ವಿವಾಹಿತ ಮಹಿಳೆ ಜೊತೆ ಯುವಕನ ಲವ್, ಕಾರವಾರದಲ್ಲಿ ಸಿಕ್ಕಿಬಿದ್ದರು!
ಕಾರವಾರ, ಆಗಸ್ಟ್, 28: ಕನ್ಯೆ ಹುಡುಕಲು ನೆರವಾದ ಮನೆಯ ಸೊಸೆಯನ್ನೇ ಪ್ರೀತಿಯ ಬಲೆಯಲ್ಲಿ ಕೆಡವಿ ಓಡಿ ಬಂದು ಕಾರವಾರದಲ್ಲಿ ಜೋಡಿಯೊಂದು ಸಂಸಾರ ನಡೆಸುತ್ತಿತ್ತು. ಮೊಬೈಲ್ ಲೋಕೇಶನ್ ಟ್ರ್ಯಾಕಿಂಗ್ ಮೂಲಕ ಅವರನ್ನು ಪತ್ತೆ ಮಾಡಿದ ತಮಿಳುನಾಡು ಪೊಲೀಸರು ಇಬ್ಬರನ್ನು ಶನಿವಾರ ಊರಿಗೆ ವಾಪಸ್ ಕರೆದೊಯ್ದಿದ್ದಾರೆ.
ತಮಿಳುನಾಡು ಮೂಲದ 24 ವರ್ಷದ ಆಯಿಷಾ ಹಾಗೂ 27 ವರ್ಷದ ಯುವಕ ಬೀರ್ ಮೊಹಿದ್ದೀನ್ ಎನ್ನುವ ಪ್ರೇಮಿಗಳು ಕಾರವಾರದಲ್ಲಿ ಸಂಸಾರ ನಡೆಸುತ್ತಿದ್ದರು. ತಮಿಳುನಾಡಿನ ಚೆನ್ನೈ ಮೂಲದವನಾದ ಬೀರ್ ಮೊಹಿದ್ದೀನ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಉತ್ತಮ ಸಂಬಳದ ಕೆಲಸದಲ್ಲಿದ್ದ.
ಅಲ್ಲದೇ ಮದುವೆಗಾಗಿ ಹುಡುಗಿಯ ಹುಡುಕಾಟದಲ್ಲಿಯೂ ಇದ್ದ. ಇದೇ ವೇಳೆ ದೂರದ ಸಂಬಂಧಿ ಅಬ್ದುಲ್ ಖಾದರ್ ಎಂಬುವವರು ಈತನಿಗೆ ಯುವತಿ ಹುಡುಕಿಕೊಡುವುದಾಗಿ ಹೇಳಿದ್ದರಿಂದ ಅವರ ಮನೆಗೆ ಬಂದು ಹೋಗುತ್ತಿದ್ದ.

ಇದೇ ಅಬ್ದುಲ್ನ ಸೊಸೆ 24 ವರ್ಷದ ಆಯಿಷಾ ಹಾಗೂ ಯುವಕ ಬೀರ್ ಮೊಹಿದ್ದೀನ್ಗೆ ಬಾಲ್ಯದಿಂದಲೂ ಪರಿಚಯ ಇದ್ದವರಾಗಿದ್ದರು. ಅಲ್ಲದೇ ಮದುವೆಗೂ ಮುನ್ನ ಇವಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಆದರೆ ಆಕೆಗೆ 15ನೇ ವಯಸ್ಸಿನಲ್ಲೇ ಮದುವೆ ಮಾಡಿದ್ದರಿಂದಾಗಿ ಪ್ರೀತಿ ಮನಸ್ಸಿನಲ್ಲೇ ಕಮರಿ ಹೋಗಿತ್ತು.
ನಂತರ ಬೀರ್ ಮೊಹಿದ್ದೀನ್ ಮದುವೆಗಾಗಿ ಹುಡುಗಿ ಹುಡುಕಾಟದಲ್ಲಿದ್ದ. ಆಗ ವಿವಾಹಿತೆ ಎರಡು ಮಕ್ಕಳ ತಾಯಿ ಆಯಿಷಾ ಮೇಲೆ ಮನಸ್ಸಾಗಿ ಇಂಗಿತ ವ್ಯಕ್ತಪಡಿಸಿದ್ದು, ಆಕೆ ಕೂಡ ಯುವಕನ ಪ್ರೇಮ ನಿವೇದನೆಯನ್ನು ಒಪ್ಪಿಕೊಂಡಿದ್ದಳು. ಬಳಿಕ ಇಬ್ಬರು ಊರು ತೊರೆಯಲು ನಿರ್ಧರಿಸಿ, ಕಳೆದ ಫೆಬ್ರವರಿಯಲ್ಲಿ 21ರಂದು ಬೈಕ್ನಲ್ಲಿ ಬೆಂಗಳೂರು-ಮಂಗಳೂರು ಮಾರ್ಗವಾಗಿ ಕಾರವಾರಕ್ಕೆ ಬಂದಿದ್ದು, ಇಲ್ಲಿಯೇ ಬಾಡಿಗೆ ಮನೆ ಪಡೆದು ಸಂಸಾರ ಹೂಡಿದ್ದರು. ಯುವಕ ಓದಿದ್ದು ಇಂಜಿನಿಯರಿಂಗ್, ಆದರೂ ಕೂಡ ಹೆಂಡತಿಯೊಂದಿಗೆ ಕಟ್ಟಡ ನಿರ್ಮಾಣ ಕೆಲಸಕ್ಕೆ ತೆರಳುತ್ತಿದ್ದ. ಕಳೆದ 6 ತಿಂಗಳಿನಿಂದ ಕಾರವಾರದಲ್ಲೇ ಜೀವನ ನಡೆಸಿಕೊಂಡಿದ್ದರು.
ಇನ್ನು ವಿವಾಹಿತೆ ಆಯಿಷಾಗೆ ಇಬ್ಬರು ಮಕ್ಕಳಿದ್ದು, ತಮಿಳುನಾಡಿನಿಂದ ಯುವಕನೊಂದಿಗೆ ಓಡಿ ಬಂದ ಬೆನ್ನಲ್ಲೇ ಆಕೆಯ ಪತಿಯ ಮನೆಯವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ತಮಿಳುನಾಡು ಪೊಲೀಸರು ಯುವತಿಯ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಪತ್ತೆ ಕಾರ್ಯಕ್ಕೆ ಮುಂದಾಗಿದ್ದು, ಕಳೆದ ಎರಡು ತಿಂಗಳ ಹಿಂದೆ ಆಕೆ ಕಾರವಾರದಲ್ಲಿ ಇರುವುದನ್ನು ಪತ್ತೆ ಮಾಡಿದ್ದರು.

ಈ ವೇಳೆ ಕಾರವಾರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಆದರೂ ಅವರು ಇದ್ದ ನಿಖರವಾದ ಜಾಗ ತಿಳಿಯದೇ ಪೊಲೀಸರು ವಾಪಸ್ಸಾಗಿದ್ದರು. ಬಳಿಕ ಕಾರವಾರದ ನಗರ ಠಾಣೆ ಪೊಲೀಸರ ಸಹಕಾರದೊಂದಿಗೆ ವಿವಾಹಿತೆ ಪತ್ತೆಗೆ ಮುಂದಾಗಿದ್ದು, ನಗರದ ಸೋನಾರವಾಡದಲ್ಲಿ ವಾಸವಾಗಿರುವ ಖಚಿತ ಮಾಹಿತಿಯನ್ನು ಕಾರವಾರ ಪೊಲೀಸರು ಪತ್ತೆ ಹಚ್ಚಿದರು.
ಅದರಂತೆ ಕಾರವಾರಕ್ಕೆ ಆಗಮಿಸಿದ ತಮಿಳುನಾಡು ಪೊಲೀಸರು ಭಾಷೆಯ ಸಮಸ್ಯೆ ಆಗಿದ್ದರಿಂದ ಆಟೋ ಚಾಲಕನೋರ್ವನ ಸಹಕಾರವನ್ನು ಪಡೆದರು. ನಂತರ ವಿವಾಹಿತೆ ಹಾಗೂ ಆಕೆಯ ಪ್ರಿಯಕರನನ್ನು ವಶಕ್ಕೆ ಪಡೆದು ವಾಪಸ್ ಕರೆದೊಯ್ದಿದ್ದಾರೆ.
ಒಟ್ಟಾರೆ ಮದುವೆ ಆಗಲು ಹುಡುಗಿ ಹುಡುಕುತ್ತಿದ್ದ ಯುವಕ ವಿವಾಹಿತೆಯನ್ನು ಪ್ರೀತಿ ಮಾಡಿ ನೆರೆಯ ರಾಜ್ಯ ತಮಿಳುನಾಡಿನಿಂದ ರಾಜ್ಯಕ್ಕೆ ಓಡಿಸಿಕೊಂಡು ಬಂದಿದ್ದ. ಆದರೂ ಇವರು ಕೊನೆಗೆ ಪೊಲೀಸರು ಬೀಸಿದ ಬಲೆಗೆ ಸಿಕ್ಕಿಬಿದ್ದಿದ್ದಾರೆ.












Click it and Unblock the Notifications