ಸಿದ್ದರಾಮಯ್ಯ ಕುರಿತು ಅತೃಪ್ತ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದೇನು?
Recommended Video
ಯಲ್ಲಾಪುರ, ಜುಲೈ 25: "ನಾವು ರಾಜೀನಾಮೆ ನೀಡಿರುವುದು ಶಾಸಕ ಸ್ಥಾನಕ್ಕೆ ಮಾತ್ರ. ನಾವಿನ್ನೂ ಕಾಂಗ್ರೆಸ್ನಲ್ಲಿಯೇ ಇದ್ದೇವೆ. ಕಾಂಗ್ರೆಸ್ನಲ್ಲಿರುವವರೇ ನಮ್ಮ ನಾಯಕರು" ಎಂದು ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು.
ರಾಜೀನಾಮೆ ನೀಡಿ ಮುಂಬೈನಲ್ಲಿದ್ದ ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್, ಬುಧವಾರ ಸಂಜೆ ಸ್ವಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
"ಇದೇ ತಿಂಗಳು ಆರನೇ ತಾರೀಖು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಮೇಲೆ ಇದುವರೆಗೆ ನಡೆದಿರುವ ರಾಜಕೀಯ ಬೆಳವಣಿಗೆಗಳಿಂದ ನನ್ನ ಕ್ಷೇತ್ರದ ಮತದಾರರಿಗೆ ಮಾನಸಿಕವಾಗಿ ನೋವಾಗಿದೆ. ಇದಕ್ಕಾಗಿ ಕ್ಷಮೆ ಕೋರುತ್ತೇನೆ.
ಈ ಘಟನಾವಳಿಗಳು ನನ್ನನ್ನೂ ಸೇರಿದಂತೆ ಯಾರಿಗೂ ಸಮಾಧಾನ ತಂದಿರುವ, ಸಂತೋಷ ಕೊಟ್ಟಿರುವ ಸಂಗತಿಯಲ್ಲ. ಅನಿವಾರ್ಯವಾಗಿ, ರಾಜ್ಯದ ಹಿತಾಸಕ್ತಿಗಾಗಿ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಸುಮಾರು 120 ಶಾಸಕರಲ್ಲಿ 20 ಶಾಸಕರು ಈ ನಿರ್ಣಯ ತೆಗೆದುಕೊಂಡಿದ್ದಾರೆ. ಅವರಲ್ಲಿ ನಾಲ್ಕೈದು ಬಾರಿ, ಏಳು ಸಲ ಶಾಸಕರಾದವರು ಕೂಡ ಇದ್ದಾರೆ ಎನ್ನುವುದನ್ನು ಗಮನಿಸಬೇಕು. ಅಷ್ಟು ಜನ ಹೊರಹೋಗುತ್ತಾರೆ ಎಂದರೆ ನಾಯಕತ್ವ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ" ಎಂದರು.
"ಶಾಸಕ ಸ್ಥಾನಕ್ಕೆ ಮಾತ್ರ ರಾಜೀನಾಮೆ ನೀಡಿದ್ದೇವೆ. ರಾಜೀನಾಮೆ ಅಂಗೀಕಾರದ ನಂತರ ಮುಖಂಡರ ಜತೆ ಚರ್ಚಿಸಿ ಮುಂದಿನ ನಿರ್ಣಯ ತೆಗೆದುಕೊಳ್ಳುತ್ತೇವೆ. ಬಿಜೆಪಿ ಸರ್ಕಾರ ರಚನೆಗೂ ನಮಗೂ ಸಂಬಂಧವಿಲ್ಲ" ಎಂದು ತಿಳಿಸಿದರು.

ನಾವು ಅತೃಪ್ತರಲ್ಲ, ಅಸಹಾಯಕರು
"ನಾವು ಅತೃಪ್ತ ಶಾಸಕರಲ್ಲ. ಅಸಹಾಯಕರು. ಅತೃಪ್ತಿ ಬೇರೆ ಅಸಹಾಯಕತೆ ಬೇರೆ. ನಮ್ಮ ಸಹಾಯಕ್ಕೆ ಯಾರೂ ಬರದೆ ಹೋಗುವ ಸಂದರ್ಭದಲ್ಲಿ ಈ ನಿರ್ಧಾರಕ್ಕೆ ಬಂದಿದ್ದೇವೆ. ನಾನಿಲ್ಲಿ ಕದ್ದುಮುಚ್ಚಿ ಬಂದಿಲ್ಲ. ಮಾತಾಡಿಕೊಂಡೇ ಬಂದಿದ್ದೇವೆ. ನಾನು ಈ ಮೊದಲೇ ಸ್ಪಷ್ಟಪಡಿಸಿದ್ದೇನೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ರಾಜೀನಾಮೆ ನೀಡುವ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಣಯಕ್ಕೆ ಇಂದಿಗೂ ಬದ್ಧರಾಗಿದ್ದೇವೆ" ಎಂದರು.
ನಮಗೆ ಅನರ್ಹತೆ ಭಯ ಇಲ್ಲ. ನಮ್ಮ ರಾಜೀನಾಮೆ ಅಂಗೀಕಾರ ಆಗುವ ವಿಶ್ವಾಸವಿದೆ. ಡಾ. ಉಮೇಶ್ ಜಾಧವ್ ಅವರ ರಾಜೀನಾಮೆ ಅಂಗೀಕಾರವಾಗಿತ್ತು. ಅತೃಪ್ತ ಶಾಸಕರಲ್ಲಿ ಒಗ್ಗಟ್ಟಿಗೆ. 3-4 ದಿನದಲ್ಲಿ ಸಮಸ್ಯೆ ಬಗೆಹರಿಸಲಿದೆ. ಸುಪ್ರೀಂಕೋರ್ಟ್ ಮೇಲೆ ನಂಬಿಕೆ ಇದೆ. ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ" ಎಂದು ಹೇಳಿದರು.

ಸಿದ್ದರಾಮಯ್ಯಗೆ ದೇವರು ಒಳ್ಳೆಯದು ಮಾಡಲಿ
"ನಮಗೆ ಸಮ್ಮಿಶ್ರ ಸರ್ಕಾರದ ಮೇಲೆ ಮಾತ್ರ ಅಸಮಾಧಾನವಿತ್ತು. ಪಕ್ಷದ ಮೇಲಲ್ಲ. ಸಿದ್ದರಾಮಯ್ಯ ಅವರು ನಮ್ಮ ನಾಯಕರಾಗಿದ್ದರು. ಆದರೆ, ಈಗ ಅವರು ನಮ್ಮ ನಾಯಕರಲ್ಲ ಎಂದು ಅವರೇ ಹೇಳಿದ್ದಾರೆ. ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಅವರ ಪ್ರಶ್ನೆಗೆ ನಾನು ಇಂದು ಉತ್ತರ ಕೊಡುವುದಿಲ್ಲ. ನಾನು ಬಿಜೆಪಿಗೆ ಹೋಗಲೇ ಇಲ್ಲ. ಕಾಂಗ್ರೆಸ್ಗೆ ರಾಜೀನಾಮೆ ನೀಡಿಲ್ಲ. ಬೇರೆಯವರು ನಮಗೆ ನಾಯಕರಾಗಲು ಹೇಗೆ ಸಾಧ್ಯ? ಸಿದ್ದರಾಮಯ್ಯ ಅವರು ವಿಧಾನಸಭೆ ಒಳಗೆ ಮತ್ತು ಹೊರಗೆ ಆಡಿರುವ ಮಾತುಗಳನ್ನು ಗಮನಿಸಿದ್ದೇವೆ. ಸಿದ್ದರಾಮಯ್ಯ ಅವರು ಹಿರಿಯರು, ದೊಡ್ಡವರು. ದೇವರು ಒಳ್ಳೆಯದನ್ನು ಮಾಡಲಿ ಎಂದಷ್ಟೇ ಹೇಳಲು ಬಯಸುತ್ತೇನೆ" ಎಂದರು.

ಅಧಿಕಾರಿಗಳು ಕೊಟ್ಟಿದ್ದನ್ನು ಎಚ್ಡಿಕೆ ಓದಿದ್ದಾರೆ
"ಯಲ್ಲಾಪುರಕ್ಕೆ 418 ಕೋಟಿ ರೂಪಾಯಿ ಅನುದಾನ ನೀಡಿರುವುದಾಗಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಆದರೆ, ಅದು ಸತ್ಯವಲ್ಲ. ಅವರಿಗೆ ಸರಿಯಾದ ಮಾಹಿತಿ ಇಲ್ಲ. ಅಧಿಕಾರಿಗಳು ಬರೆದುಕೊಟ್ಟಿರುವುದನ್ನು ಹೇಳಿದ್ದಾರಷ್ಟೇ. ಹಳೆಯ ಯೋಜನೆಗಳ ಮೊತ್ತವೂ ಇದರಲ್ಲಿ ಸೇರಿದೆ" ಎಂದು ತಿಳಿಸಿದರು.

ಆಲೋಚನೆ ಮಾಡಿಯೇ ಯುದ್ಧಕ್ಕೆ ಹೋಗೋದು
"ಒಮ್ಮೆ ಯುದ್ಧಕ್ಕೆ ಹೋಗುವಾಗ ಆಲೋಚನೆ ಮಾಡಿಯೇ ಹೋಗಬೇಕು. ಯುದ್ಧಕ್ಕೆ ಹೋದ ಮೇಲೆ ಸೈನ್ಯದಲ್ಲಿ ಹೋರಾಟ ಮಾಡಬೇಕು. ಅನರ್ಹತೆ ಆಗುತ್ತೋ, ರಾಜೀನಾಮೆ ಅಂಗೀಕಾರ ಆಗುತ್ತೋ ತಲೆ ಕೆಡೆಸಿಕೊಳ್ಳೊಲ್ಲ. ಎದುರಿಸಬೇಕು, ಎದುರಿಸುತ್ತೇವೆ" ಎಂದು ತಮ್ಮ ರಾಜೀನಾಮೆ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಉಂಟಾಗಿದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದರು.












Click it and Unblock the Notifications