ಕಾರವಾರದಲ್ಲಿ ನಿರ್ಮಾಣವಾಗಲಿದೆ ಇಂಟರ್ ನ್ಯಾಷನಲ್ ಸ್ಟೇಡಿಯಮ್!
ಕಾರವಾರ, ಡಿಸೆಂಬರ್ 06: ತಾಲೂಕಿನ ಚಿತ್ತಾಕುಲಾ ಗ್ರಾಮದ ಸಾವರಪೈ ಪ್ರದೇಶದ 11 ಎಕರೆ ಸರ್ಕಾರಿ ಜಾಗದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ನಿರ್ಮಿಸಲಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ ಗೆ ರಾಜ್ಯ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ಮಂಜೂರಾತಿ ನೀಡಿದೆ.
ಸುಮಾರು ಒಂದು ವರ್ಷದ ಹಿಂದೆ ಕಾರವಾರಕ್ಕೆ ಒಂದು ಸುಸಜ್ಜಿತ ಅಂತರಾಷ್ಟ್ರೀಯ ಕ್ರಿಕೇಟ್ ಕ್ರೀಡಾಂಗಣದ ಅವಶ್ಯಕತೆಯನ್ನು ಅರಿತ ಅಂದಿನ ಶಾಸಕ ಸತೀಶ ಸೈಲ್, ರಾಜ್ಯ ಕ್ರಿಕೆಟ್ ಸಂಸ್ಥೆಯೊಡನೆ ಸಮಾಲೋಚಿಸಿ ಅವರ ಮನವೊಲಿಸಿದ್ದರು.
:'ಯುವಾ' ವಿದ್ಯಾರ್ಥಿಗಳ ರಾಯಭಾರಿಯಾದ ಕ್ರಿಕೆಟರ್ ಪೃಥ್ವಿ
ಈ ಬಗ್ಗೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರೊಂದಿಗೆ ಸಮಾಲೋಚಿಸಿ, ಚಿತ್ತಾಕುಲಾ ಗ್ರಾಮದ ಸಾವರಪೈ ಪ್ರದೇಶದಲ್ಲಿ ಲಭ್ಯವಿದ್ದ ಸರಕಾರಿ ಜಾಗದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ ನಿರ್ಮಿಸಲು ಜಿಲ್ಲಾಡಳಿತವು ಒಪ್ಪಿಗೆ ನೀಡುವಂತೆ ಶ್ರಮವಹಿಸಿದ್ದರು.
ತದನಂತರ ರಾಜ್ಯ ಕ್ರಿಕೆಟ್ ಅಕೆಡೆಮಿ ಸಂಸ್ಥೆ ವತಿಯಿಂದ ಉನ್ನತ ಅಧಿಕಾರಿಗಳು ಕಾರವಾರದ ಚಿತ್ತಾಕುಲಾ ಗ್ರಾಮದ ಸಾವರಪೈ ಪ್ರದೇಶದ ಸರಕಾರಿ ಜಾಗವನ್ನು ಪರೀಕ್ಷಿಸಿ, ತಮಗೆ ಅವಶ್ಯಕತೆ ಇರುವ 11 ಎಕರೆ ಜಾಗವನ್ನು ಗುರುತಿಸಿ ಜಿಲ್ಲಾಡಳಿತಕ್ಕೆ ತಿಳಿಸಿದ್ದರು. ಆ ಪ್ರಕಾರ ಮುಂದಿನ ಕಾರ್ಯಸೂಚಿಯಂತೆ ರಾಜ್ಯ ಕಂದಾಯ ಇಲಾಖೆಯಿಂದ ಸಾವರಪೈ ಪ್ರದೇಶದ 11 ಎಕರೆ ಜಾಗವನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗೆ ವಾರ್ಷಿಕ ಬಾಡಿಗೆಯ ಮೇಲೆ ಬೋಗ್ಯಕ್ಕೆ ನೀಡಿದ್ದರು.
ಭಯೋತ್ಪಾದನೆ ಬರಹ: ಆಸ್ಟ್ರೇಲಿಯಾ ಕ್ರಿಕೆಟಿಗ ಖವಾಜಾ ಸಹೋದರ ಬಂಧನ
ಮುಂದುವರಿದು, ಜಿಲ್ಲಾಡಳಿತ ಸದ್ರಿ 11 ಎಕರೆ ಜಾಗವನ್ನು ಕೆ.ಎಸ್.ಸಿ.ಎ. ಗೆ ಬೋಗ್ಯಕ್ಕೆ ನೀಡುವ ಬಗ್ಗೆ ಸೂಕ್ತ ಕರಾರು ಪತ್ರವನ್ನು ತಯಾರಿಸಿ ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದರು.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾಧ್ಯತೆ- ಬಾಧ್ಯತೆಗಳನ್ನು ಗಣನೆಗೆ ತೆಗೆದುಕೊಂಡು, ಜಿಲ್ಲಾಡಳಿತ ಕಳುಹಿಸಿರುವ ಪ್ರಸ್ತಾವನೆಗೆ ಅಂತಿಮ ಅನುಮೋದನೆಯನ್ನು ನೀಡಿದರು. ಆ ಮೂಲಕ ಕಾರವಾರದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್ ನಿರ್ಮಿಸಲು ಹಸಿರು ನಿಶಾನೆ ದೊರಕಿರುವುದು ಕ್ಷೇತ್ರದ ಯುವಜನರ ಕನಸಿಗೆ ಇಂಬು ನೀಡಿದಂತಾಗಿದೆ.