ಕಾರವಾರ ಮಿನಿ ವಿಧಾನಸೌಧದ ಅವ್ಯವಸ್ಥೆ: ಪಾಳುಬಿದ್ದ ನೂತನ ಕೊಠಡಿಗಳು
ಕಾರವಾರ, ನವೆಂಬರ್16: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಕಾರವಾರದ ಮಿನಿ ವಿಧಾನಸೌಧ, ಉದ್ಘಾಟನೆ ಭಾಗ್ಯ ಕಾಣದೆ ಪಾಳುಬಿದ್ದಿದೆ. ಕಟ್ಟಡಕ್ಕೆ ಬಳಿದ ಸುಣ್ಣ ಬಣ್ಣವೂ ಮಾಸಿ ಹೋಗಿದ್ದು, ನೂತನ ಕೊಠಡಿಗಳಲ್ಲಿ ಧೂಳು ತುಂಬಿಕೊಂಡಿದೆ.
ಕಾರವಾರ ನಗರದ ಕರೂರು ಮೈದಾನದಲ್ಲಿ 2016ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಮಿನಿ ವಿಧಾನಸೌಧಕ್ಕೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ್ದರು.
ಕದಂಬೋತ್ಸವದ ಶಾಮಿಯಾನ ಬಿಲ್ ಪಾವತಿಸದ ಉತ್ತರ ಕನ್ನಡ ಜಿಲ್ಲಾಡಳಿತ: ಮಾಲಿಕ ಕಣ್ಣೀರು
5 ಕೋಟಿ ರೂಪಾಯಿ ವೆಚ್ಚದದಲ್ಲಿ ಮಿನಿ ವಿಧಾಸೌಧದ ಕಟ್ಟಡ ನಿರ್ಮಾಣ ಮಾಡಿ ಅದರಲ್ಲಿ ತಹಶೀಲ್ದಾರ್ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ ಹಾಗೂ ಸರ್ವೇ ಕಚೇರಿಗಳಿಗೆ ನೀಲ ನಕ್ಷೆಯಂತೆ ಮಾಡಲಾಗಿತ್ತು. ಗುತ್ತಿಗೆ ಪಡೆದಿದ್ದ ಕರ್ನಾಟಕ ಗೃಹ ಮಂಡಳಿ ಕಟ್ಟಡ ಕಾಮಗಾರಿಯನ್ನು ಅಪೂರ್ಣ ಮಾಡಿದೆ.
ಉದ್ಘಾಟನೆಗೂ ಮೊದಲೇ ಪಾಳು ಬಿದ್ದ ಕಟ್ಟಡ
ಕಟ್ಟಡ ನಿರ್ಮಾಣಗೊಂಡ ಕೆಲವೇ ದಿನಗಳಲ್ಲಿ ಗೋಡೆಗಳು ಬಿರುಕು ಬಿಟ್ಟಿದೆ. ಮಳೆಗಾಲದಲ್ಲಿ ಬಿರುಕು ಬಿಟ್ಟ ಗೋಡೆಗಳ ಮೂಲಕ ನೀರು ಕಟ್ಟಡದ ಒಳಭಾಗಕ್ಕೆ ಸೇರುತ್ತಿದೆ. ಇನ್ನು ಬಿರುಕು ಕಾಣದಂತೆ ಸುಣ್ಣ ಬಣ್ಣ ಬಳಿದು ಕೊಠಡಿಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ ಗೋಡೆಗಳಲ್ಲಿ ನೀರು ಒಳಗೆ ಬರುವುದರಿಂದ ಬಣ್ಣಗಳು ಮಾಸಿದ್ದು, ಕಟ್ಟಡದ ಒಳಭಾಗದಲ್ಲಿ ಗಿಡಗಳು ಬೆಳೆದುಕೊಂಡು ಉದ್ಘಾಟನೆಗೂ ಮೊದಲೇ ಮಿನಿ ವಿಧಾನಸೌಧ ಕಟ್ಟಡ ಪಾಳು ಬಿದ್ದ ಕಟ್ಟಡದಂತಾಗಿದೆ.
ಇನ್ನು ಕಾರವಾರಕ್ಕೆ ಆಗಮಿಸಿದಾಗ ಉಸ್ತುವಾರಿ ಸಚಿವರು ಆಗಾಗ ಇಲ್ಲಿಗೆ ಭೇಟಿ ನೀಡಿ, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿರುತ್ತಾರೆ. ಇಷ್ಟಾದರೂ ಮಿನಿ ವಿಧಾನಸೌದ ಕಟ್ಟಡದ ಸದ್ಬಳಕೆಗೆ ಯಾವುದೇ ಕ್ರಮ ವಹಿಸದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಮಿನಿ ವಿಧಾನಸೌಧ ಅಭಿವೃದ್ಧಿಗೆ ಮತ್ತೆ 5 ಕೋಟಿ ರೂಪಾಯಿ
ಈ ಹಿಂದೆ ಮಂಜೂರು ಆಗಿದ್ದ 5 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನು ಕರ್ನಾಟಕ ಗೃಹ ಮಂಡಳಿಯವರಿಗೆ ನೀಡಲಾಗಿತ್ತು. ಈ ಅನುದಾನದಲ್ಲಿ ನೆಲ ಮಹಡಿ ಹಾಗೂ ಮೊದಲ ಮಹಡಿ ನಿರ್ಮಾಣಕ್ಕೆ ನೀಲನಕ್ಷೆ ಸಿದ್ದಪಡಿಸಲಾಗಿತ್ತಾದರೂ, ಇದೀಗ ನೆಲ ಮಹಡಿ ಮಾತ್ರ ಪೂರ್ಣಗೊಂಡಿದೆ. ಅನುದಾನ ಕೊರತೆಯಿಂದಾಗಿ ಮೊದಲ ಮಹಡಿ ಕಾಮಗಾರಿಯನ್ನು ಗುತ್ತಿಗೆ ಪಡೆದ ಕಂಪನಿ ಹಾಗೆಯೇ ಬಿಟ್ಟಿದೆ ಎನ್ನಲಾಗಿದೆ. ಆದರೆ ಇದೀಗ ಶಾಸಕಿ ರೂಪಾಲಿ ನಾಯ್ಕ್ ಮತ್ತೆ ಕಟ್ಟಡ ಅಭಿವೃದ್ಧಿಗೆ 5 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದು, ಪಿಡಬ್ಲೂಡಿಗೆ ಈ ಗುತ್ತಿಗೆ ನೀಡಲಾಗಿದೆ ಎನ್ನಲಾಗಿದೆ.
ಸ್ಥಳಾಂತರಗೊಳ್ಳದ ತಹಶೀಲ್ದಾರ್ ಕಟ್ಟಡ: ಜನರ ಪರದಾಟ
ಇನ್ನು ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ ಆರಂಭವಾಗಬೇಕಿತ್ತು. ಆದರೆ ನೀಲ ನಕ್ಷೆಯಂತೆ ಮೇಲಿನ ಮಹಡಿ ಪೂರ್ಣಗೊಂಡಿಲ್ಲದ ಕಾರಣ ತಹಶೀಲ್ದಾರ್ ಕಚೇರಿ ಹಳೆಯ ಕಟ್ಟದಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ಹಳೆಯ ಕಟ್ಟಡವಾಗಿರುವ ತಹಶೀಲ್ದಾರ್ ಕಚೇರಿಗೆ ಸಾರ್ವಜನಿಕರು ಸಮಸ್ಯೆ ಹೊತ್ತು ತೆರಳಿದರೆ, ನಿಲ್ಲುವುದ್ದಕ್ಕೂ ಜಾಗವಿಲ್ಲದಂತಿದೆ. ಕಿರಿದಾಗಿರುವ ಮತ್ತು ಹಳೆಯದಾಗಿರುವ ತಹಶೀಲ್ದಾರ್ ಕಟ್ಟಡವನ್ನು ಮಿನಿ ವಿಧಾನಸೌಧದ ಮೊದಲ ಮಹಡಿಗೆ ಯಾವಾಗ ಸ್ಥಳಾಂತರಗೊಳ್ಳುತ್ತದೆ ಎಂದು ಸಾರ್ವಜನಿಕರು ಕಾಯುತ್ತಿದ್ದಾರೆ.
ಆರು ವರ್ಷವಾದರೂ ಉದ್ಘಾಟನೆ ಭಾಗ್ಯ ಕಾಣದ ಮಿನಿ ವಿಧಾನಸೌಧ
ಇನ್ನು ಈ ಬಗ್ಗೆ ಕಾರವಾರ ತಹಶೀಲ್ದಾರ್ ಎನ್ಎಸ್ ನರೋನಾ ಮಾತನಾಡಿದ್ದು "ಮಿನಿ ವಿಧಾನ ಸೌಧದ ಕಟ್ಟಡ ಕಾಮಗಾರಿ ಇನ್ನೂ ಪೂರ್ಣ ಗೊಂಡಿಲ್ಲ. ಅನುದಾನದ ಕೊರತೆಯಿಂದ ಗುತ್ತಿಗೆ ಪಡೆದ ಕಂಪನಿ ಅರ್ಧಕ್ಕೆ ಬಿಟ್ಟಿದ್ದು. ಇದೀಗ ಶಾಸಕಿ ರೂಪಾಲಿ ನಾಯ್ಕ ಅವರು ಮತ್ತೆ 5 ರೂಪಾಯಿ ಕೋಟಿ ಮಂಜೂರು ಮಾಡಿಸಿದ್ದಾರೆ. ಈ ಕಾಮಾಗಾರಿಯನ್ನು ಪಿಡಬ್ಲೂಡಿ ಇಲಾಖೆಗೆ ನೀಡಿದ್ದು ಸದ್ಯದಲ್ಲೇ ಕಾಮಗಾರಿ ಪ್ರಾರಂಭ ಮಾಡುತ್ತೇವೆ" ಎಂದು ತಿಳಿಸಿದ್ದಾರೆ. ಒಟ್ಟಾರೆ ಸುಮಾರು ಆರು ವರ್ಷಗಳ ಹಿಂದೆ ಶಿಲನ್ಯಾಸಗೊಂಡ ಮಿನಿ ವಿಧಾನಸೌಧ ಕಟ್ಟಡ ಉದ್ಘಾಟನೆಗೂ ಮುನ್ನ ಪಾಳು ಬಿದ್ದ ಕಟ್ಟಡವಾಗಿದೆ.