ಇರುವೆ ಕಚ್ಚಿ ಅಂಗವಿಕಲ ಯುವಕ ಸಾವು, ಮಾನವೀಯತೆ ಮೆರೆದ ಸ್ಥಳೀಯರು
ಕಾರವಾರ, ನವೆಂಬರ್ 4: ಕಪ್ಪು ಇರುವೆ ಕಚ್ಚಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಲ್ಲಿನ ಅಂಗವಿಕಲ ಯುವಕ ಶಿವು ಚಂದ್ರಸ್ವಾಮಿ (19) ಎಂಬಾತ ಚಿಕಿತ್ಸೆ ಫಲಿಸದೇ ಶುಕ್ರವಾರ ಮೃತಪಟ್ಟ ಹೃದಯವಿದ್ರಾವಕ ಘಟನೆ ಇಲ್ಲಿ ನಡೆದಿದೆ.
ಬೈತ್ಖೋಲ್ ನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತಾಯಿ ಕಮಲಾರ ಜತೆ ಗುಡಿಸಲಿನಲ್ಲಿ ಶಿವು ವಾಸವಾಗಿದ್ದ. ಈತನ ತಾಯಿಗೆ ಒಟ್ಟು ನಾಲ್ವರು ಮಕ್ಕಳು. ಅದರಲ್ಲಿ ಅವಳಿ ಮ್ಕಳಾದ ಶಿವು ಹಾಗೂ ಸಂಗೀತಾ ಹುಟ್ಟು ಅಂಗವಿಕಲರಾಗಿದ್ದರು. ಶಿವು ತನ್ನ ಎರಡೂ ಕಾಲು ಹಾಗೂ ಎರಡೂ ಕೈ ಸ್ವಾಧೀನ ಕಳೆದುಕೊಂಡಿದ್ದ. ಜತೆಗೆ ಈತನಿಗೆ ಸ್ಪಷ್ಟವಾಗಿ ಮಾತನಾಡಲು ಕೂಡ ಬರುತ್ತಿರಲಿಲ್ಲ.

ಇರುವೆ ಕಚ್ಚಿ ಸಾವು
ಶಿವು ಅವರ ಸಹೋದರಿ ತುಳಸಿ ವಿವಾಹಕ್ಕಾಗಿ ಮನೆಯಲ್ಲಿ ಕಬ್ಬನ್ನು ತಂದು ಇಡಲಾಗಿತ್ತು. ಈ ವೇಳೆ ಅದಕ್ಕೆ ಕಪ್ಪು ಇರುವೆ ಹತ್ತಿದ್ದು, ತಾಯಿ ಕಮಲಾ ಕೆಲಸಕ್ಕೆ ತೆರಳಿದ ಸಂದರ್ಭ ಅದು ಶಿವುವನ್ನು ಸಂಪೂರ್ಣವಾಗಿ ಆಕ್ರಮಿಸಿ ಕಚ್ಚಿವೆ. ನೋವು ತಾಳಲಾರದೆ ಶಿವು ಕಿರುಚಲು ಪ್ರಾರಂಭಿಸಿದ್ದಾನೆ. ಅದನ್ನು ಕೇಳಿದ ಸ್ಥಳೀಯರು ಸ್ಥಳಕ್ಕಾಗಿಮಿದ್ದಾಗ ಸಿವು ಅಸ್ವಸ್ಥಗೊಂಡು ಬಿದ್ದಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದ ಸ್ಥಳೀಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಮೊದಲೇ ಹೃದಯ ಸಂಬಂಧಿ ಕಾಯಿಲೆ ಹೊಂದಿದ್ದ ಶಿವುನ ಕಿರುಚಾಟದಿಂದ ಆತನ ಹೃದಯದಲ್ಲಿ ರಕ್ತ ಸಂಚಾರ ಸ್ತಬ್ಧಗೊಂಡಿದೆ. ಹೀಗಾಗಿ ಚಿಕಿತ್ಸೆ ಫಲಿಸದೇ ಶಿವು ಅಸುನೀಗಿದ್ದಾನೆ.

ಸ್ಥಳೀಯರಿಂದ ಅಂತ್ಯಕ್ರಿಯೆ
ತೀರಾ ಬಡತನದಲ್ಲಿದ್ದ ಶಿವುನ ಕುಟುಂಬಕ್ಕೆ ಆತನ ಶವ ಸಂಸ್ಕಾರ ನಡೆಸಲೂ ಹಣವಿರಲಿಲ್ಲ. ಬಳಿಕ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ನಗರಸಭಾ ಸದಸ್ಯೆ ಛಾಯಾ ಜಾವ್ಕಾರ್ ಹಾಗೂ ಸ್ಥಳೀಯ ನಿವಾಸಿ ವಿಲ್ಸನ್ ಫರ್ನಾಂಡಿಸ್ ಮಾಹಿತಿ ತಿಳಿದು ಆತನ ಅಂತಿಮ ಸಂಸ್ಕಾರ ನೆರವೇರಿಸಿದರು. ಡಿಸಿಎಫ್ ಕೆ.ಗಣಪತಿ ಅವರು ಶವದವನಕ್ಕೆ ಕಟ್ಟಿಗೆಯನ್ನು ಉಚಿತವಾಗಿ ನೀಡಿದರು.












Click it and Unblock the Notifications