆಯನ್ನು 15 ನಿಮಿಷಗಳ ಕಾಲ ಮುಂದೂಡಿದ್ದು ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಹೊರಗೆ ಕಳುಹಿಸಿ ಬಳಿಕ ಸಾರ್ವಜನಿಕರನ್ನು ಒಳಗೆ ಕರೆದು ಸಭೆ ನಡೆಸಲಾಯಿತು.
ಉತ್ತರ ಕರ್ನಾಟಕ ಜನರ ಬಹುದಿನಗಳ ಬೇಡಿಕೆಯಾಗಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ಸಾಧಕ ಬಾಧಕಗಳನ್ನು ಪರಿಶೀಲಿಸಲು ಕೇಂದ್ರ ತಂಡ ಮಂಗಳವಾರ ಜಿಲ್ಲೆಗೆ ಭೇಟಿ ನೀಡಿದ್ದು, ಅಂಕೋಲಾ ಮತ್ತು ಯಲ್ಲಾಪುರ ತಾಲೂಕುಗಳಲ್ಲಿ ರೈಲು ಮಾರ್ಗ ಸಾಗುವ ಮಾರ್ಗಗಳನ್ನು ಪರಿಶೀಲನೆ ನಡೆಸಿದ್ದಾರೆ.
ಈ ಮಹತ್ವದ ಯೋಜನೆ ಜಾರಿಯಾದರೆ ವನ್ಯಜೀವಿಗಳು, ಪರಿಸರದ ಮೇಲಾಗುವ ಪರಿಣಾಮಗಳು, ರೈಲು ಹಳಿಗಳ ಅಳವಡಿಕೆಯಿಂದ ಹುಲಿಗಳ ಸಂಚಾರಕ್ಕೆ, ಆನೆ ಕಾರಿಡಾರ್ಗೆ ತೊಂದರೆ ಉಂಟಾಗಬಹುದೇ ಮತ್ತು ಮುಂದಿನ 50 ವರ್ಷಗಳಲ್ಲಿ ಈ ಭಾಗದಲ್ಲಿ ವನ್ಯಜೀವಿಗಳ ಸಂಖ್ಯೆಯಲ್ಲಿ ಆಗಬಹುದಾದ ಏರಿಕೆಯ ಬಗ್ಗೆಯೂ ಅರಣ್ಯ ಇಲಾಖೆಯ ಅಧಿಕಾರಿಗಳಿ ಮಾಹಿತಿ ಪಡೆದುಕೊಂಡಿದ್ದಾರೆ.