ರಾಹುಲ್ ಗಾಂಧಿ ರಾಜ್ಯ ಪ್ರವಾಸದ ಖರ್ಚು ನನ್ನದು; ಈಶ್ವರಪ್ಪ
ಕಾರವಾರ, ಏಪ್ರಿಲ್ 04; " ರಾಹುಲ್ ಗಾಂಧಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೂ ಬರಬೇಕು. ರಾಜ್ಯದ ಎಲ್ಲಾ ಕ್ಷೇತ್ರಗಳಿಗೆ ಅವರು ಬರುವುದಾದರೆ ಅದರ ಖರ್ಚನ್ನು ನಾನೇ ವಹಿಸಿಕೊಳ್ಳುತ್ತೇನೆ" ಎಂದು ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ಕುಮಟಾ ತಾಲೂಕಿನ ಗೋಕರ್ಣ ಬಳಿಯ ಮಾದನಗೇರಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ. ಎಸ್. ಈಶ್ವರಪ್ಪ, "ರಾಹುಲ್ ಗಾಂಧಿ ಎಲ್ಲೆಲ್ಲಿ ಕಾಲಿಟ್ಟಿದ್ದಾರೋ ಅಲ್ಲೆಲ್ಲ ಕಾಂಗ್ರೆಸ್ ನಿರ್ನಾಮವಾಗಿದೆ" ಎಂದು ವ್ಯಂಗ್ಯವಾಡಿದರು.
"ಬಿಜೆಪಿ ಅಧಿಕಾರಕ್ಕೆ ಬರಲು ತ್ರಿಮೂರ್ತಿಗಳು (ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಎಚ್. ಡಿ. ಕುಮಾರಸ್ವಾಮಿ) ಸಾಕು. ರಾಜ್ಯದಲ್ಲಿ ಧರ್ಮ ರಕ್ಷಣೆಯ ಸರ್ಕಾರ ಬರಬೇಕು ಎಂದು ಈ ಮೂವರು ಬಂದಿದ್ದಾರೆ. ಅವರ ಪ್ರಯತ್ನ ಮುಂದಿನ ಚುನಾವಣೆಯಲ್ಲಿ ಯಶಸ್ವಿಯಾಗುತ್ತದೆ" ಎಂದರು.

"ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಅದರ ಪರಿಣಾಮವನ್ನು ಸ್ವಲ್ಪ ಕಾದು ನೋಡಿ. ಅವರು ಬಂದು ಹೋಗಿದ್ದಾರೆ ಎಂದರೆ ಕಾಂಗ್ರೆಸ್ ಪಕ್ಷದವರಿಗೆ ಎದೆ ಹೊಡೆದುಕೊಳ್ಳುತ್ತಿರುತ್ತದೆ" ಎಂದು ಈಶ್ವರಪ್ಪ ಹೇಳಿದರು.
"ಕಾಂಗ್ರೆಸ್ ಪಕ್ಷದವರು ಅಲ್ಲಾಹುವನ್ನು ಮರೆತರು. ಏಸುಕ್ರಿಸ್ತನನ್ನೂ ಮರೆತರು. ಈಗ ಬುದ್ಧ, ಬಸವ, ಅಂಬೇಡ್ಕರ್ ನೆಪ ಶುರು ಮಾಡಿದ್ದಾರೆ. ಭಗವಂತೆ ಅವರಿಗೆ ಒಳ್ಳೆಯದು ಮಾಡಲಿ. ಈ ನೆಪದಲ್ಲಾದರೂ ಕಾಂಗ್ರೆಸ್ನವರು ಅವರ ತತ್ವಗಳನ್ನು ಮೈಗೂಡಿಸಿಕೊಳ್ಳಲಿ" ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ಎದುರು ಹಾಕಿಕೊಳ್ಳಲು ತಾಕತ್ತಿಲ್ಲ; ಹಿಜಾಬ್ ವಿವಾದವನ್ನು ಬಿಜೆಪಿ ಶುರು ಮಾಡಿದೆ ಎಂಬ ಕಾಂಗ್ರೆಸ್, ಎಚ್. ಡಿ. ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, "ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಎಚ್. ಡಿ. ಕುಮಾರಸ್ವಾಮಿ ಅವರಿಗೆ ಮುಸ್ಲಿಂಮರನ್ನು ಎದುರು ಹಾಕಿಕೊಳ್ಳಲು ತಾಕತ್ತಿಲ್ಲ ಅಥವ ತಾಕತ್ತಿದ್ದರೂ ಅವರ ವೋಟ್ ಕಳೆದುಕೊಳ್ಳಲು ತಯಾರಿಲ್ಲ" ಎಂದು ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
"ಹಿಜಾಬ್ ಹಾಕಿಕೊಂಡು ಹೋಗದ 6 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಳ್ಳೋಕೆ ಪ್ರಾರಂಭಿಸಿದರು. ಹಿಜಾಬ್ ಹಾಕಿಕೊಳ್ಳಲು ಬಿಜೆಪಿಯಂತೂ ಹೇಳಿಲ್ಲ. ಆದರೆ ಅವರಿಗೆ ಕಾಂಗ್ರೆಸ್, ಎಸ್ಡಿಪಿಐ ಅಥವಾ ಪಿಎಫ್ಐನ ಯಾರೋ ಸ್ಫೂರ್ತಿ ಕೊಟ್ಟಿದ್ದರು. ಮುಸ್ಲಿಂ ಲೀಡರ್ ಆಗಲು ಹೊರಟಿರುವ ಸಿದ್ಧರಾಮಯ್ಯ, ಡಿ. ಕೆ. ಶಿವಕುಮಾರ್, ಕುಮಾರಸ್ವಾಮಿ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಧರಿಸಲು ಯಾಕೆ ಹೇಳಿಲ್ಲ?" ಎಂದು ಈಶ್ವರಪ್ಪ ಪ್ರಶ್ನಿಸಿದರು.
"ಕೋರ್ಟ್ ಮಧ್ಯಂತರ ಆದೇಶವಿದ್ದಾಗ ಎಸ್ಡಿಪಿಐ, ಪಿಎಫ್ಐ, ಎಸ್ಎಫ್ಐನವರು ಸಂವಿಧಾನದ ವಿರುದ್ಧವೇ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ನಡೆಸಿದವರನ್ನು ಅರೆಸ್ಟ್ ಮಾಡಿ, ಕೋರ್ಟ್ ಆದೇಶ ಉಲ್ಲಂಘಿಸಿ ಹಿಜಾಬ್ ಹಾಕಿದವರ ವಿರುದ್ಧ ಕ್ರಮಕ್ಕೆ ಸಿದ್ಧರಾಮಯ್ಯ ಹೇಳಬೇಕಿತ್ತು, ಆದರೆ ಹೇಳಿಲ್ಲ. ಕೋರ್ಟ್ ಆದೇಶ ಉಲ್ಲಂಘನೆ ಮಾಡಿರುವ ಸಿದ್ಧರಾಮಯ್ಯ, ಡಿ. ಕೆ. ಶಿವಕುಮಾರ್, ಕುಮಾರಸ್ವಾಮಿ ಕ್ಷಮೆ ಕೇಳಬೇಕು. ಮುಸಲ್ಮಾನರಿಗೆ ತೃಪ್ತಿಪಡಿಸಲು ಅವರು ಮಾಡಿದ್ದ ಪ್ರತಿಭಟನೆ ಪರವಾಗಿ ವಿಧಾನಸೌಧದಲ್ಲಿ ಮಾತನಾಡಿದ್ದರು. ಇವತ್ತು ಮುಸಲ್ಮಾನರಿಗೆ ತೊಂದರೆಯಾಗಿದ್ದರೆ ಅದು ದೇಶಪ್ರೇಮಿ ಮುಸಲ್ಮಾನರಿಂದಲ್ಲ. ದೇಶದ್ರೋಹಿ ಮುಸಲ್ಮಾನರಿಂದ" ಎಂದರು.
ಮಸೀದಿ ಮೈಕ್ ವಿವಾದ; "ಮುಸ್ಲಿಂ ಸಮಾಜವನ್ನು ಒಪ್ಪಿಸಿ ಮಸೀದಿಗಳಲ್ಲಿನ ಧ್ಚನಿವರ್ಧಕಗಳನ್ನ ತೆರವು ಮಾಡಬೇಕಿದೆ. ಅವರು ಮಸೀದಿಗಳಲ್ಲಿ ಜೋರಾಗಿ ಕೂಗುತ್ತಾರೆ ಎಂದು ನಾವು ಹನುಮಾನ್ ಚಾಲೀಸಾ ಮೈಕಿನಲ್ಲಿ ಹಾಕಲು ಸ್ಪರ್ಧೆ ಮಾಡಬಾರದು" ಎಂದು ಕೆ. ಎಸ್. ಈಶ್ವರಪ್ಪ ಹೇಳಿದರು.
"ಮುಂಚೆಯಿಂದಲೂ ಬಂದಂತಹ ಪದ್ಧತಿಯ ಮೂಲಕ ದೇವರ ಪ್ರಾರ್ಥನೆ ಮಾಡುತ್ತೇವೆ ಎಂದು ಅವರು ಹೇಳುತ್ತಾರೆ. ಆದರೆ ಈ ಧ್ವನಿವರ್ಧಕಗಳಿಂದ ಅವರ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗುತ್ತಿದೆ. ಮಸೀದಿಯಲ್ಲಿ ಕೂಗುವುದರಿಂದ ವಿದ್ಯಾರ್ಥಿಗಳಿಗೆ, ವೃದ್ಧರಿಗೆ ತೊಂದರೆಯಾಗುತ್ತಿದೆ ಎನ್ನುವುದನ್ನು ಬಹಳ ವರ್ಷಗಳಿಂದ ಕೇಳುತ್ತಿದ್ದೇವೆ" ಎಂದರು.
"ಮಸೀದಿ, ದೇವಸ್ಥಾನ, ಚರ್ಚ್ಗಳಲ್ಲಿ ಜೋರಾಗಿ ಮೈಕ್ ಹಾಕಲಾರಂಭಿಸಿದರೆ ಧರ್ಮಗಳ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಈ ಕಾರಣದಿಂದ ಮುಸ್ಲಿಂ ಸಮುದಾಯದ ಮುಖಂಡರೇ ಈ ಬಗ್ಗೆ ಚಿಂತನೆ ಮಾಡಿ ನಿರ್ಧರಿಸಬೇಕು. ದೇವಸ್ಥಾನ, ಚರ್ಚ್ಗಳಲ್ಲಿರೋ ಹಾಗೆ ಇತರರಿಗೆ ತೊಂದರೆಯಾಗದಂತೆ ಧ್ಚನಿವರ್ಧಕ ಮಸೀದಿಯೊಳಗೆ ಮಾತ್ರ ಕೇಳುವಂತೆ ಮಾಡಿದರೆ ಸೂಕ್ತ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.












Click it and Unblock the Notifications