ಮನೆ ಕಳೆದುಕೊಂಡವರಿಗೆ ಕೂಡಲೇ ಪರಿಹಾರ: ಸಿಎಂ ಬೊಮ್ಮಾಯಿ ಭರವಸೆ
ಕಾರವಾರ, ಜುಲೈ 29: "ಪಶ್ಚಿಮ ಘಟ್ಟ ಬಹಳ ಸೂಕ್ಷ್ಮವಾದ ಪ್ರದೇಶವಾಗಿದ್ದು, ತುಂಬಾ ಮಳೆ ಬೀಳುವ ಪ್ರದೇಶ ಕೂಡ ಹೌದು. ಇಲ್ಲಿನ ಮಣ್ಣು ಬಹಳ ಬೇಗ ಕುಸಿತಕ್ಕೆ ಒಳಗಾಗುತ್ತಿದೆ. ಮನೆ ಕಳೆದುಕೊಂಡವರಿಗೆ ಈ ಕೂಡಲೇ ಪರಿಹಾರ ನೀಡಲಾಗುವುದು,'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.
Recommended Video
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ವಿವಿಧೆಡೆ ಪ್ರವಾಹ ಪೀಡಿತ ಸ್ಥಳಗಳ ವೀಕ್ಷಣೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಶಿರಸಿ, ಯಲ್ಲಾಪುರ ಸೇರಿದಂತೆ ಹಲವೆಡೆ ಬಹಳಷ್ಟು ಹಾನಿಯಾಗಿದೆ. ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿದ್ದೇನೆ. ಗುಳ್ಳಾಪುರ ಸೇತುವೆ ಕುಸಿತ ತುಂಬಾ ಭಯಾನಕವಾಗಿದೆ. ರಾಜ್ಯ ಮಟ್ಟದಲ್ಲಿ ಸೇತುವೆಯ ಬಗ್ಗೆ ಚರ್ಚಿಸಲಾಗುವುದು. ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು,'' ಎಂದರು.
"ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಿಂದ ಹಲವೆಡೆ ಗುಡ್ಡ ಕುಸಿತವಾಗಿ ನದಿ ನೀರು ನುಗ್ಗಿ ಹಾನಿಯಾಗಿದೆ. ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಪರಿಹಾರ ನೀಡುವ ಬಗ್ಗೆ ನಿರ್ಧರಿಸಲಿದ್ದೇನೆ. ಕೇಂದ್ರದಿಂದ ಈಗಾಗಲೇ 695 ಕೋಟಿ ಹಣ ಬಂದಿದೆ. ಜಿಲ್ಲಾಧಿಕಾರಿ ನಿಧಿಯಲ್ಲಿ ಪರಿಹಾರದ ಹಣವಿದ್ದು, ಅದನ್ನು ಸೂಕ್ತವಾಗಿ ಬಳಕೆ ಮಾಡಿಕೊಳ್ಳುತ್ತೇವೆ,'' ಎಂದರು.

ವಿವಿಧೆಡೆ ಭೇಟಿ, ಪರಿಶೀಲನೆ
ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗುಡ್ಡ ಕುಸಿತದಿಂದ ಹಾನಿಗೊಳಗಾಗಿರುವ ಕಳಚೆ ಗ್ರಾಮ, ನಂತರ ಅರಬೈಲು ಘಟ್ಟ ಹಾಗೂ ಗುಳ್ಳಾಪುರ ಸೇತುವೆ ವೀಕ್ಷಣೆ ಮಾಡಿದರು.

ಗುಳ್ಳಾಪುರ ಸೇತುವೆ ಕುಸಿತ ವೀಕ್ಷಣೆಗೆ ತೆರಳುವ ಮುನ್ನ ಆ್ಯಂಟಿ ಸಪೋರ್ಟಿಂಗ್ ಚೆಕ್ ಟೀಮ್ನಿಂದ ಸ್ಥಳ ಪರಿಶೀಲನೆ ನಡೆಸಲಾಯಿತು. ಬಾಂಬ್ ಸ್ಕ್ವಾಡ್ ಟೀಮ್ನಿಂದ ಕೂಡ ಸೇತುವೆ ಪ್ರದೇಶವನ್ನು ಪರಿಶೀಲಿಸಿ, ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು.

ಪ್ರವಾಹದ ಹೊಡೆತಕ್ಕೆ ಮಧ್ಯದಲ್ಲಿಯೇ ಯಲ್ಲಾಪುರ ತಾಲೂಕಿನ ಗುಳ್ಳಾಪುರ ಸೇತುವೆ ಕುಸಿದು ಬಿದ್ದಿತ್ತು. ಅರಬೈಲು ಘಟ್ಟ ಪ್ರದೇಶದಲ್ಲಿ ಸುಮಾರು 10ಕ್ಕೂ ಅಧಿಕ ಕಡೆ ಗುಡ್ಡ ಕುಸಿತಗೊಂಡು ರಾಷ್ಟ್ರೀಯ ಹೆದ್ದಾರಿ 63ರ ಸಂಚಾರ ವ್ಯತ್ಯಯಗೊಂಡಿತ್ತು. ಹೀಗಾಗಿ ಇಲ್ಲಿ ಹೆದ್ದಾರಿಯ ಶಾಶ್ವತ ಕಾಮಗಾರಿಗೆ ಸುಮಾರು 70 ಕೋಟಿಗೂ ಅಧಿಕ ಅನುದಾನಕ್ಕಾಗಿ ಹೆದ್ದಾರಿ ಪ್ರಾಧಿಕಾರ ಪ್ರಸ್ತಾವ ಸಲ್ಲಿಸಿದೆ ಎನ್ನಲಾಗಿದೆ.












Click it and Unblock the Notifications