ಐಎನ್ಎಸ್ ವಿಕ್ರಮಾದಿತ್ಯ ವೀಕ್ಷಣೆಗೆ ಹರಿದು ಬಂದ ಜನಸಾಗರ
ಕಾರವಾರ, ಡಿಸೆಂಬರ್ 22: ಕದಂಬ ನೌಕಾನೆಲೆಯಲ್ಲಿ ಸಾರ್ವಜನಿಕರಿಗೆ ದೇಶದ ಅತಿದೊಡ್ಡ ವಿಮಾನ ವಾಹಕ ನೌಕೆ 'ಐಎನ್ಎಸ್ ವಿಕ್ರಮಾದಿತ್ಯ' ವೀಕ್ಷಣೆಗೆ ಭಾನುವಾರ ಮುಕ್ತ ಅವಕಾಶ ನೀಡಲಾಯಿತು. ಹೀಗಾಗಿ ವಿವಿಧೆಡೆಯಿಂದ ಬಂದ ಸಾವಿರಾರು ಜನರು ನೌಕೆಯನ್ನು ಕಣ್ತುಂಬಿಕೊಂಡರು.
ನೌಕಾ ದಿನದ ಅಂಗವಾಗಿ ಆಚರಿಸಲಾಗುತ್ತಿರುವ ನೌಕಾ ಸಪ್ತಾಹದ ನಿಮಿತ್ತ ನೌಕಾನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಈ ವೇಳೆ ವಿಕ್ರಮಾದಿತ್ಯ ವೀಕ್ಷಣೆಗೆ ಲಭ್ಯವಿತ್ತು.
ಏಷ್ಯಾದ ಅತಿ ದೊಡ್ಡ ವಿಮಾನ ವಾಹಕ ಯುದ್ಧ ನೌಕೆ ವಿಕ್ರಮಾದಿತ್ಯ ವೀಕ್ಷಣೆಗೆ ಮುಕ್ತ ಅವಕಾಶ
ವೀಕ್ಷಣೆಗೆ ಬಂದವರಿಗೆ ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ನೌಕಾಸೇನೆ ವಹಿಸುತ್ತಿರುವ ಮಹತ್ವದ ಪಾತ್ರಗಳ ಬಗ್ಗೆ ಹಾಗೂ ಸೇನೆಯು ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಯಾವೆಲ್ಲ ಯುದ್ಧೋಪಕರಣಗಳನ್ನು ಬಳಸುತ್ತಿದೆ ಎನ್ನುವುದರ ಬಗ್ಗೆ ಮಾಹಿತಿ ನೀಡಲಾಯಿತು. ರಾಕೆಟ್ ಲಾಂಚರ್, ಬೃಹತ್ ಗನ್, ಮಲ್ಟಿ ಪಾಯಿಂಟರ್ ಗನ್, ನೀರಿನಾಳದಲ್ಲಿ ನುಗ್ಗಿ ಶತ್ರುಗಳ ಹಡಗನ್ನು ಯಾವ ರೀತಿ ನಾಶ ಮಾಡಲಾಗುತ್ತದೆ ಎಂಬುದರ ಬಗ್ಗೆ ಸೇನಾ ಅಧಿಕಾರಿಗಳು ಮಾಹಿತಿ ನೀಡಿದರು.
ವಿವಿಧ ಯುದ್ಧ ನೌಕೆಗಳ ಬಗ್ಗೆ ಮಾಹಿತಿ
ನೌಕಾನೆಲೆ ಒಳಭಾಗದಲ್ಲಿ ಸಾರ್ವಜನಿಕರಿಗೆ ಮೊಬೈಲ್, ಕ್ಯಾಮೆರಾ ನಿಷೇಧಿಸಲಾಗಿತ್ತು. ವಿವಿಧ ಯುದ್ಧ ನೌಕೆಗಳ ಬಗ್ಗೆ ಮಾಹಿತಿ ನೀಡಲು ಮಾರ್ಗದರ್ಶಿಗಳನ್ನು ನೇಮಿಸಲಾಗಿತ್ತು.
ಐಎನ್ಎಸ್ ವಿಕ್ರಮಾದಿತ್ಯ ನೌಕೆಯು 44,500 ಟನ್ ತೂಕ ಇದ್ದು, 284 ಮೀಟರ್ ಉದ್ದ, 60 ಮೀಟರ್ ಎತ್ತರ ಇದೆ. 34 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್ಗಳನ್ನು ಹೊರುವ ಸಾಮರ್ಥ್ಯವನ್ನು ಇದು ಹೊಂದಿದೆ.
1,600 ಸಿಬ್ಬಂದಿ ಇದರಲ್ಲಿ ಕಾರ್ಯನಿರ್ವಹಣೆ
1,600 ಸಿಬ್ಬಂದಿ ಇದರಲ್ಲಿ ಕಾರ್ಯನಿರ್ವಹಿಸುತ್ತಾರೆ. ಒಮ್ಮೆ ಇಂಧನ ಭರ್ತಿಯಾದರೆ 13,000 ಕಿ.ಮೀ. ದೂರವನ್ನು ಇದು ಕ್ರಮಿಸುತ್ತದೆ. 2013ರ ನವೆಂಬರ್ನಲ್ಲಿ ಭಾರತೀಯ ನೌಕಾಪಡೆ ಸೇವೆಗೆ ಇದು ಪಾದಾರ್ಪಣೆ ಮಾಡಿತು.
ಸಾರ್ವಜನಿಕರು ಸಿಬ್ಬಂದಿ -ಮಾತಿನ ಚಕಮಕಿ
ವಿಕ್ರಮಾದಿತ್ಯದ ವೀಕ್ಷಣೆಗಾಗಿ ಬೆಳಿಗ್ಗೆ 7 ಗಂಟೆಯಿಂದಲೇ ನೌಕಾನೆಲೆಯ ಮುಖ್ಯ ದ್ವಾರದ ಬಳಿ ಸಾರ್ವಜನಿಕರು ಸಾಲುಗಟ್ಟಿದ್ದರು. 9 ಗಂಟೆಯ ಸುಮಾರಿಗೆ ನೌಕಾ ಅಧಿಕಾರಿಗಳು ಪ್ರವೇಶ ಚೀಟಿ ವಿತರಿಸಲು ಪ್ರಾರಂಭಿಸಿದ್ದರು. ಸುಮಾರು ಐದು ಸಾವಿರ ಜನರು ಈ ವೇಳೆ ವೀಕ್ಷಣೆಗೆ ಬರಲಿದ್ದಾರೆ ಎಂದು ಅಂದಾಜಿಸಿದ್ದ ನೌಕಾ ಅಧಿಕಾರಿಗಳ ನಿರೀಕ್ಷೆಗೂ ಮೀರಿ ಜನರು ಬಂದಿದ್ದರು. ಇದರಿಂದಾಗಿ ಮಧ್ಯಾಹ್ನ 1 ಗಂಟೆಯ ಬಳಿಕ ಪ್ರವೇಶ ಚೀಟಿ ವಿತರಣೆ ಸ್ಥಗಿತಗೊಳಿಸಲಾಯಿತು. ಜನಸಂದಣಿಯನ್ನು ನಿಯಂತ್ರಿಸಲು ಸಾಧ್ಯವಾಗದ ಕಾರಣ ಪ್ರವೇಶಾವಕಾಶವನ್ನು ಮಧ್ಯಾಹ್ನವೇ ನಿರ್ಬಂಧಿಸಲಾಯಿತು.
ಹಲವರು ನಿರಾಸೆಯಿಂದಾಗಿ ವಾಪಸ್ಸಾದವರು
ಇದರಿಂದಾಗಿ ವೀಕ್ಷಣೆಗೆ ಬಂದಿದ್ದವರು ನಿರಾಸೆಗೊಂಡು ಕೆಲವರು ವಾಪಸ್ಸಾದರೆ, ಇನ್ನು ಕೆಲವರು ಬಿಸಿಲಿನಲ್ಲಿ ನಿಂತು ಕಾಯುವಂತೆ ಮಾಡಿದ್ದಕ್ಕೆ ಅಧಿಕಾರಿಗಳ ವಿರುದ್ಧ ಅಸಮಾಧಾನಗೊಂಡರು. ಈ ವೇಳೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ನಿರಾಸೆಯಿಂದಾಗಿ ವಾಪಸ್ಸಾದವರು ಹೆದ್ದಾರಿಯಲ್ಲಿ ಬಂಡೆಗಲ್ಲುಗಳ ಮೇಲೆ ನಿಂತು, ನೌಕಾನೆಲೆಯ ಕಾಂಪೌಂಡ್ ಗೋಡೆಯಿಂದ ವಿಕ್ರಮಾದಿತ್ಯ ವೀಕ್ಷಿಸಿದರು.