ಜೊಯಿಡಾ ತಾಲ್ಲೂಕಿನ ಅಣಶಿ ಘಟ್ಟದಲ್ಲಿ ಕುಸಿತ: ಸಂಚಾರ ಬಂದ್
ಕಾರವಾರ, ಜು13: ಕಳೆದ ಒಂದು ವಾರದಿಂದ ಎಡಬಿಡದೆ ಸುರಿದ ಭಾರಿ ಮಳೆಗೆ ಕಾರವಾರದಿಂದ-ಬೆಳಗಾವಿ ಸಂಪರ್ಕಿಸುವ ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿ 34ರಲ್ಲಿ ಜೊಯಿಡಾ ತಾಲ್ಲೂಕಿನ ಅಣಶಿ ಘಟ್ಟದಲ್ಲಿ ಕುಸಿತವಾಗಿದೆ.
ಕಳೆದ ಒಂದು ವಾರದಲ್ಲಿ ಮೂರು ಸಲ ಕುಸಿತವಾಗಿದ್ದು ಇನ್ನು ಕೆಲವೆಡೆ ಮಣ್ಣು ಕಲ್ಲುಗಳು ಹೆದ್ದಾರಿಗೆ ಜಾರಿ ಬೀಳುತ್ತಲೇ ಇದೆ. ಅಲ್ಲದೆ ಮಳೆ ಆರ್ಭಟ ಕೂಡ ಮುಂದುವರಿದ ಕಾರಣ ಇಷ್ಟು ದಿನ ರಾತ್ರಿ ಸಂಚಾರ ಮಾತ್ರ ಬಂದ್ ಮಾಡಿದ್ದ ಜಿಲ್ಲಾಡಳಿತ ಇದೀಗ ಹಗಲು ರಾತ್ರಿ ಸಂಪೂರ್ಣ ಈ ಭಾಗದಲ್ಲಿ ಎಲ್ಲ ರೀತಿಯ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಕೆಲ ದಿನಗಳ ಹಿಂದೆ ಅಬ್ಬರಿಸಿದ್ದ ಮಳೆ ಸದ್ಯ ಸ್ವಲ್ಪ ತಣ್ಣಗಾಗಿದೆ. ಆದರೆ ಮಳೆಯ ಆರ್ಭಟಕ್ಕೆ ಕಾರವಾರ ಬೆಳಗಾವಿ ರಾಜ್ಯ ಹೆದ್ದಾರಿ ಮೇಲೆ ಪದೆ ಪದೇ ಕುಸಿಯುತ್ತಿರುವ ಗುಡ್ಡ ಇದೀಗ ಜನಸಾಮಾನ್ಯರ ಬದುಕಿಗೆ ಕಂಟಕವಾಗಿದೆ.
ಇದೇ ಕಾರಣಕ್ಕೆ ಹೆದ್ದಾರಿಯಲ್ಲಿ ಸಂಚಾರವನ್ನು ಸಂಪೂರ್ಣ ನಿಷೇಧಿಸಿದ್ದು ಈ ಭಾಗದಲ್ಲಿ ನಿತ್ಯ ಉದ್ಯೋಗ, ಕಚೇರಿ, ಪೇಟೆ ಹೀಗೆ ಹತ್ತಾರು ಕಾರಣದಿಂದಾಗಿ ಜಿಲ್ಲಾಕೇಂದ್ರವನ್ನು ಸಂಪರ್ಕಿಸುತ್ತಿದ್ದವರು ಇದೀಗ ನಿತ್ಯ ನೂರಾರು ಕಿ.ಮೀ ಸುತ್ತಿ ಬಳಸಿ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಸಂಪರ್ಕ ಕಡಿತ: ಸಂಚಾರಕ್ಕೆ ಪರದಾಟ
ರಸ್ತೆ ಸಂಚಾರ ಸ್ಥಗಿತದಿಂದ ಜಿಲ್ಲೆಯ ಉಪ ವಿಭಾಗ ಹಾಗೂ ಜಿಲ್ಲಾಕೇಂದ್ರವಾದ ಕಾರವಾರವನ್ನು ನಿತ್ಯ ಒಂದಲ್ಲ ಒಂದು ಕಾರಣದಿಂದ ಸಂಪರ್ಕಿಸುತ್ತಿದ್ದ ಹಳಿಯಾಳ, ಜೋಯಿಡಾ, ದಾಂಡೇಲಿ ಮೂರು ತಾಲ್ಲೂಕಿನ ನೂರಾರು ಹಳ್ಳಿಯ ಜನರಿಗೆ ಇದೀಗ ಸಂಪರ್ಕವೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದ ಜನರು ಅನಿವಾರ್ಯವಾಗಿ ಯಲ್ಲಾಪುರ-ಅಂಕೋಲಾ ಮೂಲಕ 180 ಕಿ.ಮೀ ಸುತ್ತಿ ಕಾರವಾರ ಸಂಪರ್ಕಿಸಬೇಕಾಗಿದೆ.

ಸಂಚಾರಕ್ಕೆ ಪರದಾಟ
ಇನ್ನು ಪ್ರತಿಯೊಂದಕ್ಕೂ ಕಾರವಾರವನ್ನು ಅವಲಂಭಿಸಿರುವ ಜೊಯಿಡಾ ಭಾಗದ ಜನರು ಇನ್ನಷ್ಟು ಸಂಕಷ್ಟ ಅನುಭವಿಸಬೇಕಾಗಿದೆ. ಜೊಯಿಡಾದಲ್ಲಿ ಮನೆ ಮಾಡಿಕೊಂಡು ಅದೆಷ್ಟೊ ಮಂದಿ ಕದ್ರಾದ ಕೆಪಿಸಿಯಲ್ಲಿ ಉದ್ಯೋಗ ಮಾಡುತ್ತಿದ್ದು, ಇನ್ನು ಕೆಲವರು ಖಾಸಗಿ ಕಂಪನಿಗಳಿಗೆ, ಶಾಲೆಗಳಿಗೆ, ಮಾರುಕಟ್ಟೆಗಾಗಿ ಬಸ್ ಇಲ್ಲವೇ ಖಾಸಗಿ ವಾಹನಗಳ ಮೂಲಕ ಓಡಾಟ ನಡೆಸುತ್ತಿದ್ದವರು. ಆದರೆ ಇದೀಗ ಸಂಪರ್ಕ ಕಡಿತಗೊಂಡಿರುವುದು ಸಂಚಾರಕ್ಕೆ ಪರದಾಡಬೇಕಾಗಿದೆ.

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ
ಇನ್ನು ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲ್ಭಾಗದ ಭಾಗಗಳಿಗೆ 5 ಹೆದ್ದಾರಿಗಳು ಹಾದುಹೋಗಿವೆ. ಆದರೆ ಈ ಭಾರಿ ಮಳೆಯಿಂದಾಗಿ ಮತ್ತು ಹೆದ್ದಾರಿ ಅಭಿವೃದ್ಧಿ ಕಾಮಗಾರಿಗಳಿಂದಾಗಿ ಇದೀಗ ಕೆಲ ರಸ್ತೆಗಳಲ್ಲಿ ಗುಡ್ಡ ಕುಸಿತವಾಗುತಿದ್ದು ಆತಂಕಕ್ಕೆ ಕಾರಣವಾಗಿದೆ. ಕರಾವಳಿಯ ಗೋವಾ, ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66ರಲ್ಲೂ ಹೆದ್ದಾರಿ ಅಗಲೀಕರಣ ಹಿನ್ನೆಲೆ ತೆರವುಗೊಳಿಸಲಾಗಿದ್ದ ಗುಡ್ಡಗಳಿಂದ ಬೃಹತ್ ಗಾತ್ರದ ಕಲ್ಲುಗಳು ರಸ್ತೆ ಮೇಲೆ ಬಿದ್ದಿವೆ. ರಾಷ್ಟ್ರೀಯ ಹೆದ್ದಾರಿ 63ರ ಅರಬೈಲ್ ಘಟ್ಟ, ರಾಷ್ಟ್ರೀಯ ಹೆದ್ದಾರಿ 766EEಯ ದೇವಿಮನೆ ಘಟ್ಟ ಹಾಗೂ ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206ರ ಗೇರುಸೊಪ್ಪ ಮಾರ್ಗಗಳು ಮಾತ್ರ ಸ್ವಲ್ಪ ಓಡಾಟಕ್ಕೆ ಅನುಕೂಲಕರವಾಗಿವೆ.

ಹೆದ್ದಾರಿಗಳಲ್ಲಿ ಸಂಚಾರ ಬಂದ್
ಇನ್ನು ಕಳೆದ ಬಾರಿ ಸುರಿದ ಮಳೆಗೆ ಅಣಶಿ ಹಾಗೂ ಅರಬೈಲ್ ಘಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿ ಹೆದ್ದಾರಿ ಸಂಪರ್ಕವೇ ಕಡಿತಗೊಂಡಿತ್ತು. ಇದಾದ ಬಳಿಕ ಅಧ್ಯಯನ ನಡೆಸಿದ್ದ ತಜ್ಞರ ತಂಡ ಈ ಬಾರಿಯೂ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸುವ ಎಚ್ಚರಿಕೆಯನ್ನು ನೀಡಿತ್ತು. ಇದೀಗ ಅಣಶಿ ಘಟ್ಟದಲ್ಲಿ ಪದೆ ಪದೆ ಭೂ ಕುಸಿತವಾಗುತ್ತಿದ್ದು ಈ ಹೆದ್ದಾರಿಗಳಲ್ಲಿ ಸಂಚಾರವನ್ನು ಜಿಲ್ಲಾಡಳಿತ ಬಂದ್ ಮಾಡಿ ಆದೇಶ ನೀಡಿದೆ.












Click it and Unblock the Notifications