ಗರ್ಭಿಣಿ ಮಾಡಿ ಕೈಕೊಟ್ಟ ಯುವಕ, ಮನನೊಂದು ಪ್ರಾಣ ಬಿಟ್ಟ ಯುವತಿ
ಕಾರವಾರ, ಡಿಸೆಂಬರ್ 01: ಪ್ರಿಯತಮ ಮದುವೆಯಾಗಲು ನಿರಾಕರಿಸಿದ್ದರಿಂದ ಮನನೊಂದ ಪ್ರಿಯತಮೆಯೊಬ್ಬಳು ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಇಂದೂರ ಗ್ರಾಮದದಲ್ಲಿ ಬುಧವಾರ ನಡೆದಿದೆ.
ಯಲ್ಲಾಪುರ ತಾಲ್ಲೂಕಿನ ಕಿರವತ್ತಿ ಗ್ರಾಮದ ನಾಜೀಮಾ ಶೇಖ್ (22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೃತ ನಜೀಮಾ ಹಾಗೂ ಹಳಿಯಾಳ ತಾಲೂಕಿನ ಕಾಲವಾಡ ಗ್ರಾಮದ ದಾದಾಪೀರ ಪಟೇಲ ಪರಸ್ಪರ ಪ್ರೀತಿಸುತ್ತಿದ್ದರು. ಬಳಿಕ ಮದುವೆಯಾಗುವುದಾಗಿ ನಂಬಿಸಿ ನಜೀಮಾ ಜತೆ ದಾದಾಪೀರ ದೈಹಿಕ ಸಂಪರ್ಕ ಕೂಡ ಬೆಳೆಸಿದ್ದ. ಇದರಿಂದ ನಾಜಿಮಾ ಗರ್ಭಿಣಿಯಾಗಿದ್ದಳು.
ಗರ್ಭಿಣಿಯಾಗಿರುವ ವಿಷಯವನ್ನು ದಾದಾಪೀರನಿಗೆ ತಿಳಿಸಿ, ಮುದವೆಯಾಗು ಎಂದು ನಾಜೀಮಾ ಒತ್ತಾಯಿಸಿದ್ದಾಳೆ. ಆದರೆ ದಾದಾಪೀರ ತಾನು ಮದುವೆಯಾಗಲು ನಿರಾಕರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಮನನೊಂದ ನಾಜೀಮಾ ತಮ್ಮ ಅಜ್ಜಿ ಗ್ರಾಮವಾದ ಇಂದೂರಿಗೆ ಹೋಗಿ ಅಲ್ಲಿರುವ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆಯ ಬಳಿಕ ಯುವತಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿದಾಗ ನಾಜೀಮಾ ಗರ್ಭವತಿ ಎಂದು ತಿಳಿದು ಬಂದಿದೆ.