ನೆಲೆ ಕಳೆದುಕೊಳ್ಳುವ ಆತಂಕದಲ್ಲಿ ಕಾರವಾರದ ಮೀನುಗಾರರು!
ಕಾರವಾರ, ಜೂನ್ 7: ನೂರಾರು ಮೀನುಗಾರರು ಮೀನುಗಾರಿಕೆ ನಡೆಸಿದ ಬಳಿಕ ಬಲೆ, ಬೋಟ್ ಇಡಲು ಬಳಸಿಕೊಳ್ಳುತ್ತಿದ್ದ ಪ್ರದೇಶವನ್ನು ಇದೀಗ ಕಾರವಾರ ನಗರಸಭೆ ತಮ್ಮ ವಶಕ್ಕೆ ಪಡೆಯಲು ಮುಂದಾಗಿದೆ. ಮೀನುಗಾರಿಕೆಗೆ ಆಧಾರವಾಗಿರುವ ಪ್ರದೇಶದಲ್ಲಿ ಸಿಆರ್ಜೆಡ್ ನಿಯಮ ಉಲ್ಲಂಘಿಸಿ ಪಾರ್ಕ್ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಕಾರವಾರ ತಾಲ್ಲೂಕಿನ ಸುಂಕೇರಿ ಕಡವಾಡ ಗ್ರಾಮವನ್ನು ಸಂಪರ್ಕಿಸುವ ಸೇತುವೆಯ ಬಳಿ ನಗರಸಭೆ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ಕಾಳಿ ನದಿ ತೀರದಲ್ಲಿರುವ ಈ ಪ್ರದೇಶದಲ್ಲಿ ಹಿಂದಿನಿಂದಲೂ ನೂರಾರು ಮಂದಿ ಮೀನುಗಾರರು ಸಾಂಪ್ರದಾಯಿಕ ಮೀನುಗಾರಿಕೆಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಸೇತುವೆ ಪಕ್ಕದಲ್ಲೇ ತಮ್ಮ ಬೋಟುಗಳನ್ನು ಇರಿಸಿ ಕೊಂಡೊಯ್ದು ಮೀನು ಹಿಡಿದು ತಂದು ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.
ಕರಾವಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ 2 ತಿಂಗಳು ನಿಷೇಧ
ಆದರೆ ಇದೀಗ ಇದೇ ಪ್ರದೇಶದಲ್ಲಿ ನಗರಸಭೆಯಿಂದ ಪಾರ್ಕ್ ನಿರ್ಮಾಣ ಮಾಡಲು ಮುಂದಾಗಿದ್ದು, ಸದ್ದಿಲ್ಲದೇ ಕಾಮಗಾರಿ ನಡೆಸಲಾಗುತ್ತಿದೆ. ನದಿ ಪಾತ್ರದಲ್ಲಿ ಪಿಚ್ಚಿಂಗ್ ಹಾಕಿ ಮಣ್ಣು ಸುರಿದು ಕಟ್ಟೆ ನಿರ್ಮಿಸಿದ್ದು ಕಾಮಗಾರಿಗಾಗಿ ಬೃಹದಾಕಾರದ ಕಲ್ಲುಗಳನ್ನು ಸಹ ತಂದು ಸುರಿಯಲಾಗಿದೆ. ಪರಿಣಾಮ ಮೀನುಗಾರಿಕೆಗೆ ತೆರಳಲು ಬೋಟು ಇಳಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿ, ಮೀನುಗಾರರು ಸಂಕಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಪಾರ್ಕ್ ನಿರ್ಮಾಣ ಕಾರ್ಯವನ್ನ ಕೈಬಿಡಬೇಕು ಎಂದು ಮೀನುಗಾರರಾದ ಒತ್ತಾಯಿಸಿದ್ದಾರೆ.
ಇನ್ನು ನಗರಸಭೆ ಸುಂಕೇರಿ ಸೇತುವೆ ಬಳಿ ಪಾರ್ಕ್ ಕಾಮಗಾರಿ ನಡೆಸುವ ಪ್ರದೇಶದಲ್ಲಿ ಸಂಪೂರ್ಣವಾಗಿ ಸಿಆರ್ಝಡ್ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಕರಾವಳಿ ನಿಯಂತ್ರಣ ವಲಯದ ನಿಯಮದ ಪ್ರಕಾರ ಕರಾವಳಿ ಭಾಗದಲ್ಲಿ ಸಮುದ್ರ ಮತ್ತು ನದಿತೀರ ಪ್ರದೇಶದಲ್ಲಿ ನಿಗದಿತ ವ್ಯಾಪ್ತಿಯಲ್ಲಿ ಹೊಸದಾಗಿ ಯಾವುದೇ ಕಾಮಗಾರಿಗಳನ್ನು ನಡೆಸುವಂತಿಲ್ಲ. ಆದರೆ ನಗರಸಭೆ ಆ ನಿಯಮವನ್ನು ಉಲ್ಲಂಘನೆ ಮಾಡಿ ಕೆಲಸ ನಡೆಸುತ್ತಿದೆ ಎಂದು ಸ್ಥಳೀಯರಾದ ಪ್ರಕಾಶ್ ಭೋವಿ ಆರೋಪಿಸಿದ್ದಾರೆ.
ಸ್ವಾತಂತ್ರ ಬಂದು 7 ದಶಕ ಕಳೆದರೂ ರಸ್ತೆ ಭಾಗ್ಯ ಕಾಣದ ಕುಮಟಾದ ಈ ಗ್ರಾಮ!
ಇನ್ನು ಮ್ಯಾಂಗ್ರೋವ್ ಗಿಡಗಳು ಕಾಳಿ ನದಿ ತಟದಲ್ಲಿ ಬಹಳ ಸೊಂಪಾಗಿ ಬೆಳೆಯುತ್ತವೆ. ಅವುಗಳ ಮೇಲೆ ಮಣ್ಣನ್ನು ಹಾಕಿ ಕಾಳಿ ನದಿ ಹರಿವಿಗೂ ಅಡ್ಡಿಪಡಿಸಲಾಗಿದೆ. ಮಣ್ಣು ಮುಚ್ಚಿದ್ದರಿಂದ ಮಳೆಗಾಲದಲ್ಲಿ ನೆರೆಯುಂಟಾಗುವ ಸಾಧ್ಯತೆ ಇದೆ. ಅಲ್ಲದೇ ಕಾಮಗಾರಿ ಪ್ರದೇಶದಲ್ಲೇ ತ್ಯಾಜ್ಯವನ್ನು ಸಹ ತಂದು ಸುರಿಯಲಾಗಿದ್ದು ಮೀನುಗಾರರನ್ನು ಒಕ್ಕಲೆಬ್ಬಿಸುವ ಉದ್ದೇಶದಿಂದಲೇ ಈ ರೀತಿ ಮಾಡಲಾಗುತ್ತಿದ್ದು ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂಬುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.
ಒಟ್ಟಾರೇ ನಿಯಮಗಳನ್ನು ಪಾಲಿಸಬೇಕಾದ ನಗರಸಭೆಯೇ ಕಾನೂನನ್ನು ಉಲ್ಲಂಘಿಸಿ ಪಾರ್ಕ್ ನಿರ್ಮಾಣಕ್ಕೆ ಮುಂದಾಗಿರುವುದು ತೀವ್ರ ವಿರೋಧಕ್ಕೆ ಗುರಿಯಾಗಿದೆ. ಅಲ್ಲದೇ ಮೀನುಗಾರಿಕೆ ನಡೆಸುವ ಪ್ರದೇಶದಲ್ಲೇ ಕಾಮಗಾರಿಗೆ ಮುಂದಾಗಿರೋದು ಮೀನುಗಾರಿಕೆ ನಂಬಿಕೊಂಡಿರುವವರಿಗೆ ಅಡ್ಡಿಯಾಗಿದ್ದು ಈ ಬಗ್ಗೆ ಸಂಬಂಧಪಟ್ಟವರು ಗಮನಹರಿಸಿ ಕಾಮಗಾರಿ ಕುರಿತು ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕಿದೆ.