ಕಾಳಿ ನದಿ ಹಿನ್ನೀರಿನಲ್ಲಿ ಸಾಮೂಹಿಕ ಮತ್ಸ್ಯ ಭೇಟೆ ಕಣ್ತುಂಬಿಕೊಂಡ ಜನ
ಕಾರವಾರ, ಮೇ 21 : ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಿ ನದಿ ಹಿನ್ನೀರಿನಲ್ಲಿ ಭಾನುವಾರ ಸುತ್ತಮುತ್ತಲಿನ ಗ್ರಾಮಸ್ಥರಿಂದ ಸಾಮೂಹಿಕ ಮತ್ಸ್ಯ ಬೇಟೆ ನಡೆಯಿತು.
ಈ ಮತ್ಸ್ಯ ಬೇಟೆಯಲ್ಲಿ ಜಾತಿ, ಧರ್ಮದ ಬೇಧವಿಲ್ಲದೆ ಎಲ್ಲರೂ ಒಟ್ಟಾಗಿ ಮೀನುಗಳನ್ನು ಹಿಡಿದ ದೃಶ್ಯ ವಿಶೇಷ ಗಮನ ಸೆಳೆಯಿತು. ಈ ಮೀನುಗಳ ಭೇಟೆಯನ್ನು ಕಣ್ತುಂಬಿಕೊಳ್ಳಲು ಸುತ್ತಲೂ ನೂರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು.
ಸಾಗರ್ ಚಂಡಮಾರುತ ಸೃಷ್ಠಿಸಿದ ಅವಾಂತರಕ್ಕೆ ನಲುಗಿತು ದಕ್ಷಿಣ ಕನ್ನಡ
ಕಾರವಾರದ ಗಿಂಡಿ ಮಹಾದೇವಿ ದೇವಸ್ಥಾನದ ವ್ಯಾಪ್ತಿಯಲ್ಲಿರುವ ಕಾಳಿನದಿ ಹಿನ್ನೀರಿನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಮತ್ಸ್ಯಬೇಟೆಗೆ ಅವಕಾಶ ಕಲ್ಪಿಸಲಾಗಿತ್ತು. ದೇವಸ್ಥಾನದ ಆವರಣದಲ್ಲಿ ತುಂಬಿಕೊಂಡಿದ್ದ ಹಿನ್ನೀರನ್ನು ಖಾಲಿ ಮಾಡುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ನೂರಾರು ಜನರು ಬಲೆ ಹಾಗೂ ಚೀಲಗಳ ಮೂಲಕ ನೀರಿಗಿಳಿದು ಮತ್ಸ್ಯ ಬೇಟೆ ಆರಂಭಿಸಿದರು.
ಮೀನು ಹಿಡಿದು ಸಂಭ್ರಮಪಟ್ಟ ಜನರು
ಸುಮಾರು 3 ತಾಸುಗಳವರೆಗೆ ನಡೆದ ಈ ಬೇಟೆಯಲ್ಲಿ ಜನರು ವಿವಿಧ ಜಾತಿಯ ಸಹಸ್ರಾರು ಮೀನುಗಳನ್ನು ಹಿಡಿದು ಖುಷಿ ಪಟ್ಟರು. ಜೊತೆಗೆ ಈ ಎಲ್ಲ ಸನ್ನಿವೇಶಗಳನ್ನು ನೋಡಲೆಂದೇ ಸೇರಿದ್ದ ಜನ ಸಮೂಹ ತಮ್ಮ ಮೊಬೈಲ್ಗಳಲ್ಲಿ ವಿಡಿಯೋ ಹಾಗೂ ಫೊಟೋ ಕ್ಲಿಕ್ಕಿಸುತ್ತ ಆನಂದಪಟ್ಟರು.
ಕಿನ್ನರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಡ್ತಿ, ಗುನಗಿ, ಹಾಲಕ್ಕಿಗಳು, ಭಂಡಾರಿ, ಕೋಮಾರಪಂಥ, ದೇವಳ್ಳಿ, ಕೊಂಕಣ ಮರಾಠ ಜೊತೆಗೆ ಇತರ ಧರ್ಮದವರೂ ಕೂಡ ಈ ಮತ್ಸ್ಯ ಬೇಟೆಯಲ್ಲಿ ಪಾಲ್ಗೊಂಡರು. ಮಹಿಳೆಯರು, ಮಕ್ಕಳು, ಹಿರಿಯರು ಕಿರಿಯರೆನ್ನದೆ ಪ್ರತಿಯೊಬ್ಬರೂ ಮೀನು ಹಿಡಿದು ಸಂಭ್ರಮಿಸಿದರು.
ಈ ದೃಶ್ಯಗಳು ಸಾಮಾನ್ಯ
ಸುಮಾರು 5 ಎಕರೆ ಪ್ರದೇಶದ ಹಿನ್ನಿರಿನಲ್ಲಿ 3 ಗಂಟೆಗಳ ಕಾಲ ನಡೆದ ಮತ್ಸ್ಯ ಬೇಟೆಯಲ್ಲಿ ಜನಜಾತ್ರೆಯೇ ನೆರೆದಿತ್ತು. ಏಂಡಿ, ದಾಂಡಿ, ಕಟಿಯಾಳ ಮೊದಲಾದ ಬಲೆಗಳ ಮೂಲಕ ನೊಗಲಿ, ಮಡ್ಲೆ, ಕುರುಡೆ, ತಾಂಬುಸ್, ಸಿಗಡಿ, ಭುರಾಟೆ, ಕಾಗಳಸಿ, ಗೊಳಸು ಮುಂತಾದ ಜಾತಿಯ ಮೀನುಗಳನ್ನು ಹಿಡಿಯಲಾಗುತ್ತಿತ್ತು.
ಅವುಗಳನ್ನು ಚೀಲದಲ್ಲಿ ತುಂಬಿ ಮತ್ತೆ ಮತ್ತೆ ಮೀನು ಹೀಡಿಯಲು ಮುಂದಾಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಮೇನಲ್ಲಿ ನಡೆಯುತ್ತದೆ ಮೀನು ಬೇಟೆ
ಈ ಗ್ರಾಮದಲ್ಲಿ ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಈ ಮತ್ಸ್ಯಬೇಟೆಯಲ್ಲಿ ಸುಮಾರು 8 ರಿಂದ 10 ಕ್ವಿಂಟಲ್ ಮೀನು ಹಿಡಿಯಲಾಗುತ್ತದೆ. ಗಿಂಡಿ ಮಹಾದೇವಿ ದೇವಸ್ಥಾನದ ವತಿಯಿಂದ ನಡೆಯುವ ಈ ಚಟುವಟಿಕೆಯಲ್ಲಿ ಊರಿನವರು ಮಾತ್ರವಲ್ಲದೆ ಪರ ಊರಿನ ಜನರು ಕೂಡ ಬಂದು ಸಂಭ್ರಮಿಸುತ್ತಾರೆ.
ಹಿನ್ನೀರಿನಲ್ಲಿ ದಸರಾ ಆರಂಭದಿಂದ ಇಲ್ಲಿಯವರಗೆ ಮೀನು ಹಿಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಇದರಿಂದ ಇಲ್ಲಿ ಮೀನುಗಳು ಸೊಂಪಾಗಿ ಬೆಳೆದಿರುತ್ತವೆ. ನಂತರ ಶಿವರಾತ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾಮನ್ಯವಾಗಿ ಮೇ ತಿಂಗಳಿನಲ್ಲಿ ಮೀನು ಬೇಟೆಗೆ ದಿನ ಗುರುತಿಸಲಾಗುತ್ತದೆ. ಈ ದಿನ ಎಲ್ಲರೂ ಸಂಭ್ರಮದಿಂದ ಭಾಗವಹಿಸಿ ಮೀನು ಹಿಡಿಯುತ್ತಾರೆ.
ದೇವರಿಗೂ ಮೀನಿನ ಪಾಲು
ಮತ್ಸ್ಯಬೇಟೆಯಲ್ಲಿ ತಮಗೆ ದೊರಕಿದ ಎಲ್ಲ ಮೀನುಗಳನ್ನು ಮನೆಗೆ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಅದರಲ್ಲಿ ದೇವರಿಗೂ ಒಂದು ಪಾಲನ್ನು ನೀಡಬೇಕು. ದೇವಸ್ಥಾನ ಕಮಿಟಿಯವರು ನೇಮಿಸಿದ ಸದಸ್ಯರಿಗೆ ತಾವು ಹಿಡಿದಿದ್ದರಲ್ಲಿ ಅರ್ಧಪಾಲನ್ನು ನೀಡಿ, ಉಳಿದ ಮೀನುಗಳನ್ನು ತೆಗೆದುಕೊಂಡು ಹೋಗಬೇಕು.
ಹೀಗೆ ದೇವಸ್ಥಾನಕ್ಕೆ ಸಲ್ಲಿಕೆಯಾದ ಎಲ್ಲಾ ಮೀನುಗಳನ್ನು ಬಳಿಕ ಹರಾಜು ಕೂಗಲಾಗುತ್ತದೆ. ಇದರಿಂದ ಬರುವ ಹಣವನ್ನು ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಹಾಗೂ ಅಭಿವೃದ್ಧಿ ಕಾರ್ಯಕ್ಕಾಗಿ ಬಳಸಲಾಗುತ್ತದೆ.